ಹುಬ್ಬಳ್ಳಿಯಲ್ಲಿ 50 ಎಕರೆ ಭೂಮಿ ಪಡೆದ ಇನ್ಫೋಸಿಸ್
ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ವಿಸ್ತರಣಾ ಘಟಕ ಸ್ಥಾಪನೆ ಇನ್ನೂ ಕಾಲ ಕೂಡಿ ಬಂದಿಲ್ಲ ಎಂದಿದ್ದರು. ಆದರೆ, ಈ ಹಿಂದಿನ ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದ 50 ಎಕರೆ ಭೂಮಿಯನ್ನೇಲೇ ಕಾಂಗ್ರೆಸ್ ಸರ್ಕಾರ ಈಗ ಅಧಿಕೃತವಾಗಿ ನೀಡಿದೆ. ಒಟ್ಟಾರೆ, ಗೋಕುಲ ರಸ್ತೆಯಲ್ಲಿ ಇನ್ಫೋಸಿಸ್ ಟೆಕ್ನಾಲಜೀಸ್ ಸ್ಥಾಪನೆಯಾಗುವುದು ಖಚಿತವಾಗಿದೆ.
ಎಸ್ ಆರ್ ಪಾಟೀಲ್ ಹೇಳಿಕೆ: ಇನ್ಫೋಸಿಸ್ ಸಂಸ್ಥೆ ಹುಬ್ಬಳ್ಳಿ ಘಟಕದ ಮೇಲೆ ಸುಮಾರು 900 ಕೋಟಿ ರು ಹೂಡಿಕೆ ಮಾಡಲು ಸಜ್ಜಾಗಿದೆ. ಈ ಘಟಕದಿಂದ ಸುಮಾರು 10,000 ಜನರಿಗೆ ಉದ್ಯೋಗ ಸಿಗಲಿದೆ. ಇನ್ಫೋಸಿಸ್ ಸ್ಥಾಪಕರಲ್ಲಿ ಒಬ್ಬರಾದ ಎನ್.ಆರ್ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರು ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯಲ್ಲಿ ಉತ್ಸುಕರಾಗಿದ್ದಾರೆ.
ಐಟಿ ಮ್ಯಾನೇಜ್ಮೆಂಟ್ ಬೋರ್ಡ್ ಸ್ಥಾಪನೆ ಬಗ್ಗೆ ಸದ್ಯದಲ್ಲೇ ಸರ್ಕಾರಿ ಆದೇಶ ಹೊರಬೀಳಲಿದೆ. ಮುಖ್ಯಮಂತ್ರಿಗಳು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಐಟಿ ಕ್ಷೇತ್ರದಲ್ಲಿ ಹೊಸ ಉದ್ಯಮಿಗಳಿಗೆ ಸೂಕ್ತ ಹಾಗೂ ತ್ವರಿತವಾಗಿ ವೇದಿಕೆ ನಿರ್ಮಿಸಲು ಈ ಸಮಿತಿ ಸಹಾಯಕವಾಗಲಿದೆ. ಇಡೀ ದೇಶದಲ್ಲಿ ಇಂಥದ್ದೊಂದು ವ್ಯವಸ್ಥೆ ಇಲ್ಲ ಎಂದಿದ್ದಾರೆ. [ಹುಬ್ಬಳ್ಳಿಯತ್ತ ಐಟಿ ಕ್ಷೇತ್ರದ ಕಣ್ಣು]
ನಿರಾಣಿ ಹೇಳಿಕೆ: ಬಿಜೆಪಿ ಸರ್ಕಾರದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಇನ್ಫೋಸಿಸ್ ಗೆ 50 ಎಕರೆ ಮಂಜೂರು ಮಾಡಿರುವ ಬಗ್ಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಧಾರವಾಡದ ಸಿಡಾಕ್ ಸಹಯೋಗದಲ್ಲಿ ಕಾರ್ಯಕ್ರಮವೊಂದರಲ್ಲಿ ಭರವಸೆ ನೀಡಿದ್ದರು.
ಇಲ್ಲೊಂದು ಫುಡ್ ಪಾರ್ಕ್ ಸ್ಥಾಪಿಸುವ ಯೋಜನೆ ಇದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಇದಕ್ಕೆ ಸಬ್ಸಿಡಿ ದೊರೆಯಲಿದ್ದು,ಪ್ರತಿ ಜಿಲ್ಲೆಯಲ್ಲಿಯೂ ಒಂದೊಂದು ಸೆಕ್ಟರ್ ಆರಂಭಿಸುವ ಯೋಚನೆ ಮಾಡಲಾಗಿದೆ ಎಂದು ನಿರಾಣಿ ಹೇಳಿದ್ದರು.
ಎನ್ನಾರೆನ್ ಪ್ರತಿಕ್ರಿಯೆ: ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಕಂಪನಿಗಳ ಸ್ಥಾಪನೆ ಅಷ್ಟು ಸುಲಭವಲ್ಲ. ಹುಬ್ಬಳ್ಳಿ ಭಾಗಕ್ಕೆ ಐಟಿ ಕಂಪನಿಗಳ ಪರಿಚಯ ಇದ್ದೇ ಇದೆ. ಆದರೆ, ಹುಬ್ಬಳ್ಳಿ-ಧಾರವಾಡದಲ್ಲಿ ಮೂಲ ಸೌಕರ್ಯ ಕೊರತೆ ಇದೆ. ಫೈವ್ ಸ್ಟಾರ್ ಹೋಟೆಲ್ ಗಳು, ಪ್ರಮುಖ ಮೆಟ್ರೋ ನಗರಗಳಿಗೆ ಸಂಪರ್ಕ ಒದಗಿಸುವ ವಿಮಾನ ನಿಲ್ದಾಣ, ಆಂಗ್ಲ ಮಾಧ್ಯಮ ಶಾಲೆಗಳು ಹೆಚ್ಚಾಗಬೇಕು. ಹೆಚ್ಚೆಚ್ಚು ವೃತ್ತಿಪರರನ್ನು ಇಲ್ಲೇ ಸೃಷ್ಟಿಸಿದರೆ, ಸ್ಥಳೀಯರಿಗೆ ಉದ್ಯೋಗ ಹಾಗೂ ಸಂಸ್ಥೆ ಸ್ಥಾಪನೆ ಕಷ್ಟವಾಗುವುದಿಲ್ಲ
ಹುಬ್ಬಳ್ಳಿಯಲ್ಲಿ ಪ್ರತಿಭೆಗಳಿಗೆ ಬರವಿಲ್ಲ. ಆದರೆ, ಮೂಲ ಸೌಕರ್ಯ ಅಭಿವೃದ್ಧಿಯಾಗದಿದ್ದರೆ ಯಾವ ಕಂಪನಿಯೂ ಇತ್ತ ಕಡೆ ಮುಖ ಮಾಡುವುದಿಲ್ಲ. ಸರ್ಕಾರ, ಎನ್ ಜಿಒಗಳು ಹಾಗೂ ಸಾರ್ವಜನಿಕರು ಈ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಐಟಿ ಕಂಪನಿಗಳು ಬಂದರೆ ಭರಪೂರ ಉದ್ಯೋಗ ಅವಕಾಶಗಳನ್ನು ಹೊತ್ತು ತರುವುದಂತೂ ನಿಜ ಎಂದು ನಾರಾಯಣ ಮೂರ್ತಿ ಹೇಳಿದ್ದರು.