ಮ್ಯಾನ್ಹೋಲ್ ದುರಂತ: ಕಾರ್ಮಿಕರಿಬ್ಬರ ದಾರುಣ ಸಾವು
ಬೆಂಗಳೂರು, ಸೆ. 24 : ಬಿಬಿಎಂಪಿ ಮತ್ತು ಜಲಮಂಡಳಿ ಎಡವಟ್ಟುಗಳಿಗೆ ಮತ್ತೊಂದು ದುರಂತ ಸೇರ್ಪಡೆಯಾಗಿದೆ. ಕಂಡಕಂಡಲ್ಲಿ ತೋಡಿರುವ ಗುಂಡಿಗಳು, ಮಳೆ ಬಂದಾಗ ಸಾರ್ವಜನಿಕರು ಪಡುತ್ತಿರುವ ಸಂಕಷ್ಟ ಒಂದೆಡೆಯಾಗಿದ್ದರೆ, ಕಾರ್ಮಿಕರನ್ನು ಬಲಿ ತೆಗೆದುಕೊಳ್ಳುತ್ತಿರುವ ಅವೈಜ್ಞಾನಿಕ ಮ್ಯಾನ್ಹೋಲ್ಗಳು ಮತ್ತೊಂದೆಡೆ. ಜನರು ಮತ್ತು ಮಾಧ್ಯಮದವರು ಎಷ್ಟೇ ಸಾರಿ ಎಚ್ಚರಿಸಿದರೂ ನಿದ್ದೆಯಿಂದೇಳದ ಮಹಾನಗರ ಪಾಲಿಕೆ ನೀತಿ ಮತ್ತೆರಡು ಜೀವಗಳನ್ನು ಬಲಿ ತೆಗೆದುಕೊಂಡಿದೆ.
ಬೆಂಗಳೂರಿನಲ್ಲಿ ಬುಧವಾರ ಮಧ್ಯಾಹ್ನ ಮ್ಯಾನ್ಹೋಲ್ ದುರಂತ ಸಂಭವಿಸಿದೆ. ಮ್ಯಾನ್ಹೋಲ್ ಆಳ ನೋಡಲು ಇಳಿದ ಕಾರ್ಮಿಕರಿಬ್ಬರು ಉಸಿರು ಕಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.(ಜಲಮಂಡಳಿ ಅಪೂರ್ಣ ಕಾಮಗಾರಿ, ಸವಾರರ ಪರದಾಟ)
ಥಣಿಸಂದ್ರದ ಸಾರಾಯಿಪಾಳ್ಯದಲ್ಲಿ ಮ್ಯಾನ್ಹೋಲ್ ಆಳ ತಿಳಿಯಲು ಇಳಿದ ಪಡ್ರೆ(25) ಮತ್ತು ಶ್ರೀಧರ್ (22) ದಾರುಣವಾಗಿ ಸಾವನ್ನಪ್ಪಿದ್ದಾರೆ. ಬಿಡಬ್ಲ್ಯೂಎಸ್ಎಸ್ಬಿಯ ಗುತ್ತಿಗೆ ಕಾರ್ಮಿಕರಾಗಿದ್ದ ಪಡ್ರೆ ಮತ್ತು ಶ್ರೀಧರ್ ಬುಧವಾರ ಮ್ಯಾನ್ಹೋಲ್ ಆಳ ತಿಳಿಯಲು ಇಳಿದಿದ್ದರು. ಈ ವೇಳೆ ಮುನ್ನೆಚ್ಚರಿಕೆ ಕ್ರಮ ತೆಗಗೆದುಕೊಳ್ಳದಿರುವುದೇ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ.
ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.