ಸೇತುವೆಯಿಂದ ಹಾರಿದ ಕಾರು: ಬೆಂಗಳೂರಿನ 3 ಸಾವು
ಬೆಂಗಳೂರು, ಏ.19: ಗೋವಾ ಪ್ರವಾಸಕ್ಕೆಂದು ಕಾರಿನಲ್ಲಿ ಹೋಗಿದ್ದ ಯುವಕರು ಮರಳಿ ಬೆಂಗಳೂರಿಗೆ ಬರುತ್ತಿದ್ದಾಗ ಹಿರಿಯೂರು ಬಳಿ ಇಂದು ಬೆಳಗ್ಗೆ ಅಪಘಾತಕ್ಕೀಡಾಗಿ ಮೂವರು ಮೃತಪಟ್ಟಿದ್ದಾರೆ. ಕಾರು ಅಪಘಾತಕ್ಕೀಡಾಗಿ ಹಿರಿಯೂರು ಬಳಿ ಹೆದ್ದಾರಿಯಲ್ಲಿನ ಸೇತುವೆಯಿಂದ ಕೆಳಗುರುಳಿದಾಗ ಕಾರಿನಲ್ಲಿದ್ದ 5 ಯುವಕರ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು ಯಲಹಂಕ ಬಳಿಯ ನ್ಯಾಯಾಂಗ ಬಡಾವಣೆಯ ಚೇತನ್, ಚಂದ್ರ ಹಾಗೂ ರವಿಚಂದ್ರ ಸ್ಥಳದಲ್ಲೇ ಅಸುನೀಗಿದ ದುರ್ದೈವಿಗಳು. ಶರತ್ ಮತ್ತು ಪವನ್ ಎಂಬಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರವಾಸ ಮುಗಿಸಿ ವಾಪಸಾಗುತ್ತಿದ್ದಾಗ ಚೇತನ್ ಇಂದು ಬೆಳಗ್ಗೆ ಬೇಗನೇ ಜಿಮ್ ತೆರೆಯಬೇಕೆಂದು ಆತುರಕ್ಕೆ ಬಿದ್ದಿದ್ದಾರೆ. ಹಾಗಾಗಿ ಕಾರನ್ನು ತುಸು ವೇಗವಾಗಿಯೇ ಓಡಿಸಿದ್ದಾರೆ. ಬೆಳಗ್ಗೆ 7 ಗಂಟೆಯ ವೇಳೆಯಲ್ಲಿ ಹಿರಿಯೂರು ಬಳಿ ಹೆದ್ದಾರಿಯಲ್ಲಿ ವಿವಿ ಕ್ರಾಸ್ ಬಳಿ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಕಾರು ಸೇತುವೆಯಿಂದ ಸೀದಾ ಕೆಳಕ್ಕೆ ಬಿದ್ದಿದೆ, ಅಷ್ಟೇ. ಮೂವರ ಪ್ರಾಣ ಪಕ್ಷಿ ಹಾರಿದೆ. ಇಬ್ಬರು ಅದು ಹೇಗೋ ಬಚಾವಾಗಿದ್ದಾರೆ.
ಚೇತನ್, ಚಿತ್ರನಟ ರವಿಶಂಕರ್ ಅವರ ಬಳಿ ಸಹ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಚೇತನ್, ಪ್ರವಾಸಕ್ಕೆಂದು ಗೆಳೆಯನಿಂದ ಕಾರನ್ನು ಪಡೆದಿದ್ದರು ಎಂದು ಪ್ರಾಥಮಿಕ ತನಿಖೆ ನಡೆಸಿದ ಹಿರಿಯೂರು ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.