ಬಿಬಿಎಂಪಿ ಆದಾಯ ಸಂಗ್ರಹಕ್ಕೆ ವಿಶೇಷ ಅಧಿಕಾರಿ ನೇಮಿಸಿ
ಬೆಂಗಳೂರು,ಜು.31: ಆದಾಯ ವೃದ್ಧಿಸಲು ನಾನಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತಿರುವ ಬಿಬಿಎಂಪಿ ಇದೀಗ ತೆರಿಗೆ ಸಂಗ್ರಹಕ್ಕೆ ವಿಶೇಷ ಅಧಿಕಾರಿಯನ್ನು ನೇಮಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಬಿಬಿಎಂಪಿ ಆಯುಕ್ತ ಎಂ ಲಕ್ಷ್ಮೀನಾರಾಯಣ ಹೇಳಿದ್ದಾರೆ.
ಬುಧವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಬಿಎಂಪಿ ಸದಸ್ಯ ಎನ್ ಆರ್ ರಮೇಶ್, ಐಟಿ ನಗರವೆಂದು ಪ್ರಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಕೇವಲ 112 ಬೃಹತ್ ಐಟಿಬಿಟಿ ಕಂಪೆನಿಗಳಿವೆ ಎಂದು ಅಧಿಕಾರಿಗಳುಮಾಹಿತಿ ನೀಡಿದ್ದಾರೆ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಐಟಿ,ಬಿಟಿ, ಬಿಪಿಒ ಸೇರಿ ಒಟ್ಟು 3,758 ಕಂಪೆನಿಗಳಿವೆ. ಈ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ ಎಂದು ಹೇಳಿ ತಾವು ಸಂಗ್ರಹಿಸಿದ ಕಂಪೆನಿಗಳ ಮಾಹಿತಿಯನ್ನು ಆಯುಕ್ತರಿಗೆ ನೀಡಿದರು.
ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು 112 ಬೃಹತ್ ಐಟಿಬಿಟಿ ಕಂಪೆನಿಗಳಿಗೆ ವಸತಿಯೇತರ ತೆರಿಗೆ ವಿಧಿಸುತ್ತಿದ್ದಾರೆ, ಉಳಿದ ಕಂಪೆನಿಗಳಿಗೆ ವಸತಿ ತೆರಿಗೆ ವಿಧಿಸುತ್ತಿದ್ದು ಇದರಿಂದಾಗಿ ಪಾಲಿಕೆಗೆ ವಾರ್ಷಿಕ 800 ಕೋಟಿ ರೂ. ನಷ್ಟ ಉಂಟಾಗುತ್ತಿದೆ. ಇವೆಷ್ಟೆ ಅಲ್ಲದೇ ಬಿಬಿಎಂಪಿಗೆ ವಿವಿಧ ಮೂಲಗಳಿಂದ ಆದಾಯ ಬರಬೇಕಿದೆ. ಹೀಗಾಗಿ ಬಿಬಿಎಂಪಿಯ ಘನ ತಾಜ್ಯ ವಿಲೆವಾರಿಗೆ ಸರ್ಕಾರದಿಂದ ದರ್ಪಣ್ ಜೈನ್ ಅವರನ್ನು ವಿಶೇಷ ಆಯುಕ್ತರನ್ನಾಗಿ ನೇಮಿಸಿದಂತೆ ಆದಾಯ ಸಂಗ್ರಹಿಸಲು ಐಎಎಸ್ ಶ್ರೇಣಿಯ ಅಧಿಕಾರಿಯನ್ನು ನೇಮಿಸಬೇಕೆಂದು ಒತ್ತಾಯಿಸಿದರು.
ಇದಕ್ಕೆ ಆಯುಕ್ತರು ಉತ್ತರ ನೀಡಿ ರಮೇಶ್ ಅವರು ನೀಡಿರುವ ಎಲ್ಲಾ ಕಂಪೆನಿಗಳ ಕಚೇರಿ ವಿಳಾಸವನ್ನು ಪರಿಶೀಲಿಸುವಂತೆ ಕಂದಾಯ ವಿಭಾಗದ ಅಧಿಕಾರಿಗಳಿಗೆ ಆದೇಶ ನೀಡುತ್ತೇನೆ. ಪ್ರತ್ಯೇಕ ಐಎಎಸ್ ಶ್ರೇಣಿಯ ಅಧಿಕಾರಿ ನೇಮಿಸುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಅವರು ಹೇಳಿದರು.