ಬೆಂಗಳೂರಲ್ಲಿನ್ನು ಪುಕ್ಕಟೆ ಫ್ಲೆಕ್ಸ್ ಕಾಣುವಂತಿಲ್ಲ
ಬೆಂಗಳೂರು, ಆ, 21 : ಅನಧಿಕೃತ ಫ್ಲೆಕ್ಸ್, ಬ್ಯಾನರ್ಗಳನ್ನು ಗಡುವಿನ ಅವಧಿಯೊಳಗೆ ತೆರವುಗೊಳಿಸಲು ವಿಫಲವಾಗಿರುವ ಬಿಬಿಎಂಪಿ ವಿರುದ್ಧ ಉಪ ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಿಂಗಳೊಳಗೆ ಅನಧಿಕೃತ ಫ್ಲೆಕ್ಸ್ ತೆರವು ಮಾಡಲು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ನಗರದಲ್ಲಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಜಾಹೀರಾತು ಫಲಕಗಳನ್ನು ತೆರವು ಮಾಡಿ ಆಗಸ್ಟ್ 20ಕ್ಕೆ ವರದಿ ನೀಡುವಂತೆ ಉಪಲೋಕಾಯುಕ್ತ ಸುಭಾಷ್ ಬಿ.ಅಡಿ ಸೂಚನೆ ನೀಡಿದ್ದರು. ಅದರಂತೆ ಪಾಲಿಕೆ ಹೆಚ್ಚುವರಿ ಆಯುಕ್ತ(ಜಾಹೀರಾತು) ಹೇಮಾಜಿ ನಾಯಕ್ ವರದಿ ಸಲ್ಲಿಸಿದ್ದರು. ಒಟ್ಟು 14,720 ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು ಮಾಡಿರುವುದಾಗಿ ಮಾಹಿತಿ ನೀಡಿದ್ದರು.
ಆದರೆ ಮಹಾನಗರದ ಹಲವು ಕಡೆ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಗೆ ಇವೆ. ಈ ಬಗ್ಗೆ ಪಾಲಿಕೆ ಎಂಟು ವಲಯಗಳ ಜಂಟಿ ಆಯುಕ್ತರಿಗೆ ಮತ್ತು ನಗರ ಪೊಲೀಸ್ ಆಯುಕ್ತರಿಗೆ ನೊಟೀಸ್ ನೀಡಲಾಗುವುದು ಎಂದರು. (ಜಾಹೀರಾತು ಏಜೆನ್ಸಿಗಳಿಗೆ ಮಣೆ ಹಾಕಿತೆ ಬಿಬಿಎಂಪಿ?)
ಆದರೆ ಫ್ಲೆಕ್ಸ್ ತೆರವು ಕಾರ್ಯಾಚರಣೆಗೆ ಅನೇಕ ಅಡೆತಡೆಗಳಿವೆ. ಹಾಗಾಗಿ ಕಾಲಾವಕಾಶ ಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಲೋಕಾಯುಕ್ತರು ಒಂದು ತಿಂಗಳು ಅವಧಿಯೊಳಗೆ ಎಲ್ಲ ಕೆಲಸ ಮುಗಿಸಬೇಕು. ಇಲ್ಲವೇ ಫಲಕದಲ್ಲಿರುವ ವ್ಯಕ್ತಿಗಳ ವಿರುದ್ಧವೇ ಪ್ರಕರಣ ದಾಖಲಿಸಬೇಕು ಎಂದು ತಿಳಿಸಿದರು.
ಸಿಬ್ಬಂದಿ ಕೊರತೆ, ಒತ್ತಡ, ತೆರವು ಕಾರ್ಯಾಚರಣೆ ಸಮರ್ಪಕ ಮಾರ್ಗದರ್ಶಿ ಕೊರತೆ ಕೆಲಸ ಹಿಂದೆ ಬೀಳಲು ಕಾರಣವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.
ಕಾಲಮಿತಿಯೊಳಗೆ ಬ್ಯಾನರ್ ತೆರವುಗೊಳಿಸಿ. ಇಲ್ಲವಾದರೆ ನಿಮ್ಮ ಮೇಲೆ ಕರ್ತವ್ಯ ಲೋಪದಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪಲೋಕಾಯುಕ್ತ, ಸುಭಾಷ್ ಬಿ.ಅಡಿ ಎಚ್ಚರಿಸಿದರು.