ತುಮಕೂರು : ಒಂಟಿಸಲಗದ ದಾಳಿಗೆ ವ್ಯಕ್ತಿ ಬಲಿ
ಗುಬ್ಬಿ ತಾಲೂಕಿನ ಬಿಳಿಕಲ್ಲು ಪಾಳ್ಯ ಬಳಿ ಗುರುವಾರ ಬೆಳಗ್ಗೆ ಹೊಲಕ್ಕೆ ತೆರಳುತ್ತಿದ್ದ ಹನುಮಂತಯ್ಯ (58) ಎಂಬ ವ್ಯಕ್ತಿ ಆನೆದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಒಂಟಿ ಸಲಗ ಗ್ರಾಮದ ಬಳಿಯ ಕಾಡಿನಲ್ಲಿ ಬೀಡು ಬಿಟ್ಟಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಒಂಟಿ ಸಲಗ ಆಗಮಿಸಿರುವ ಸುದ್ದಿ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಗ್ರಾಮದ ಕಾಡಿನೊಳಗೆ ಒಂಟಿ ಸಲಗ ಬೀಡು ಬಿಟ್ಟಿದೆ ಎಂದು ವಲಯ ಅರಣ್ಯಾಧಿಕಾರಿ ಹರೀಶ್ ಹೇಳಿದ್ದಾರೆ. ಪಳಗಿದ ಆನೆಗಳನ್ನು ಕರೆತಂದು ಒಂಟಿ ಸಲಗ ಸೆರೆ ಹಿಡಿಯುವುದಾಗಿ ಅವರು ಹೇಳಿದ್ದಾರೆ.
ಪರಿಹಾರ ವಿತರಣೆ : ಮೃತ ಹನುಮಂತಯ್ಯ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ ತಕ್ಷಣ 1 ಲಕ್ಷ ರೂ. ಪರಿಹಾರ ನೀಡಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಐದು ಲಕ್ಷ ರೂ.ಗಳ ಪರಿಹಾರ ವಿತರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಎಲ್ಲಿಂದ ಬಂದಿದೆ ಆನೆ : ಮಂಗಳವಾರ ಚಿತ್ರದುರ್ಗದ ಹಿರಿಯೂರಿನಲ್ಲಿ ಒಂಟಿ ಸಲಗ ಕಾಣಿಸಿಕೊಂಡು, ಒಬ್ಬ ವ್ಯಕ್ತಿಯನ್ನು ಕೊಂದು ಹಾಕಿತ್ತು. ಬುಧವಾರ ಕಾರ್ಯಚರಣೆ ಮಾಡಿದ ಅರಣ್ಯ ಇಲಾಖೆ ಸಿಬ್ಭಂದಿಗಳು ಅದನ್ನು ಕಾಡಿಗಟ್ಟಿದ್ದರು. (ನರಹಂತಕ ಒಂಟಿ ಸಲಗ ಕಾಡಿಗೆ)
ಅದೇ ಆನೆ ಗುಬ್ಬಿಯಲ್ಲಿ ಕಾಣಿಸಿಕೊಂಡಿರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ಕಳೆದ ಒಂದು ವಾರದಿಂದ ಗುಬ್ಬಿಯ ಕಾಡಿನಲ್ಲಿ ಒಂಟಿ ಸಲಗ ಓಡಾಡುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಸಕ್ಕರೆಬೈಲಿನ ಆನೆ : ಒಂಟಿ ಸಲಗವನ್ನು ಪಳಗಿದ ಆನೆಗಳ ಸಹಾಯದಿಂದ ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಆದ್ದರಿಂದ ಸಕ್ಕರೆಬೈಲು ಆನೆ ಕ್ಯಾಪಿನಿಂದ ಎರಡು ಆನೆಗಳನ್ನು ಗುಬ್ಬಿಗೆ ಕರೆತರಲಾಗುತ್ತಿದೆ.