ಸಿಸಿಬಿ ಪೊಲೀಸರೆ ಕಿಡ್ನಾಪರ್ಗಳಾದಾಗ!
ಬೆಂಗಳೂರು, ಸೆ. 23 : ಬೇಲಿಯೇ ಎದ್ದು ಹೊಲ ಮೇಯ್ದರೆ ಕಾಯುವರು ಯಾರು? ಎಂಬ ಗಾದೆ ಬೆಂಗಳೂರು ಸಿಸಿಬಿ ಪೊಲೀಸರಿಗೆ ಸರಿಯಾಗಿ ಅನ್ವಯಿಸುತ್ತದೆ.
ಚಾರ್ಟರ್ಡ್ ಅಕೌಂಟೆಂಟ್ ಒಬ್ಬರನ್ನು ಕಿಡ್ನಾಪ್ ಮಾಡಿ ಆಸ್ತಿ ಮಾರುವಂತೆ ಸಿಸಿಬಿ ಪೊಲೀಸರ ತಂಡವೊಂದು ಒತ್ತಡ ಹೇರಿತ್ತು ಎಂಬ ಸಂಗತಿ ಬಯಲಿಗೆ ಬಂದಿದೆ.
ರಾಜ್ಯ ಮಾನವ ಹಕ್ಕುಗಳ ಸಮಿತಿ ಅಧಿಕಾರಿಗಳು ಸಿಸಿಬಿ ಮುಖ್ಯ ಠಾಣೆಯಲ್ಲಿ ದೌರ್ಜನ್ಯಕ್ಕೊಳಗಾಗುತ್ತಿದ್ದ ಶೇಕ್ ನಿಜಾಮುದ್ದೀನ್ (45) ಎಂಬುವರನ್ನು ರಕ್ಷಣೆ ಮಾಡಿದ್ದಾರೆ.(ಚಾರ್ಟರ್ಡ್ ಅಕೌಂಟೆಂಟ್ ಮನೆಯಲ್ಲಿ ಭಾರೀ ದರೋಡೆ)
ಈ ಬಗ್ಗೆ ದೂರು ನೀಡಿರುವ ನಿಜಾಮುದ್ದೀನ್, ಸಿಸಿಬಿಯ ಪೊಲೀಸರು ಶನಿವಾರ ಬೆಳಗ್ಗೆ ನನ್ನನ್ನು ಹೊತ್ತೊಯ್ದಿದ್ದರು. ಖಾಲಿ ಚೆಕ್ ಮತ್ತು ಕಾಗದದ ಮೇಲೆ ರುಜು ಮಾಡುವಂತೆ ನನ್ನ ಮೇಲೆ ಒತ್ತಡ ಹಾಕಿದ್ದರು. ಬೆಂಗಳೂರಿನಲ್ಲಿರುವ ನನ್ನ 2,400 ಚದರ ಅಡಿ ವಿಸ್ತೀರ್ಣದ 57 ಲಕ್ಷ ರೂ. ಮೌಲ್ಯದ ಸೈಟ್ ನ್ನು ಒತ್ತಾಯಪೂರ್ವಕವಾಗಿ ಅಬ್ದುಲ್ ಸತಾರ್ ಎಂಬುವರಿಗೆ ಮಾರುವಂತೆ ಒತ್ತಾಯ ಮಾಡಿದ್ದರು ಎಂದು ಆರೋಪಿಸಿದ್ದಾರೆ.
ಪೊಲೀಸರಿಂದಲೇ ಕಿಡ್ನಾಪ್ ಆಗಿದ್ದ ನಿಜಾಮುದ್ದೀನ್ ಅದು ಹೇಗೋ ವಕೀಲೆಯಾಗಿರುವ ಹೆಂಡತಿ ನಝ್ರೀನ್ ಗೆ ಈ ವಿಷಯ ತಿಳಿಸಿದ್ದಾರೆ. ಕೂಡಲೇ ನಝ್ರೀನ್ ಮಾಣವ ಹಕ್ಕುಗಳ ಆಯೋಗ ಬಳಿ ತೆರಳಿದ್ದಾಳೆ. ಕೂಡಲೇ ಕಾರ್ಯನಿರತರಾದ ಅಧಿಕಾರಿಗಳು ಸಿಸಿಬಿ ಪೊಲೀಸರ ಬಲೆಯಿಂದ ದೌರ್ಜನ್ಯಕೊಳಗಾಗುತ್ತಿರುವರನ್ನು ರಕ್ಷಿಸಿದ್ದಾರೆ.