ಭೈರಪ್ಪ, ಮಧುರ ಅವರಿಗೆ ಮೈಸೂರಿನಲ್ಲಿ ಸನ್ಮಾನ
ಬೆಂಗಳೂರು, ಆ. 30 : ಕನ್ನಡದ ಸೃಜನಶೀಲ ಲೇಖಕರಲ್ಲಿ ಒಬ್ಬರಾಗಿರುವ ಡಾ. ಎಸ್.ಎಲ್. ಭೈರಪ್ಪ (81) ಮತ್ತು ತಮ್ಮ ಇಡೀ ಜೀವನವನ್ನು ದೃಷ್ಟಿಹೀನರಿಗಾಗಿ ಮುಡಿಪಾಗಿಟ್ಟಿರುವ ಸಮಾಜಸೇವಕಿ ಬಿ.ಎಸ್. ಮಧುರ (78) ಅವರನ್ನು ಮೈಸೂರಿನ ವನಮಾಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೈಸೂರಿನಲ್ಲಿ ಆ.31, ಶನಿವಾರ ಆತ್ಮೀಯವಾಗಿ ಸನ್ಮಾನಿಸಲಾಗುತ್ತಿದೆ.
ಆಗಸ್ಟ್ 20ರಂದು 81ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಖ್ಯಾತ ಕಾದಂಬರಿಕಾರ ಮತ್ತು 'ಸರಸ್ವತಿ ಸಮ್ಮಾನ್' ಪ್ರಶಸ್ತಿಗೆ ಭಾಜನರಾಗಿರುವ ಡಾ. ಎಸ್.ಎಲ್. ಭೈರಪ್ಪ ಅವರು ಶ್ರೀ ವನಮಾಲಿ ಸೇವಾಪ್ರಶಸ್ತಿಗೆ ಭಾಜನರಾಗಿದ್ದರೆ, 'ಲೋಕಸೇವಾನಿರತೆ' ಮತ್ತು 'ದೃಷ್ಟಿದೇವತೆ' ಮುಂತಾದ ಬಿರುದು ಗಳಿಸಿರುವ ಮಧುರ ಅವರು ಪದ್ಮಶ್ರೀ ಡಾ. ಮತ್ತೂರು ಕೃಷ್ಣಮೂರ್ತಿ ಗೌರವ ಪ್ರಶಸ್ತಿಯನ್ನು ಪಡೆಯಲಿದ್ದಾರೆ.
ನಾದಬ್ರಹ್ಮ ಸಂಗೀತಸಭಾ, ಶ್ರೀ ವಾಸುದೇವಾಚಾರ್ಯ ಭವನ, ಜೆ.ಎಲ್.ಬಿ ರಸ್ತೆ, ಮೈಸೂರು - ಸ್ಥಳದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ಸಂಜೆ 5 ಗಂಟೆಗೆ ನೆರವೇರಲಿದೆ. ಖ್ಯಾತ ಸಾಹಿತಿಗಳಾದ ಡಾ. ಪ್ರಧಾನ್ ಗುರುದತ್ತ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪರ್ವ, ದಾಟು, ತಂತು, ಆವರಣ, ಮಂದ್ರ ಮುಂತಾದ ವೈಚಾರಿಕ ಕಾದಂಬರಿಗಳನ್ನು ಬರೆದಿರುವ ಭೈರಪ್ಪನವರ ಬಗ್ಗೆ ಬಹುಭಾಷಾ ವಿದ್ವಾಂಸ, ಶತಾವಧಾನಿ ಡಾ ಆರ್. ಗಣೇಶ್ ಅವರು ಮಾತನಾಡಲಿದ್ದಾರೆ. ಮೈಸೂರು ನೇತ್ರ ಭಂಡಾರದ ಗೌರವ ನಿರ್ದೇಶಕರಾಗಿರುವ ಬಿ.ಎಸ್. ಮಧುರ ಅವರ ಕುರಿತು ಮೈಸೂರು ಆಕಾಶವಾಣಿ ನಿವೃತ್ತ ನಿರ್ದೇಶಕರಾಗಿರುವ ಡಾ. ಎಂ.ಎಸ್. ವಿಜಯಾಹರನ್ ಅವರು ಮಾತನಾಡಲಿದ್ದಾರೆ. [ಮಧುರ ಅವರ ವ್ಯಕ್ತಿಚಿತ್ರ]