ಫ್ಲೆಕ್ಸ್, ಬ್ಯಾನರ್ ಹಾಕಲು ಬಂತು ಮಾರ್ಗಸೂಚಿ
ಬೆಂಗಳೂರು, ಆ.16 : ಬೆಂಗಳೂರು ನಗರದ ಅಂದವನ್ನು ಹಾಳುಮಾಡುತ್ತಿರುವ ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಇರುವ ನಿಯಮಗಳನ್ನು ಸರಳಗೊಳಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಅನಧಿಕೃತ ಫ್ಲೆಕ್ಸ್, ಬ್ಯಾನರ್ ಆಳವಡಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೊಸ ಮಾರ್ಗಸೂಚಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಫ್ಲೆಕ್ಸ್, ಬ್ಯಾನರ್ ಆಳವಡಿಕೆ ಕುರಿತು ಹೊಸ ಮಾರ್ಗಸೂಚಿ ಹೊರಡಿಸಿರುವ ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಣ ಅವರು, ಈ ಕುರಿತು ಎಲ್ಲಾ ವಲಯಗಳ ಜಂಟಿ ಆಯುಕ್ತರು ಹಾಗೂ ಜಾಹೀರಾತು ವಿಭಾಗದ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. [ಅನಧಿಕೃತ ಬ್ಯಾನರ್ ಕಂಡುಬಂದಲ್ಲಿ ದೂರು ನೀಡಿ]
ಹೊಸ ಮಾರ್ಗಸೂಚಿ ಅನ್ವಯ ಎಲ್ಲ ವಲಯಗಳಿಗೆ ಏಕರೂಪದ ನಿಯಮ ಪಾಲನೆಯಾಗುತ್ತದೆ. ಫ್ಲೆಕ್ಸ್ ಅಳವಡಿಕೆಗೆ ವಲಯ ಮಟ್ಟದಲ್ಲೇ ಅನುಮತಿ ನೀಡುವ ಅವಕಾಶವನ್ನು ಮಾರ್ಗಸೂಚಿಯಲ್ಲಿ ಕಲ್ಪಿಸಲಾಗಿದೆ. ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪಾಲಿಕೆ ಆಯುಕ್ತ ಎಂ.ಲಕ್ಷ್ಮೀನಾರಾಯಣ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಾರ್ಗಸೂಚಿಯಲ್ಲೇನಿದೆ?
ಹೇಗೆ ಅನುಮತಿ ಪಡೆಯಬೇಕು?
ಹೊಸ ಮಾರ್ಗಸೂಚಿ ಅನ್ವಯ ನಿರ್ದಿಷ್ಟ ಅವಧಿಗೆ ಫ್ಲೆಕ್ಸ್, ಬ್ಯಾನರ್, ಬಟ್ಟೆ ಬ್ಯಾನರ್ ಅಳವಡಿಕೆಗಷ್ಟೇ ಲಿಖಿತ ಅನುಮತಿ ನೀಡಬೇಕು. ಭಿತ್ತಿಪತ್ರ ಅಂಟಿಸಲು ಅನುಮತಿ ನೀಡಬಾರದು. ಒಂದು ವಲಯ ಅಥವಾ ವಾರ್ಡ್ ವ್ಯಾಪ್ತಿಯಲ್ಲಿ ಅಳವಡಿಸಲು ಅರ್ಜಿ ಸಲ್ಲಿಸಿದರೆ ಆಯಾ ವಲಯ ಕಚೇರಿಯಲ್ಲೇ ಪರಿಶೀಲಿಸಿ ಜಂಟಿ ಆಯುಕ್ತರು ನಿಗದಿತ ಶುಲ್ಕ ಪಾವತಿಸಿಕೊಂಡು ಅನುಮತಿ ನೀಡಬೇಕು. ಒಂದಕ್ಕಿಂತ ಹೆಚ್ಚು ವಲಯ ಇಲ್ಲವೇ ಬೆಂಗಳೂರಿನ ಹಲವೆಡೆ ಅಳವಡಿಸುವುದಾದರೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅನುಮತಿ ಪಡೆಯಬೇಕು.
ಜಾಹೀರಾತು ಶುಲ್ಕ ಸಂಗ್ರಹ
ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಅನುಮತಿ ನೀಡುವಾಗ ನಿಗದಿಪಡಿಸಿರುವ ಶುಲ್ಕದೊಂದಿಗೆ ಒಂದು ಸಾವಿರ ರೂ. ಭದ್ರತಾ ಠೇವಣಿ ಹಾಗೂ ಜಾಹೀರಾತು ಶುಲ್ಕ ಸಂಗ್ರಹಿಸಬೇಕು. ಅನುಮತಿ ಪಡೆದ ಅವಧಿ ಮುಗಿದ 24 ಗಂಟೆಯೊಳಗೆ ತೆರವುಗೊಳಿಸಿದ್ದರೆ ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಂಡು ಪಾಲಿಕೆ ವತಿಯಿಂದ ತೆರವುಗೊಳಿಸಬೇಕು.
ಎಲ್ಲಿ ಅನುಮತಿ ನೀಡುವಂತಿಲ್ಲ
ವಿಧಾನಸೌಧ, ಹೈಕೋರ್ಟ್ ಒಳಗೊಂಡಂತೆ 'ಎ' ವಲಯದಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಅನುಮತಿ ನೀಡುವಂತಿಲ್ಲ. ಮರ, ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್ ಮೇಲೆ ಅಳವಡಿಸುವಂತಿಲ್ಲ. ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗುವ ರೀತಿಯಲ್ಲಿ ಫಲಕ ಅಳವಡಿಸುವಂತಿಲ್ಲ.
ಇಂತಹ ಫ್ಲೆಕ್ಸ್, ಬ್ಯಾನರ್ ಹಾಕುವಂತಿಲ್ಲ
ಸಂವಿಧಾನಬಾಹಿರವಾದ, ಅಶ್ಲೀಲ, ಕೋಮು ಗಲಭೆ ಉಂಟು ಮಾಡುವುದಕ್ಕೆ ಪ್ರಚೋದನೆ ನೀಡುವಂತಹ ಸಂದೇಶವಿರುವ ಫ್ಲೆಕ್ಸ್, ಬ್ಯಾನರ್ ಆಳವಡಿಕೆ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಪೊಲೀಸ್ ಠಾಣೆ ಮೆಟ್ಟಿಲು ಹತ್ತಬೇಕು
ಅನುಮತಿ ಪಡೆದ ಸಂಖ್ಯೆಗಿಂತ ಹೆಚ್ಚಿನ ಫ್ಲೆಕ್ಸ್, ಬ್ಯಾನರ್ ಅಳವಡಿಸುವಂತಿಲ್ಲ. ಹೀಗೆ ಆಳವಡಿಕೆ ಮಾಡಿದರೆ, ಅವುಗಳನ್ನು ತೆರವುಗೊಳಿಸಬೇಕು ಮತ್ತು ಆಳವಡಿಕೆ ಮಾಡಿದವರ ವಿರುದ್ಧ ಕರ್ನಾಟಕ ತೆರೆದ ಪ್ರದೇಶಗಳ ವಿರೂಪ ನಿಯಂತ್ರಣ ಕಾಯ್ದೆಯಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು.