ಬೆಂಗಳೂರು ಸಮೀಪ ಬೃಹತ್ ಬಸವಣ್ಣ ಪ್ರತಿಮೆ
ಸುಮಾರು 5 ಕೋಟಿ ರು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಪ್ರತಿಮೆಯ ಎತ್ತರ ಸುಮಾರು 111 ಅಡಿ ಮೀರಲಿದೆ. ಬಸವ ಧರ್ಮ ಪೀಠದ ಮುಖ್ಯಸ್ಥೆ ಮಾತೆ ಮಹಾದೇವಿ ಅವರು ಪ್ರತಿಮೆ ನಿರ್ಮಾಣದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು.
ಸುಮಾರು 30 ಅಡಿ ತಳಪಾಯದ ಮೇಲೆ ಬೃಹತ್ ಬಸವ ಮೂರ್ತಿ ನೆಲೆ ನಿಲ್ಲಲಿದೆ. ತಳಪಾಯದಲ್ಲಿ ಬಸವಣ್ಣ ಅವರ ಆಯ್ದ ವಚನಗಳನ್ನು ಕೆತ್ತಲಾಗುತ್ತದೆ. ಬಸವ ತತ್ತ್ವ ಹಾಗೂ ಬಸವಣ್ಣ ಅವರ ಸಾಮಾಜಿಕ ಕ್ರಾಂತಿಯ ಬಗ್ಗೆ ಇನ್ನಷ್ಟು ಜನರಿಗೆ ತಿಳಿಯಲಿ ಎಂಬ ಉದ್ದೇಶದಿಂದ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಕೈ ಹಾಕಲಾಗಿದೆ ಎಂದು ಮಾತೆ ಮಹಾದೇವಿ ಹೇಳಿದರು.
ಲಿಂಗಾಯತ ಎಂಬುದು ಜಾತಿ ಅಥವಾ ಸಮುದಾಯವಲ್ಲ, ಲಿಂಗಾಯತ ಎಂಬುದು ಧರ್ಮ. ಲಿಂಗಾಯತರಿಗೆ ಸೂಕ್ತ ಸ್ಥಾನ ಸಿಗಲು ನಮ್ಮ ಹೋರಾಟ ಮುಂದುವರೆಯಲಿದೆ ಎಂದರು. ಲಿಂಗಾಯತರಂತೆ ಜೈನ, ಸಿಖ್, ಪಾರ್ಸಿ, ಬೌದ್ಧ ರಂತೆ ಲಿಂಅಗಯತ ಕೂಡಾ ಪ್ರತ್ಯೇಕ ಧರ್ಮ. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ತಿಳಿ ಹೇಳಬೇಕು. ಲಿಂಗಾಯತರಿಗೆ ಪ್ರತ್ಯೇಕ ಆಚಾರ ವಿಚಾರಗಳಿದೆ, ಸಂಪ್ರದಾಯ ಕಟ್ಟಳೆ, ಧಾರ್ಮಿಕ ವಿಧಿ ವಿಧಾನಗಳಿವೆ ಎಂದು ಮಾತೆ ಮಹಾದೇವಿ ಹೇಳಿದರು.
ಬಸವಣ್ಣ ಅವರ ಜೀವನ ಮತ್ತು ಸಂದೇಶಗಳ ಬಗ್ಗೆ ಜನತೆ ಅರಿವು ಮೂಡಿಸಲು ದೊಡ್ಡ ಮಟ್ಟದ ಅಭಿಯಾನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಲಿಂಗಾಯತ ರಾಜಕಾರಣಿಗಳು ಲಿಂಗಾಯತ ಧರ್ಮಕ್ಕೆ ಹೆಚ್ಚಿನ ಸ್ಥಾನ ಮಾನ ಸಿಗುವಂತೆ ಮಾಡಲು ಶ್ರಮಿಸುತ್ತಿಲ್ಲ ಎಂದು ಮಾತೆ ಮಹಾದೇವಿ ವಿಷಾದ ವ್ಯಕ್ತಪಡಿಸಿದರು.