ಹಳ್ಳಿ ಶಾಲೆ ಮಕ್ಕಳಿಗೂ ಎಲ್ಲ ಸೌಲಭ್ಯ ಸಿಕ್ಕರೆ ಎಷ್ಟು ಚೆನ್ನ!
ದೃಶ್ಯ 1 : ಬಿಳಿ ಅಂಗಿ, ನೀಲಿ ಅಥವಾ ಖಾಕಿ ಚಡ್ಡಿ (ಹುಡುಗಿ ಆಗಿದ್ರೆ ಸ್ಕರ್ಟ್ ಅಥವಾ ಚೂಡಿದಾರ), ಕತ್ತಿಗೊಂದು ಟೈ, ಸೊಂಟಕ್ಕೆ ಬೆಲ್ಟು, ಕಾಲಿಗೆ ಬಾಟಾ (ಕೆಲ ಹೈಫೈ ಶಾಲೆಗಳಲ್ಲಿ ನೈಕಿ ಅಥವಾ ರೀಬಾಕ್) ಬೂಟು, ಬೆನ್ನಿಗೊಂದು ಕಾಸ್ಟ್ಲಿ ಬ್ಯಾಗು, ಶಾಲೆಗೆ ಹೋಗಲು ಖಾಸಗಿ ಅಥವಾ ಸ್ವಂತದ ಗಾಡಿ... ಜೊತೆಗೊಂದಿಷ್ಟು ಜೇಬಲ್ಲಿ ದುಡ್ಡು...
ದೃಶ್ಯ 2 : ಬುಡ್ಡಿ ಕಿತ್ತ ಅಥವಾ ಅಲ್ಲಲ್ಲಿ ಹೊಲಿಗೆ ಹಾಕಿದ ಬಿಳಿ ಅಂಗಿ, ಖಾಕಿ ಚಡ್ಡಿ (ಹುಕ್ ಇದ್ರಿ ಅದೃಷ್ಟ), ಕಾಲಲ್ಲಿ ಚಪ್ಪಲಿ ಅಥವಾ ಬರಿಗಾಲು, ಹೆಗಲಿಗೊಂದು ಪಾಟೀಚೀಲ (ಇಲ್ಲದಿದ್ದರೆ ಕೈಯಲ್ಲೇ ಬುಕ್ಕುಗಳು), ಬ್ಯಾಗಲ್ಲಿ ಕಂಪಾಸ್ ಬಾಕ್ಸ್, ಟಿಫಿನ್ ಬಾಕ್ಸ್ ಇರುತ್ತೋ ಇಲ್ಲವೋ ಡೌಟು... ಕೂಡಲು ಇದ್ರೆ ಬೆಂಚು, ಇಲ್ಲದಿದ್ದರೆ ನೆಲ... ಇನ್ನು ತೂತು ಬಿದ್ದ ಜೋಬಲ್ಲಿ ದುಡ್ಡು ಯಾರು ಇಟ್ಟುಕೊಳ್ಳುತ್ತಾರೆ?
ಇವೆರಡು ಸ್ವಲ್ಪ ಉತ್ಪ್ರೇಕ್ಷೆಯಾಗಿ ಕಂಡುಬಂದರೂ ಹೆಚ್ಚುಕಡಿಮೆ ವಸ್ತುಸ್ಥಿತಿ ಇದೇ ಆಗಿರುತ್ತದೆ. ಮೊದಲನೆಯದು ನಗರಗಳಲ್ಲಿ ಕಾನ್ವೆಂಟ್ ಶಾಲೆಗೆ ಹೋಗುವ ಮಗುವಿನ ಚಿತ್ರಣವಾದರೆ, ಎರಡನೆಯದು ಹಳ್ಳಿಗಳಲ್ಲಿ ಅಥವಾ ಸರಕಾರಿ ಶಾಲೆಗಳಲ್ಲಿ ಓದುವ 'ಬಡ' ಮಕ್ಕಳ ಚಿತ್ರಣ. ಈ ಚಿತ್ರಣವನ್ನು ಒಪ್ಪಲೂಬಹುದು, ಒಪ್ಪದೆಯೂ ಇರಬಹುದು.
