1 ಗುಂಟೆ ಡಿನೋಟಿಫೈ ಮಾಡಿದ್ದಲ್ಲಿ ರಾಜಕೀಯದಿಂದ ನಿವೃತ್ತಿ
ಬೆಂಗಳೂರು,ಜು.26: ಅಕ್ರಮ ಡಿನೋಟಿಫಿಕೇಶನ್ ವಿಚಾರ ಎರಡನೇ ದಿನವೂ ವಿಧಾನಸಭೆಯ ಕಲಾಪವನ್ನು ತಿಂದು ಹಾಕಿದೆ. ವಿಧಾನಸಭೆಯಲ್ಲಿ ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ತೀವ್ರ ಗದ್ದಲ ಸೃಷ್ಟಿಸಿದ್ದರಿಂದ ವಿಧಾನಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ಇಂದು ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, ಅರ್ಕಾವತಿ ಬಡಾವಣೆಯ 541 ಎಕರೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಲಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹೈಕಮಾಂಡ್ಗೆ ಫಂಡ್ ನೀಡಲು ಸಿದ್ದರಾಮಯ್ಯ ಈ ಅಕ್ರಮ ಎಸಗಿದ್ದಾರೆ, ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಈ ಆರೋಪಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನು ಮುಖ್ಯಮಂತ್ರಿಯಾದ ನಂತರ ಒಂದು ಗುಂಟೆ ಜಾಗವನ್ನು ಡಿನೋಟಿಫೈ ಮಾಡಿಲ್ಲ, ಡಿನೋಟಿಫೈ ಸಾಬೀತಾದಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಸಾಬೀತಾಗದಿದ್ದರೆ ನೀವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿರಾ ಎಂದು ಸಿಎಂ ಜಗದೀಶ್ ಶೆಟ್ಟರ್ಗೆ ಮರು ಪ್ರಶ್ನೆ ಎಸೆದರು.[ಮೋದಿಗೂ ಮೊರೆಯಿಟ್ಟ ಅರ್ಕಾವತಿ ನಿವೇಶನದಾರರು!]
ಡಿನೋಟಿಫೈ ಆಗಿರುವುದು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಅವಧಿಯಲ್ಲಿ, ಡಿನೋಟಿಫೈ ಮಾಡಿದ ಹಣದಲ್ಲೇ ಶೆಟ್ಟರ್ ಚುನಾವಣೆ ನಡೆಸಿದ್ದಾರೆ ಎಂದು ಸಿಎಂ ತಿರುಗೇಟು ನೀಡಿದರು.
ಮುಖ್ಯಮಂತ್ರಿಗಳ ಆರೋಪಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ರೋಷ ವ್ಯಕ್ತ ಪಡಿಸಿಸಿದರು. ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ಹೆಚ್ಚಾದ ಕಾರಣ ಸ್ಪೀಕರ್ ಸದನವನ್ನು ಸೋಮವಾರಕ್ಕೆ ಮುಂದೂಡಿದರು.