ಚಂದಾ ತರಲು ಹೋದ ಬಾಲಕರು ನಾಪತ್ತೆ
ಬೆಂಗಳೂರು. ಆ, 25 : ಕೆ.ಆರ್.ಪುರ ಸಮೀಪದ ಹಳೆಹಳ್ಳಿಯ ನಾಲ್ವರು ಬಾಲಕರು ಕೆ.ಆರ್.ಬಸ್ ನಿಲ್ದಾಣದಿಂದ ಭಾನುವಾರ ನಾಪತ್ತೆಯಾಗಿದ್ದಾರೆ. 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಪ್ರವೀಣ್(11), ವಿನಯ್(10), ರೆಫಲ್ ರಾಯ್(10) ಮತ್ತು ಡಾಮಿನಿಕ್ ಬೆನಿಡಿಕ್ಟ್ (12) ನಾಪತ್ತೆಯಾದ ಬಾಲಕರು.
ಭಾನುವಾರದ ರಜೆ ಕಾರಣ ನಾಲ್ವರೂ ಬಾಲಕರು ಕುಂಬೇನಗರದಲ್ಲಿರುವ ಪ್ರವೀಣ್ ಅಜ್ಜಿಮನೆಗೆ ತೆರಳಿದ್ದಾರೆ. ಈ ವೇಳೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಸಂಗ್ರಹಿಸಿದ್ದ ಚಂದಾ ಹಣ 500 ರೂಪಾಯಿಯನ್ನು ಪ್ರವೀಣ್ ಅಜ್ಜಿಗೆ ನೀಡಿದ್ದಾನೆ. ಅಲ್ಲದೇ ಧರ್ಮಸ್ಥಳಕ್ಕೆ ಹೋಗಿ ಬರುವುದಾಗಿ ಹೇಳಿದ್ದಾನೆ. ಇದರಿಂದ ಗಾಬರಿಯಾದ ಅಜ್ಜಿ 'ನಾನೇ ನಿಮ್ಮನ್ನು ಮನೆಗೆ ಬಿಟ್ಟು ಬರುತ್ತೇನೆ' ಎಂದು ಹೇಳಿ ಕೆ.ಆರ್.ಪುರ ಬಸ್ ನಿಲ್ದಾಣಕ್ಕೆ ಮಕ್ಕಳನ್ನು ಕರೆದುಕೊಂಡು ಬಂದಿದ್ದಾಳೆ.
ಈ ವೇಳೆ ನೀರು ಕುಡಿಯಲೆಂದು ಅಜ್ಜಿ ಸಮೀಪದ ಹೋಟೆಲ್ಗೆ ಹೋಗಿ ಬರುವಷ್ಟರಲ್ಲಿ ಬಾಲಕರು ನಾಪತ್ತೆಯಾಗಿದ್ದಾರೆ. ಸುತ್ತಮುತ್ತಲೂ ಹುಡುಕಾಡಿದರೂ ಬಾಲಕರು ಪತ್ತೆಯಾಗಿಲ್ಲ. ಮಾಹಿತಿ ದೊರೆತಲ್ಲಿ 080-22942553 ಅಥವಾ 080-25610322 ಕ್ಕೆ ಸಂಪರ್ಕಿಸಲು ಕೋರಲಾಗಿದೆ.