ಆದರೆ, ಹಳ್ಳಿಗಳಲ್ಲಿ ಅಥವಾ ಕೆಲ ಸರಕಾರಿ ಶಾಲೆಗಳಲ್ಲಿ ಇಂಥದೊಂದು ಪರಿಸ್ಥಿತಿ ಇದೆ ಎನ್ನುವುದು ಒಪ್ಪಿಕೊಳ್ಳತಕ್ಕ ಮಾತು. ರಾಜ್ಯದ ಹಲವಾರು ಶಾಲೆಗಳಲ್ಲಿ ಸರಿಯಾದ ಕಟ್ಟಡಗಳಿಲ್ಲ, ಇದ್ದರೂ ಸುಸ್ಥಿತಿಯಲ್ಲಿ ಇರುವುದಿಲ್ಲ, ಸರಕಾರ ಅತ್ತ ಕಣ್ಣು ಹಾಯಿಸುವುದಿಲ್ಲ. ಇನ್ನು ಅನೇಕ ಶಾಲೆಗಳು ಮುಚ್ಚುವ ಹಂತ ತಲುಪಿವೆ.
ಇದನ್ನು ಮನಗಂಡಿರುವ 'ದಿ ಆಚಾರ್ಯ ಐಕೇರ್ ಗ್ರೂಪ್' ರಾಜ್ಯದ ಹಳ್ಳಿಗಳಲ್ಲಿರುವ ಸರಕಾರಿ ಶಾಲೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, 'ಶಿಕ್ಷಾ' ಎಂಬ ಕಾರ್ಯಕ್ರಮ ಹಮ್ಮಿಕೊಂಡು, ಬಡಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದೆ. ಇದನ್ನು ಪ್ರತಿ ತಿಂಗಳು ಒಂದೊಂದು ಶಾಲೆಗಳಲ್ಲಿ ಮಾಡುತ್ತಿರುತ್ತದೆ. [ಆಚಾರ್ಯ ಸಂಸ್ಥೆಯ ಪ್ರತಿಭೆ]
ಆಧುನಿಕ ಶಿಕ್ಷಣ ಪದ್ಧತಿ ಸಿಗಬೇಕು
ನಗರದ ಆಧುನಿಕ ಶಿಕ್ಷಣ ಪದ್ಧತಿ ಹಳ್ಳಿಗಳಲ್ಲಿರುವ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೂ ದೊರೆಯುವ ಹಾಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲಿಯೂ ಕಂಪ್ಯೂಟರ್, ಸೈನ್ಸ್ ಲ್ಯಾಬ್, ಆಧುನಿಕ ಗ್ರಂಥಾಲಯ ಇದ್ದರೆ ಎಷ್ಟು ಚೆನ್ನ?
ಮನರಂಜನೆಯಿಂದ ಕೂಡಿದ ಚಟುವಟಿಕೆ
ಗುಣಮಟ್ಟದ ಶಿಕ್ಷಣ ಒದಗಿಸುವುದರ ಜೊತೆಗೆ ಕಂಪ್ಯೂಟರ್ ಶಿಕ್ಷಣ, ದೈಹಿಕ ಶಿಕ್ಷಣ ಮತ್ತು ಮನರಂಜನೆಯಿಂದ ಕೂಡಿದ ಹಲವಾರು ಚಟುವಟಿಕೆಗಳನ್ನು ನೀಡುತ್ತ ಬಂದಿದೆ. ದೈಹಿಕ ಚಟುವಟಿಕೆಗಳಲ್ಲಿ ಹಳ್ಳಿ ಹುಡುಗರನ್ನು ಮೀರಿಸುವುದು ಬಲು ಕಷ್ಟ.
