ಆ್ಯನಿಮೇಷನ್ ಉದ್ಯಮದತ್ತ ಕೊನೆಗೂ ಕಣ್ಬಿಟ್ಟ ಸರಕಾರ
ಬೆಂಗಳೂರು, ಆಗಸ್ಟ್ 31: ದೇಶೀಯವಾಗಿ ಸ್ವಯಂಬಲದ ಮೇಲೆ ಪ್ರವರ್ಧಮಾನಕ್ಕೆ ಬಂದಿರುವ ಆ್ಯನಿಮೇಷನ್ ಉದ್ಯಮದತ್ತ ಸರಕಾರ ಕೊನೆಗೂ ಕಣ್ಣುಬಿಟ್ಟಿದೆ.
ತೆರಿಗೆ ಪಾವತಿ ಸೇರಿದಂತೆ ನಾನಾ ಬೇಡಿಕೆಗಳನ್ನು ಮುಂದಿಟ್ಟು ಆ್ಯನಿಮೇಷನ್ ಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ನೀತಿ ಜಾರಿಗೊಳಿಸುವಂತೆ ಹತ್ತಾರು ವರ್ಷಗಳಿಂದ ಬೇಡಿಕೆಯಿಟ್ಟಿದ್ದ ಉದ್ಯಮಕ್ಕೆ ಊರುಗೋಲಾಗಲು ಮಾಹಿತಿ ತಂತ್ರಜ್ಞಾನ ಸಚಿವ ಎಸ್ ಆರ್ ಪಾಟೀಲ್ ನಿರ್ಧರಿಸಿದ್ದಾರೆ.
ಆ್ಯನಿಮೇಷನ್ ಉದ್ಯಮದಲ್ಲಿ ವಿಫುಲ ಉದ್ಯೋಗವಕಾಶ ಇರುವುದರಿಂದ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಆ್ಯನಿಮೇಷನ್ ಅಭಿವೃದ್ಧಿಗೆ ಸರ್ಕಾರ ನೆರವು ನೀಡಲಿದೆ ಎಂದು ಇದೇ ಸಂದರ್ಭದಲ್ಲಿ ಪಾಟೀಲ್ ಸ್ಪಷ್ಟಪಡಿಸಿದರು.
ಬೆಂಗಳೂರಿನ ಆ್ಯನಿಮೇಷನ್ ಉದ್ದಿಮೆಗಳು ನೀಡಿದ ಸಲಹೆಯ ಮೇರೆಗೆ ಹೊಸ ನೀತಿ ರೂಪಿಸಲಾಗಿದೆ. ಇದು ರಾಜ್ಯದ ಮಾನವ ಸಂಪನ್ಮೂಲಗಳ ಸದ್ಬಳಕೆ ಹಾಗೂ ಉದ್ಯೋಗ ಅವಕಾಶ ಹೆಚ್ಚಲು ಕಾರಣವಾಗುತ್ತದೆ ಎಂದು ಅವರು ನಗರದಲ್ಲಿ ಕರ್ನಾಟಕ ಆ್ಯನಿಮೇಷನ್ ಸಮ್ಮೇಳನ ಉದ್ಘಾಟಿಸಿ ಅಭಿಪ್ರಾಯಪಟ್ಟಿದ್ದಾರೆ.
ಆ್ಯನಿಮೇಷನ್ ಹಾಗೂ ಡಿಜಿಟಲ್ ಕಲೆ ಎನ್ನುವುದು ನಗರಕ್ಕೆ ಸೀಮಿತವಾಗಬಾರದು. ಗ್ರಾಮೀಣ ಭಾಗದ ಜನತೆಯೂ ಉತ್ತಮ ಜ್ಞಾನ ಹೊಂದಿರುತ್ತಾರೆ. ಉದ್ದಿಮೆಗಳು ಅವರ ಕೌಶಲ್ಯ ವೃದ್ಧಿಗೆ ಸಹಕರಿಸಬೇಕು. ಇದರಿಂದ ಉದ್ದಿಮೆಗೆ ಲಾಭ ಹೆಚ್ಚಲಿದೆ ಎಂದು ಅವರು ಹೇಳಿದರು.