ದಶಕಂಠ ರಾವಣನ ಪತ್ನಿ ಮಂಡೋದರಿ ವಿಶ್ವಾಸಘಾತಕಿ
'ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರಿ ತಥಾ, ಪಂಚಕನ್ಯಾ ಸ್ಮರೇನಿತ್ಯಂ ಮಹಾಪಾಪ ವಿನಾಶನಂ' ಎನ್ನುವ ಶ್ಲೋಕವನ್ನು ಹಿಂದೂ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇತ್ತೀಚೆಗೆ ಬಿಡುಗಡೆಗೊಂಡ ಪುಸ್ತಕವೊಂದರಲ್ಲಿ ರಾವಣ ಪತ್ನಿ ಮಂಡೋದರಿಯನ್ನು ವಿಶ್ವಾಸದ್ರೋಹಿಯೆಂದು ಬಿಂಬಿಸಲಾಗಿದೆ.
ಲಂಕಾಧಿಪತಿ ದಶಕಂಠ ರಾವಣನ ಬಗ್ಗೆ ಶ್ರೀಲಂಕಾದ ವಿಜಿತಾ ಯಾಪ ಪಬ್ಲಿಕೇಷನ್ಸ್ ಹೊಸದೊಂದು ಪುಸ್ತಕ ಬಿಡುಗಡೆ ಮಾಡಿದೆ. 'ರಾವಣ, ದಿ ಕಿಂಗ್ ಆಫ್ ಲಂಕಾ' ಎನ್ನುವ ಪುಸ್ತಕದಲ್ಲಿ, ಲಂಕಾಧಿಪತಿ ರಾವಣ ಒಬ್ಬ ಅದ್ಭುತ ಆಡಳಿತಗಾರ. ತನ್ನ ಸಾಮ್ರಾಜ್ಯವನ್ನು ರಕ್ಷಿಸುವ ಸಲುವಾಗಿ ಅತ್ಯದ್ಭುತ ಸುರಂಗ ಮಾರ್ಗವನ್ನು ಸೃಷ್ಟಿಸಿದ್ದ ಎಂದು ಹೇಳಿದೆ.
ಪುಸ್ತಕದಲ್ಲಿ ರಾವಣ ಮಹಾನ್ ಪರಾಕ್ರಮಿ, ಯುದ್ದದಲ್ಲಿ ಅವನು ಸೋಲುತ್ತಿರಲಿಲ್ಲ. ಆದರೆ ಹೆಂಡತಿ ಮಂಡೋದರಿ ಮತ್ತು ತಮ್ಮ ವಿಭೀಷಣನ ನಂಬಿಕೆ ದ್ರೋಹದಿಂದ ಯುದ್ದ ಸೋಲುವಂತಾಯಿತು.
174 ಪುಟಗಳ ಈ ಪುಸ್ತಕದಲ್ಲಿ ಯುದ್ದದ ಸಮಯದಲ್ಲಿ ಲಂಕಾ ಸೇನೆಯ ಮತ್ತು ಯುದ್ದ ತಂತ್ರಗಳ ಕೆಲವೊಂದು ರಹಸ್ಯಗಳನ್ನು ರಾವಣನ ಪತ್ನಿ ಮತ್ತು ಸಹೋದರ ವಿರೋಧಿಗಳ ಕಿವಿ ತಲುಪಿಸಿದ್ದರಿಂದ ರಾವಣ ಯುದ್ದದಲ್ಲಿ ಸೋಲುವಂತಾಯಿತು ಮತ್ತು ವಿಷಯುಕ್ತ ಬಾಣ ಪ್ರಯೋಗದಿಂದ ರಾವಣ ವೀರ ಮರಣವನ್ನಪ್ಪಿದ ಎಂದು ಹೇಳಲಾಗಿದೆ.
ಶ್ರೀಲಂಕಾದ ನಿವಾಸಿ ಒಬೇ ಶೇಖರೇ ಎನ್ನುವವರು ಪ್ರಾಚೀನ ಶೋಧಕ ಮತ್ತು ತಾಳೆಗರಿ ಮೂಲಕ ತಿಳಿಯಲ್ಪಟ್ಟ ಸಂಗತಿಗಳ ಗಂಭೀರ ಸಂಶೋಧನೆಯ ವರದಿಯನ್ನು ಆಧರಿಸಿ ಈ ಪುಸ್ತಕವನ್ನು ಮುದ್ರಿಸಲಾಗಿದೆ.
ಪುಸ್ತಕದಲ್ಲಿನ ಕುತೂಹಲಕಾರಿ ಅಂಶಗಳು ಸ್ಲೈಡಿನಲ್ಲಿ...
ರಾವಣನ ಸಾಮ್ರಾಜ್ಯ
ರಾವಣನ ಸಾಮ್ರಾಜ್ಯ ವಿಶಾಲವಾಗಿ ಬೆಳೆದಿತ್ತು. ಈಗಿನ ನೂವಾರ ಎಲಿಯ,ಬದುಲ್ಲಾ, ಪೊಲನ್ನುರುವಾ, ಅನುರಾಧಾಪುರ, ಕ್ಯಾಂಡಿ, ಮೊನರುಗುಲಾ, ಮತಾನೆ ಮತ್ತು ಚಿಲ್ವಾ ಪದೇಶದವರೆಗೂ ರಾವಣ ಸಾಮ್ರಾಜ್ಯ ವಿಸ್ತರಿಸಿತ್ತು ಎಂದು ಪುಸ್ತಕದಲ್ಲಿ ಉಲ್ಲೇಖಿಸಿಲಾಗಿದೆ.