ಬಳಕೆಯಾಗದೆ ಉಳಿದ ಪುಸ್ತಕ ವಿತರಣೆ
ಬಡಮಕ್ಕಳಿಗೆ ಅಗತ್ಯವಾಗಿ ಬೇಕಾಗುವ ಬರೆಯುವ ಪುಸ್ತಕ, ಪೆನ್, ಪೆನ್ಸಿಲ್ ಮುಂತಾದ ವಸ್ತುಗಳನ್ನು ವಿತರಿಸುತ್ತಿದೆ. ಆಚಾರ್ಯ ಕಾಲೇಜಿನಲ್ಲಿ ಬಳಸದೆ ಉಳಿದಿರುವ ಹಲವಾರು ವಸ್ತುಗಳು ಮಕ್ಕಳಿಗೆ ಬಳಕೆಯಾಗುವ ಹಾಗೆ ಮಾಡುತ್ತಿದೆ.
ಎಲ್ಲ ಸೌಲಭ್ಯ ಮಕ್ಕಳಿಗೆ ದೊರಕುತ್ತಿಲ್ಲ
ಹಳ್ಳಿಗಳಲ್ಲಿರುವ ಶಾಲೆಗಳಲ್ಲಿ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿಲ್ಲ ಮತ್ತು ಸೌಲತ್ತು ಮತ್ತು ಅವಕಾಶಗಳು ದಕ್ಕುತ್ತಿಲ್ಲದಿರುವುದು ವಿಷಾದನೀಯ ಸಂಗತಿ ಎಂದು ಐಕೇರ್ ಸದಸ್ಯ ಮನೋಹರ್ ಅವರು ಹೇಳುತ್ತಾರೆ.
ಅವರಲ್ಲಿಯೂ ಸಾಕಷ್ಟು ಜಾಣ್ಮೆ ಇದೆ
ಅಚ್ಚರಿಯ ಸಂಗತಿಯೆಂದರೆ, ಹಳ್ಳಿಗಳಲ್ಲಿರುವ ಮಕ್ಕಳಲ್ಲಿಯೇ ಕಲಿಯಲು ಹೆಚ್ಚು ಉತ್ಸಾಹವಿರುತ್ತದೆ. ಅವರಲ್ಲಿ ಸಾಕಷ್ಟು ಜಾಣ್ಮೆಯಿದೆ ಮತ್ತು ಚಟುವಟಿಕೆಯಿಂದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇಂಥ ಮಕ್ಕಳಿಗೆ ಇನ್ನೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು ಎಂದು ಅವರು ಹೇಳುತ್ತಾರೆ.
ಮಕ್ಕಳಿಗೆ ಪುಸ್ತಕ ವಿತರಣೆ
ಸೋಲದೇವನಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.
ಒಂದು ತಿಂಗಳು ಒಂದು ಶಾಲೆ
ಆಚಾರ್ಯ ಐಕೇರ್ ಗ್ರೂಪ್ ಸಂಸ್ಥೆಯ ವತಿಯಿಂದ ಪ್ರತಿ ತಿಂಗಳು ಒಂದೊಂದು ಶಾಲೆಗಳಿಗೆ ಭೇಟಿ ನೀಡಿ ಪುಸ್ತಕಗಳನ್ನು ವಿತರಿಸಲಾಗುತ್ತದೆ.
ಪುಸ್ತಕ, ಪೆನ್ಸಿಲ್ಲು ಮಾತ್ರವಲ್ಲ
ಈ ಹಳ್ಳಿ ಮಕ್ಕಳಿಗೆ ಪುಸ್ತಕ, ಪೆನ್ಸಿಲ್ಲು ಮಾತ್ರವಲ್ಲ ಉತ್ತಮ ಕಟ್ಟಡ, ಸಮವಸ್ತ್ರ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಮತ್ತಿತರ ಅಗತ್ಯ ಸೌಲಭ್ಯಗಳು ಕೂಡ ದೊರೆಯುವಂತಾಗಬೇಕು.