ಬೆಂಗಳೂರಿನಲ್ಲಿ ಡಿ. 7ರಿಂದ ಮೂರು ದಿನ ಪುಸ್ತಕ ಪರಿಷೆ
ಬೆಂಗಳೂರು, ನ. 24: ನಗರದಲ್ಲಿ ಹಿಂದೆ ನಡೆದ ಪುಸ್ತಕ ಪರಿಷೆಗೆ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಇದರಿಂದ ಉತ್ಸಾಹಗೊಂಡಿರುವ ಸೃಷ್ಟಿ ವೆಂಚರ್ಸ್ ಸಂಸ್ಥೆಯು ಮತ್ತೆ ಪುಸ್ತಕ ಪರಿಷೆ ಏರ್ಪಡಿಸಲು ಸಿದ್ಧತೆ ಆರಂಭಿಸಿದೆ. ಡಿಸೆಂಬರ್ 7,8 ಹಾಗೂ 9ರಂದು ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಪರಿಷೆ ಆಯೋಜಿಸಿದೆ.
ಈ ಕುರಿತು ಸೃಷ್ಟಿ ವೆಂಚರ್ಸ್ ಸಂಸ್ಥೆಯ ಕಾರ್ಯದರ್ಶಿ ನಾಗರಾಜ ನಾವುಂಡ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಡಿಸೆಂಬರ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಸ್ತಕ ಪರಿಷೆಗೆ ಚಾಲನೆ ನೀಡುವರು. ಮೂರು ದಿನಗಳ ಕಾಲ ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಪರಿಷೆ ನಡೆಯಲಿದೆ ಎಂದು ತಿಳಿಸಿದರು.
ಜೊತೆಯಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳು ತಮ್ಮ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಕುರಿತು ಜನರಿಗೆ ತಿಳಿಸಲು 'ಜಾಗೃತಿ ಅಂಗಡಿ'ಗಳನ್ನು ಸ್ಥಾಪಿಸಲಾಗುವುದು ಎಂದು ವಿವರಿಸಿದರು. [ಇಷ್ಟದ ಪುಸ್ತಕ ಓದಲೊಂದು ವೆಬ್ ತಾಣ]
25 ಲಕ್ಷ ಪುಸ್ತಕ ಪ್ರದರ್ಶನ: ಈ ವರ್ಷ ಸುಮಾರು 25 ಲಕ್ಷ ಪುಸ್ತಕಗಳು ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ. ಅಲ್ಲದೆ, ಕನ್ನಡ ಬರಹಗಾರರು ಹಾಗೂ ಪ್ರಕಾಶಕರಿಗೆ ಪ್ರೋತ್ಸಾಹ ನೀಡಲು ಡಿಸೆಂಬರ್ 8 ಹಾಗೂ 9ರಂದು 150 ಅಂಗಡಿಗಳನ್ನು ಸ್ಥಾಪಿಸಿ ಪುಸ್ತಕಗಳ ಮಾರಾಟಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಹಿಂದಿನ ವರ್ಷ ನಾವು ಸುಮಾರು 20 ಲಕ್ಷ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದೆವು. ಈ ವರ್ಷ ಇನ್ನೂ 5 ಲಕ್ಷದಷ್ಟು ಹೆಚ್ಚು ಪುಸ್ತಕಗಳನ್ನು ಪ್ರದರ್ಶಿಸಲು ಯೋಜಿಸಲಾಗಿದೆ. ಈಗಾಗಲೇ 9 ಲಕ್ಷ ಪುಸ್ತಕಗಳನ್ನು ನಾವು ಸಂಗ್ರಹಿಸಿದ್ದೇವೆ. ಪುಸ್ತಕ ಪರಿಷೆಗೆ 2.5 ಲಕ್ಷಕ್ಕಿಂತ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕ ನರಹರಿ ದೀಕ್ಷಿತ್ ಮಾತನಾಡಿ, ಸುಗಮ ಸಂಗೀತ ಹಾಗೂ ಜಾನಪದ ಹಾಡುಗಳನ್ನು ಆಯೋಜಿಸಲಾಗಿದೆ. ಉದಯೋನ್ಮುಖ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದೇವೆ. ಮಾಧವ ಭಟ್ ಅವರ 'ವಿಜಲ್ ಮ್ಯೂಜಿಕ್' ಸಾಂಸ್ಕೃತಿಕ ಕಾರ್ಯಕ್ರಮದ ಆಕರ್ಷಣೆಯಾಗಲಿದೆ ಎಂದು ತಿಳಿಸಿದ್ದಾರೆ.
ಪುಸ್ತಕ ಪರಿಷೆಯ ಗೌರವ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಮಾತನಾಡಿ, ಈ ಪರಿಷೆಯು ಬರಹಗಾರರು, ಪ್ರಕಾಶಕರು, ಓದುಗರು ಹಾಗೂ ಕಲಾವಿದರಿಗೆ ಅತ್ಯುತ್ತಮ ಅವಕಾಶವಾಗಿದೆ. ಪರಿಷೆಗೆ ಪುಸ್ತಕ ದೇಣಿಗೆ ನೀಡಲು ಇಚ್ಛಿಸುವವರು ಮೊ. 9945003479 ಅಥವಾ 9916406585 ಕ್ಕೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.