ಆತ್ಮಹತ್ಮೆಗೆ ಯತ್ನಿಸಿದ ಗಿರಿನಗರ ಕಾರ್ಪೊರೇಟರ್
ಬೆಂಗಳೂರು, ನ.18 : ಶಾಪಿಂಗ್ ಮಾಲ್ನಲ್ಲಿ ಬಟ್ಟೆ ಕದ್ದು ಸಿಕ್ಕಿಬಿದ್ದಿದ್ದ ಗಿರಿನಗರ ವಾರ್ಡ್ನ ಪಾಲಿಕೆ ಸದಸ್ಯೆ ಎಚ್.ಎಸ್. ಲಲಿತಾ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮೇಯರ್ ಶಾಂತ ಕುಮಾರಿ ಮತ್ತು ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರು ಆರೋಗ್ಯ ವಿಚಾರಿಸಿದ್ದಾರೆ.
ಬಿಬಿಎಂಪಿ ಸದಸ್ಯೆ ಎಚ್.ಎಸ್.ಲಲಿತಾ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಮನೆಯ ಸಮೀಪ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಅವರನ್ನು ಕುಮಾರಸ್ವಾಮಿ ಲೇಔಟ್ನಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋಮಾ ಸ್ಥಿತಿಗೆ ಅವರು ತಲುಪಿದ್ದರು, ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಮಂಗಳವಾರ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಮತ್ತು ಬಿಬಿಎಂಪಿ ಮೇಯರ್ ಶಾಂತ ಕುಮಾರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಲಲಿತಾ ಅವರ ಆರೋಗ್ಯ ವಿಚಾರಿಸಿದರು. ಗಾಂಧಿನಗರದಲ್ಲಿರುವ ಸುಖಸಾಗರ್ ಮಾಲ್ನಲ್ಲಿ ಬಟ್ಟೆ ಕದ್ದು ಲಲಿತಾ ಅವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಉಪ್ಪಾರಪೇಟೆ ಪೊಲೀಸರು ಅವರನ್ನು ಬಂಧಿಸಿದ್ದರು. ನಗರದ ಒಂಬತ್ತನೇ ಎಸಿಎಂಎಂ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿತ್ತು. [ಕಾರ್ಪೊರೇಟರ್ ಮಾನ ಮರ್ಯಾದೆ ಮೂರಾಬಟ್ಟೆ]