ಅನಂತ್ ಕುಮಾರ್ ರಾಜಕಾರಣದ ರಾಜ್ ಕುಮಾರ್
ಅನಂತ್ ಅವರು ಈಗಲೂ ಕೂಡ ಕನ್ನಡದಲ್ಲಿಯೇ ಸಹಿ ಹಾಕುತ್ತಾರೆಂದರೆ ಅವರ ಕನ್ನಡ ಪ್ರೇಮದ ಪರಿ ಅರಿವಾಗುತ್ತದೆ. ಯಾವುದೇ ವೇದಿಕೆ ಇರಲಿ ಕನ್ನಡದಲ್ಲೇ ಮಾತಾಡಲು ಅವರು ಹಿಂಜರಿಯುವುದಿಲ್ಲ. ಐದು ಬಾರಿ ಲೋಕಸಭಾ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿದಾಗಲೂ ಅನಂತ್ ಅವರು ಕನ್ನಡದಲ್ಲಿಯೇ ಪ್ರಮಾಣ ವಜನ ಸ್ವೀಕರಿಸಿದ್ದಾರೆ. ಹಲವು ಒಪ್ಪಂದಗಳಿಗೆ ಕನ್ನಡದಲ್ಲಿ ಸಹಿ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಎಲ್ಲ ಆಂಗ್ಲ ಪ್ರೇಮಿ ಅಭ್ಯರ್ಥಿಗಳ ನಡುವೆ ಅನಂತ್ ಕುಮಾರ್ ಅವರೊಬ್ಬರೇ ಕನ್ನಡದಲ್ಲಿ ಇಡೀ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಸಂವಾದವನ್ನು ಇಂಗ್ಲಿಷ್ ನಲ್ಲಿ ಮಾಡಬೇಕೆಂದು ಸಂಘಟಕರು ಹೇಳಿದ್ದರೂ ಅನಂತ್ ಕುಮಾರ್ ಅವರು ಮಾತೃ ಭಾಷೆಯಲ್ಲಿಯೇ ಮಾತನಾಡಿ ಭರ್ಜರಿ ಕರತಾಡನ ಪಡೆದಿದ್ದರು.
ಮತ್ತೊಂದು ವಿಶೇಷವೆಂದರೆ, 2012ರ ಸೆಪ್ಟೆಂಬರ್ ನಲ್ಲಿ ಅಮೆರಿಕದಲ್ಲಿ ನಡೆದ ವಿಶ್ವಸಂಸ್ಥೆಯ ಮಹಾಅಧಿವೇಶನದಲ್ಲಿ ಕೂಡ ಅನಂತ್ ಅವರು ಕನ್ನಡ ಡಿಂಡಿಮ ಬಾರಿಸಿದ್ದರು. ಮುಖ್ಯ ಅಧಿವೇಶನದ ಭಾಷಣವನ್ನು ಕನ್ನಡದಲ್ಲಿಯೇ ಆರಂಭಿಸಿ, ನಂತರ ಆಂಗ್ಲ ಭಾಷೆಯಲ್ಲಿ ಮುಂದುವರಿಸಿ ಭರ್ತಿ ಕರತಾಡನ ಪಡೆದಿದ್ದರು. ವಿಶ್ವಸಂಸ್ಥೆಯ ಇತಿಹಾಸದಲ್ಲಿ ಮಾತೃಭಾಷೆಯಲ್ಲಿ ಭಾಷಣ ಮಾಡಿದ ಮೊದಲ ಭಾರತೀಯ ಅನಂತ್ ಅವರು.
ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಭಾಷೆಗೆ ಧಕ್ಕೆ ಬಂದಾಗ ಕನ್ನಡಿಗರ ಪರವಾಗಿ ಹೋರಾಡಲು ಅನಂತ್ ಕುಮಾರ್ ಅವರು ಯಾವತ್ತಿಗೂ ಹಿಂದೆ ಬಿದ್ದಿಲ್ಲ. ಕಾವೇರಿ ನೀರು ಹಂಚಿಕೆ ಕುರಿತ ವಿಚಾರ ಮಂಡನೆ ಮಾಡುವಾಗಲಾಗಲಿ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು ಆಗ್ರಹಿಸಿ ನಡೆಸಿದ ಹೋರಾಟದಲ್ಲಿ ಅನಂತ್ ಅವರು ಸಂಸತ್ತಿನಲ್ಲಿ ಹೋರಾಟ ನಡೆಸಿದ್ದಾರೆ.
ಕನ್ನಡಪರ ಹೋರಾಟ ಮಾಡಬೇಕಾದ ಸಂದರ್ಭ ಬಂದಾಗಲೆಲ್ಲ ಅವರು ನಿಸ್ವಾರ್ಥದಿಂದ, ನಿರಾಡಂಬರದಿಂದ ಹೋರಾಟ ಮಾಡಿದ್ದಾರೆ. ಈ ಕಾರಣಕ್ಕಾಗಿಯೇ ಬೆಂಗಳೂರು ದಕ್ಷಿಣ ಕ್ಷೇತ್ರದ ಜನರು ಅವರ ಮೇಲೆ ನಂಬಿಕೆ ಇಟ್ಟುಕೊಂಡು ಸತತವಾಗಿ ಐದು ಬಾರಿ ಆರಿಸಿ ದೆಹಲಿಗೆ ಕಳಿಸಿದ್ದಾರೆ. ಈ ಕಾರಣಗಳಿಂದಾಗಿ ಅನಂತ್ ಕುಮಾರ್ ಅವರನ್ನು ರಾಜಕಾರಣದ ರಾಜ್ ಕುಮಾರ್ ಎಂದು ಕರೆದರೆ ತಪ್ಪಿಲ್ಲತಾನೆ?