ಲಂಕಾಧಿಪತಿ ರಾವಣ
ರಾವಣನ ಸಾಮ್ರಾಜ್ಯ ನಾಗರೀಕತೆಯ ಉತ್ತುಂಗದಲ್ಲಿತ್ತು. ಸಾಂಸ್ಕೃತಿಕ ಪರಂಪರೆಗೆ ರಾವಣನ ಸಾಮ್ರಾಜ್ಯದಲ್ಲಿ ವಿಶೇಷ ಗಮನ ನೀಡಲಾಗಿತ್ತು. ಸಂಸ್ಕೃತಿ ಮತ್ತು ಪರಂಪರೆ ಶ್ರೀರಾಮಚಂದ್ರನ ಮೂಲಕ ನೆಲಸಮವಾಯಿತು ಎಂದು ಪುಸ್ತಕದಲ್ಲಿ ಬರೆದಿದೆ.
ರಾವಣನ ವಾಸಸ್ಥಳ
ಹತ್ತುತಲೆಯ ರಾವಣ ಸಿಗಿರಿಯಾ ಎನ್ನುವ ಪ್ರದೇಶದಲ್ಲಿ ನೆಲೆಸಿದ್ದ. ಇದು ಕೊಲಂಬೋದಿಂದ 170 ಕಿಲೋಮೀಟರ್ ದೂರದಲ್ಲಿದೆ. ಈಗ ಇದು ಯುನೆಸ್ಕೋ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿದೆ. ರಾವಣ ಒಬ್ಬ ಬುದ್ದಿವಂತ ಕುಟುಂಬದ ಸದಸ್ಯನಾಗಿದ್ದ ಎಂದು ಪುಸ್ತಕದಲ್ಲಿ ಉಲ್ಲೇಖಿಸಿಲಾಗಿದೆ.
ರಾವಣನ ಹೆಸರು
ರಾವಣನ ಪ್ರಭಾವದಿಂದ ಕೆಲವು ಪ್ರದೇಶಗಳಿಗೆ ರಾವಣನ ಹೆಸರು ಇಡಲಾಗಿತ್ತು. ಇದಕ್ಕೆ ಕೊಡಬಹುದಾದ ಉದಾಹರಣೆಯೆಂದರೆ ಬದುಲ್ಲಾ ಜಿಲ್ಲೆಯಲ್ಲಿರುವ ರಾವಣ ಎಲ್ಲಾ, ರಾವಣ ಗುಹೆ, ಟ್ರಿಂಕೋಮಲೆ ಜಿಲ್ಲೆಯಲ್ಲಿರುವ ರಾವಣ ಕೋಟೆ, ರತ್ನಾಪುರ ಜಿಲ್ಲೆಯಲ್ಲಿರುವ ರಾವಣ ಕಂಡ, ರುಹಾನ ಇತ್ಯಾದಿ. ಕಂದ್ಯಾನ್ ಪ್ರಾಂತ್ಯದಲ್ಲಿರುವ ಎರಡು ಹಳ್ಳಿಗಳಿಗೆ ಉದರಾವಣ ಮತ್ತು ಯತಿರಾವಣ ಎಂದು ಹೆಸರಿಡಲಾಗಿದೆ.
ದೇವಾಲಯ
ತನ್ನ ತಂದೆ, ತಾಯಿಯ ಗೌರವಾರ್ಥ ರಾವಣ ದೇವಾಲಯವನ್ನು ನಿರ್ಮಿಸಿದ್ದ. ಉತ್ತರ ಕೊಲಂಬೋದ ಅನುರಾಧಪುರ ಎನ್ನುವಲ್ಲಿ ಈ ದೇವಾಲಯವನ್ನು ನಿರ್ಮಿಸಿದ್ದ. ನಂತರದ ದಿನಗಳಲ್ಲಿ ಪೋರ್ಚುಗೀಸರು ದೇವಾಲಯವನ್ನು ಧ್ವಂಸ ಮಾಡಿದರು ಎಂದು ಉಲ್ಲೇಖವಾಗಿದೆ.
ರಾವಣ ಸಾಮ್ರಾಜ್ಯದ ಪತನ
ಪ್ರಭು ಶ್ರೀರಾಮಚಂದ್ರನ ಪತ್ನಿ ಸೀತಾದೇವಿಯ ಅಪಹರಣದಿಂದ ಲಂಕಾ ಸಾಮ್ರಾಜ್ಯ ಪತನ ಆರಂಭವಾಯಿತು. ರಾಮ ಸಜ್ಜನ, ಬಲಾಢ್ಯ, ಯುದ್ದಪ್ರವೀಣ ನಾಗಿದ್ದ. ಈತನ ಮುಖ್ಯ ಉದ್ದೇಶ ಸತ್ಯಕ್ಕೆ ಜಯಸಿಗಬೇಕೆನ್ನುವುದು ಮರ್ಯಾದಾ ಪುರುಷೋತ್ತಮನ ನಿಲುವಾಗಿತ್ತು. ರಾವಣನೂ ಮಹಾನ್ ಪರಾಕ್ರಮಿ ಎಂದು ಎಂದು ಪುಸ್ತಕದಲ್ಲಿ ಉಲ್ಲೇಖಿಸಿಲಾಗಿದೆ.