ಬಿಬಿಎಂಪಿ ಮುತ್ತಿಗೆ ಹಾಕಲು ಸಜ್ಜಾದ ಆಮ್ ಆದ್ಮಿ ಪಕ್ಷ
ಬೆಂಗಳೂರು, ಸೆ. 19 : ಆಮ್ ಆದ್ಮಿ ಪಕ್ಷ ತನ್ನ 'ಭ್ರಷ್ಟರೇ, ಅಧಿಕಾರ ಬಿಟ್ಟು ತೊಲಗಿ' ಅಭಿಯಾನದ ಎರಡನೇ ಹಂತದ ಅಂಗವಾಗಿ ಸೆಪ್ಟಂಬರ್ 20 ರಂದು ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಲಿದೆ.
ಟೌನ್ ಹಾಲ್ ಹತ್ತಿರ ಎ.ಟಿ.ರಾಮಸ್ವಾಮಿ ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತ್ವತ್ವದಲ್ಲಿ ಕಳೆದ ಹನ್ನೆರಡು ದಿನಗಳಿಂದ ನಡೆಯುತ್ತಿರುವ ಧರಣಿ ಜಾಗದಿಂದಲೇ ಮುತ್ತಿಗೆಗೆ ಚಾಲನೆ ನೀಡಲಾಗುವುದು ಎಂದು ಆಮ್ ಆದ್ಮಿ ಪಕ್ಷ ತಿಳಿಸಿದೆ.
ಬೆಳಗ್ಗೆ 11 ಗಂಟೆಗೆ ಕಾರ್ಯಕರ್ತರು ಟೌನ್ ಹಾಲ್ ನಿಂದ ಬಿಬಿಎಂಪಿ ಕಚೇರಿಯತ್ತ ತೆರಳುವರು. ಶಾಂತಿಯುತವಾಗಿ ಸಾಗಿ ಭ್ರಷ್ಟರ ವಿರುದ್ಧ ಘೊಷಣೆ ಕೂಗಲಾಗುವುದು ಎಂದು ಪಕ್ಷ ಮುಖಂಡರಾದ ಶಾಂತಲಾ ದಾಮ್ಲೆ, ವಿಜಯ ಶರ್ಮ ಮತ್ತು ರವಿ ಕೃಷ್ಣಾರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.(ಭ್ರಷ್ಟರೇ ಅಧಿಕಾರ ಬಿಟ್ಟು ತೊಲಗಿ ಎಂದ ಎಎಪಿ)
ಈ ಮೊದಲು ಬಿಡಿಎಗೆ ಮುತ್ತಿಗೆ ಹಾಕಲಾಗಿತ್ತು. ಆದರೂ ಯಾವುದೇ ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತ ಜನತೆ ಕಾಂಗ್ರೆಸ್ಗೆ ಮತ ನೀಡಿತ್ತು. ಕಾಂಗ್ರೆಸ್ಸಿಗರು ಅವರನ್ನು ಭ್ರಷ್ಟಾಚಾರದಲ್ಲಿ ಮೀರಿಸಿದ್ದಾರೆ ಎಂದು ಆರೋಪಿಸಿದರು.
ಬಿಬಿಎಂಪಿಯಲ್ಲಿ ದುರಾಡಳಿತ ಹೆಚ್ಚಿದ್ದು ಈಗೀನ ಮೇಯರ್ ಮನೆ ಮೇಲೆ 2012ರಲ್ಲಿ ಲೋಕಾಯುಕ್ತರು ದಾಳಿ ನಡೆಸಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದರು. ಇನ್ನು ಅನೇಕ ಪ್ರಕರಣಗಳು ಬಿಬಿಎಂಪಿ ಮೇಲೆ ದಾಖಲಾಗಿದ್ದು ಎಲ್ಲದರ ಮೇಲೆ ಸಂಪೂರ್ಣ ತನಿಖೆ ಮಾಡಯಬೇಕು ಎಂದು ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.