ಬೆಂಗಳೂರಿನಲ್ಲಿ ಆರಂಭವಾಗಲಿದೆ ನಮೋ ಬ್ರಿಗೇಡ್!
ಬೆಂಗಳೂರಿನ ಜಯನಗರದ ಬಿಬಿಎಂಪಿ ಶಟ್ಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಜು.14ರಂದು ಬೆಳಗ್ಗೆ 10 ಗಂಟೆಗೆ ಅಧಿಕೃತವಾಗಿ 'ನಮೋ ಬ್ರಿಗೇಡ್' ಉದ್ಘಾಟನೆಯಾಗಲಿದೆ. ನರೇಂದ್ರ ಮೋದಿಯವರನ್ನು ಪ್ರಧಾನಿ ಕುರ್ಚಿಮೇಲೆ ಕೂರಿಸುವುದೇ ಬ್ರಿಗೇಡ್ ಮುಖ್ಯ ಉದ್ದೇಶ.
ನಮೋ ಬ್ರಿಗೇಡ್ ಬಿಜೆಪಿ ಪಕ್ಷದ ಅಂಗ ಸಂಸ್ಥೆಯಲ್ಲ ಬೇರೆ ಬೇರೆ ಪಕ್ಷದ ಕಾರ್ಯಕರ್ತರು. ಐಟಿ, ಬಿಟಿ ಉದ್ಯೋಗಿಗಳು ಈ ಬ್ರಿಗೇಡ್ ಸದಸ್ಯರಾಗಿದ್ದಾರೆ. ಇವರೆಲ್ಲರ ಏಕಮಾತ್ರ ಉದ್ದೇಶ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಮಾಡುವುದು.
ಬ್ರಿಗೇಡ್ ಉದ್ದೇಶ : ಲೋಕಸಭೆ ಚುನಾವಣೆ ಘೋಷಣೆ ಆಗುವವರೆಗೆ ನರೇಂದ್ರ ಮೋದಿ ಅವರ ಸಾಧನೆಯನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಬ್ರಿಗೇಡ್ ಮಾಡಲಿದೆ. ಆ ಮೂಲಕ ಮೋದಿ ಅವರಿಗೆ ಸದೃಢ ದೇಶ ನಿರ್ಮಾಣಕ್ಕಾಗಿ ಬೆಂಬಲ ನೀಡಲಿದೆ.
ಕರಪತ್ರ, ಇ-ಮೇಲ್, ಎಸ್ಎಂಎಸ್ ಮೂಲಕ ಜನರಗೆ ಮೋದಿ ಸಾಧನೆಯ ಸಂದೇಶ ಸಾರಲು ನಮೋ ಬ್ರಿಗೇಡ್ ಸಿದ್ಧವಾಗಿದೆ. ಭಾರತ ಅಭಿವೃದ್ಧಿಯಾಗಬೇಕು ಎಂದರೆ ಅದು ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ ಎಂಬ ಸಂದೇಶವನ್ನು ಬ್ರಿಗೇಡ್ ಜನರಿಗೆ ತಲುಪಿಸಲಿದೆ.
ಮಿಸ್ಡ್ಕಾಲ್ ಕೊಡಿ ಬ್ರಿಗೇಡ್ ಸೇರಿ : ಅಣ್ಣಾ ಹಜಾರೆ ಲೋಕಪಾಲ ಮಸೂದೆ ಜಾರಿಗೆ ಮಾಡಿದಂತಹ ತಂತ್ರವನ್ನು ನಮೋ ಬ್ರಿಗೇಡ್ ಅನುಸರಿಸಲಿದೆ. ನೀವು ಒಂದು ಮಿಸ್ ಕಾಲ್ ಕೊಟ್ಟಿ ಅಭಿಯಾನ ಬೆಂಬಲಿಸಬಹುದು, ಬ್ರಿಗೇಡ್ ಸೇರಬಹುದು.
ನರೇಂದ್ರ ಮೋದಿ ಸಾಧನೆಯನ್ನು ಜನರಿಗೆ ತಲುಪಿಸಲು ನಮೋ ಬ್ರಿಗೇಡ್ ವೆಬ್ ಸೈಟ್ ಸಹ ಜು.14ರಂದು ಪ್ರಾರಂಭವಾಗಲಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ವೆಬ್ಸೈಟ್ ಇರಲಿದ್ದು, ಇದರ ಜವಾಬ್ದಾರಿಯನ್ನು 7 ಜನರ ತಂಡ ನಿರ್ವಹಿಸಲಿದೆ.
ನಮೋ ಬ್ರಿಗೇಡ್ ಸಂಯೋಜಕರಲ್ಲೊಬ್ಬರಾದ ನರೇಶ್ ಶೆಣೈ ಅವರು ಹೇಳುವಂತೆ, ಆ.15ರಂದು ಬೆಂಗಳೂರು, ಮಂಗಳೂರಲ್ಲಿ ಬೈಕ್ ಜಾಥಾ, ಸೆ.17ರಂದು ರಕ್ತದಾನ ಶಿಬಿರ ಕಾರ್ಯಕ್ರಮಗಳನ್ನು ಬ್ರಿಗೇಡ್ ಹಮ್ಮಿಕೊಂಡಿದೆ.