ಅನ್ನಭಾಗ್ಯದ ಬಗ್ಗೆ ಹೇಳಿಕೆ, ಪಾಟೀಲ್ ಕ್ಷಮೆಗೆ ಆಗ್ರಹ
ಎಚ್.ಕೆ. ಪಾಟೀಲ್ ಬಗ್ಗೆ ನನಗೆ ಗೌರವ ಇತ್ತು. ಆದರೆ ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂಬುವುದು ಇದೀಗ ಸಾಬೀತಾಗಿದೆ. ಅವರು ಶುಕ್ರವಾರದೊಳಗೆ ಕ್ಷಮೆ ಯಾಚಿಸಬೇಕು. ಕ್ಷಮೆ ಯಾಚಿಸದಿದ್ದರೆ ಮಂತ್ರಿಮಂಡಲಕ್ಕೆ ರಾಜೀನಾಮೆ ನೀಡಬೇಕು. ರಾಜೀನಾಮೆಗೆ ನಿರಾಕರಿಸಿದರೆ ಅವರನ್ನು ಮುಖ್ಯಮಂತ್ರಿ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಅದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಎಚ್ ಕೆ ಪಾಟೀಲ್, 'ನನ್ನ ಮಾತುಗಳನ್ನು ತಿರುಚಿ ವರದಿ ಮಾಡಲಾಗಿದೆ. ನಾನು ಅನ್ನಭಾಗ್ಯ ಯೋಜನೆ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಮೊದಲಿನಿಂದಲೂ ಇಂಥ ಯೋಜನೆ ಬಗ್ಗೆ ಬೆಂಬಲ ನೀಡುತ್ತಾ ಬಂದಿದ್ದೇನೆ' ಎಂದಿದ್ದಾರೆ.
ಪ್ರಣಾಳಿಕೆ ಭರವಸೆಗಳು: ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಅನುಸಾರ ಬಡವರಿಗೆ ಕೆಜಿಗೆ 1 ರೂ.ನಂತೆ ಅಕ್ಕಿ ವಿತರಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವುದು ಪಕ್ಷದ ಶಿಸ್ತಿನ ಉಲ್ಲಂಘನೆಯಾಗಲಿದೆ ಎಂದು ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.
ಗದಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪಾಟೀಲ್ ಸರಕಾರದ ಈ ಯೋಜನೆ ಬಗ್ಗೆ ವಿರೋಧ ವ್ಯಕ್ತಪಡಿಸಿ ತಮ್ಮ ಜಿಲ್ಲೆಯಲ್ಲಿ ಇದನ್ನು ಹೇಗೆ ಜಾರಿ ಮಾಡುತ್ತಾರೆ. ಈ ಯೋಜನೆಗೆ ವಿರೋಧ ವ್ಯಕ್ತಪಡಿಸುವ ಮನಸ್ಸಾದರೂ ಹೇಗೆ ಬಂತು ಎಂದು ಪೂಜಾರಿ ಪ್ರಶ್ನಿಸಿದ್ದಾರೆ.
ಕೇಂದ್ರ ಸರಕಾರ ಜಾರಿಗೆ ತಂದಿರುವ ಆಹಾರ ಭದ್ರತಾ ಯೋಜನೆ 82 ಕೋಟಿ ಜನರಿಗೆ ನೆರವಾಗಲಿದೆ. ದೇಶದ ಶ್ರೀಮಂತ ಉದ್ಯಮಿಗಳಿಗೆ ಸಾವಿರಾರು ಕೋ.ರೂ. ನೆರವು ನೀಡುತ್ತಿರುವಾಗ ಬಡವರಿಗೆ ಕಡಿಮೆ ದರದಲ್ಲಿ ಅಕ್ಕಿ ವಿತರಿಸುತ್ತಿರುವುದರಿಂದ ಸರಕಾರಕ್ಕೆ ಯಾವುದೇ ನಷ್ಟ ಆಗುವುದಿಲ್ಲ. ಈ ಯೋಜನೆಯಿಂದ ಎಪಿಎಲ್ ಕಾರ್ಡ್ ದಾರರಿಗೆ ಕೂಡ ಅನುಕೂಲವಾಗಲಿದೆ ಎಂದು ಪೂಜಾರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್, ಸುರೇಶ್ ಬಳ್ಳಾಲ್, ಅರುಣ್ ಕುವೆಲ್ಲೊ ಹಾಜರಿದ್ದರು.