ನೌಕರರ ಪ್ರತಿಭಟನೆ, ಸೋಮವಾರ ಬಿಬಿಎಂಪಿ ಬಂದ್
ಬೆಂಗಳೂರು, ಸೆ. 22 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೌಕರರು ಸೋಮವಾರ ಬಂದ್ಗೆ ಕರೆ ನೀಡಿದ್ದಾರೆ. ಆದ್ದರಿಂದ ಶಾಲೆ, ಕಾಲೇಜು, ಆಸ್ಪತ್ರೆ ಹೊರತು ಪಡಿಸಿ ಬಿಬಿಎಂಪಿಯ ಇತರ ಸೇವೆಗಳು ಸ್ಥಗಿತಗೊಳ್ಳಲಿವೆ.
ಕೆಎಎಸ್ ಶ್ರೇಣಿಯೇತರ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಬಿಎಂಪಿ ನೌಕರರು ಸೋಮವಾರ ಪಾಲಿಕೆ ಬಂದ್ಗೆ ಕರೆ ನೀಡಿದ್ದಾರೆ. ನೌಕರರು ಪಾಲಿಕೆ ಕೇಂದ್ರ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದರಿಂದ ಇಂದು ಪಾಲಿಕೆಯ ಎಲ್ಲಾ ಕೆಲಸಗಳು ಸ್ಥಗಿತಗೊಳ್ಳಲಿವೆ. [ಬಿಬಿಎಂಪಿ ಮೂರು ಭಾಗ?]
ಮಹಾನಗರ ಪಾಲಿಕೆ ಕೇಂದ್ರ ಕಚೇರಿ, ವಲಯವಾರು ಕಚೇರಿ ಮತ್ತು ವಾರ್ಡ್ ಮಟ್ಟದ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಜನರು ಇಂದು ತಮ್ಮ ಕೆಲಸಗಳಿಗಾಗಿ ಪಾಲಿಕೆ ಕಚೇರಿಯತ್ತ ತೆರಳದಿರುವುದು ಉತ್ತಮ. [ಗೋಡೆ ಕುಸಿದು 3 ಕಾರ್ಮಿಕರ ದುರ್ಮರಣ]
ಪೌರ ಕಾರ್ಮಿಕರು, ಆರೋಗ್ಯ ಅಧಿಕಾರಿಗಳು ಹಾಗೂ ಶಿಕ್ಷಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದ್ದರಿಂದ ಬಿಬಿಎಂಪಿಯ ಶಾಲೆ, ಆಸ್ಪತ್ರೆಗಳು ಎಂದಿನಂತೆ ತೆರೆದಿರುತ್ತವೆ. ಬೆಳಗ್ಗೆ 11 ಗಂಟೆಗೆ ಪಾಲಿಕೆ ಕಚೇರಿ ಮುಂದೆ ನೌಕರರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಸಂಧಾನ ಸಭೆ ವಿಫಲ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಂದ್ಗೆ ಕರೆ ನೀಡಿರುವ ನೌಕರರ ಸಂಘದ ಜೊತೆ ಮೇಯರ್ ಎನ್.ಶಾಂತಕುಮಾರಿ ನಡೆಸಿದ ಮಾತುಕತೆ ವಿಫಲವಾಗಿದೆ. ಸಿಎಂ ಸಿದ್ದರಾಮಯ್ಯ ಜೊತೆ ಕೆಎಎಸ್ ಅಧಿಕಾರಿಗಳನ್ನು ವಾಪಸ್ ಕಳುಹಿಸುವ ಕುರಿತು ಮಾತುಕತೆ ನಡೆಸುತ್ತೇನೆ ಎಂದು ಮೇಯರ್ ನೀಡಿದ ಭರವಸೆಯನ್ನು ಒಪ್ಪದ ನೌಕರರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.