ಮಾಧ್ಯಮ, ಮಹಿಳೆಯೆದಿರು ನಗ್ನವಾದ ಸ್ವಾಮೀಜಿ!
ಮಾಧ್ಯಮದೆದಿರು ಮಾತ್ರವಲ್ಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕ ಓಬಳಪ್ಪ ಮತ್ತು ಅಲ್ಲಿರುವ ಮಹಿಳಾ ಉದ್ಯೋಗಿಗಳ ಎದುರಿಗೇ ಮಾನಗೇಡಿ ಸ್ವಾಮೀಜಿ ತನ್ನ ನಗ್ನದರ್ಶನ ಮಾಡಿದ್ದಾನೆ. ಆ ಮಾನಗೇಡಿ ಸ್ವಾಮೀಜಿಯ ಹೆಸರು ಸದಾಶಿವಯ್ಯ ಅಪ್ಪಯ್ಯ. ಇಂಥ ಮನುಷ್ಯನಿಗೆ ಸ್ವಾಮೀಜಿ ಅಂತ ಕರೆಯುವುದೂ ಅವಮಾನಕರ.
ನಡೆದಿದ್ದೇನು? : ಬೆಳಗಾವಿ ಜಿಲ್ಲೆಯ ಜಿಂಜರವಾಡದಲ್ಲಿರುವ ಲಿಂಗಾಯತ ಮಠದ ಸ್ವಾಮೀಜಿಯಾಗಿರುವ ಅಪ್ಪಯ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಿಳಿಸದೆ ಇಬ್ಬರು ಬಾಲಕಿಯರನ್ನು ದತ್ತು ತೆಗೆದುಕೊಂಡಿದ್ದಲ್ಲದೆ 6 ವರ್ಷದ ಅಮಾಯಕ ಬಾಲಕಿಗೆ ಸನ್ಯಾಸ ದೀಕ್ಷೆ ನೀಡಿದ್ದ. ಇದು ಇಲಾಖೆಗೆ ತಿಳಿದು ಇಬ್ಬರು ಬಾಲಕಿಯರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ಆ ಮಕ್ಕಳನ್ನು ಭೇಟಿಯಾಗಲು ಕಾವಿಧಾರಿ ಅಪ್ಪಯ್ಯ ಇಲಾಖೆಗೆ ಬಂದಿದ್ದಾನೆ. ಆಗ ಸಹಜವಾಗಿ ಮಾಧ್ಯಮದವರು ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆಗ ಎಲ್ಲರೂ ಬೆಚ್ಚಿಬೀಳುವಂತೆ ಜುಬ್ಬಾವನ್ನು ಮೇಲೆತ್ತಿ ಸೊಂಟಕ್ಕೆ ಕಟ್ಟಿಕೊಂಡ ಕೇಸರಿ ಪಂಚೆಯನ್ನು ಕಳಚಿಬಿಟ್ಟಿದ್ದಾನೆ. ಆತ ಪಂಚೆಯೊಳಗೆ ಲಂಗೋಟಿಯನ್ನು ಕೂಟ ಕಟ್ಟಿರಲಿಲ್ಲ.
ಇದನ್ನು ನೋಡುತ್ತಿದ್ದಂತೆ ಅಲ್ಲಿದ್ದ ಮಹಿಳಾ ಉದ್ಯೋಗಿಗಳು ದಿಗ್ಮೂಢರಾಗಿ ಕಣ್ಣುಮುಚ್ಚಿಕೊಂಡು ಒಳಗಡೆ ಓಡಿಹೋಗಿದ್ದಾರೆ. ಆಗ ಅಲ್ಲಿದ್ದ ಕೆಲಸ ಗಂಡಸರೇ ಆತನಿಗೆ ಬಲವಂತವಾಗಿ ಪಂಚೆಯನ್ನು ಉಡಿಸಿದ್ದಾರೆ. ಅಷ್ಟರಲ್ಲಾಗಲೆ ಆಗಬಾರದ್ದು ಆಗಿಹೋಗಿತ್ತು.
"ನನ್ನ ಮೇಲಿರುವ ಲೈಂಗಿಕ ದೌರ್ಜನ್ಯದ ಆರೋಪಗಳೆಲ್ಲ ಸುಳ್ಳು. ನಾನು ಎಲ್ಲ ಭೌತಿಕ ಸಂತೋಷಗಳನ್ನು ತ್ಯಜಿಸಿದವನು. ನಾನ್ಯಾಕೆ ಲೈಂಗಿಕ ದೌರ್ಜನ್ಯ ಎಸಗಲಿ. ನನಗೆ ಲೈಂಗಿಕ ವಾಂಛೆಗಳೇನೂ ಇಲ್ಲ. ಬೇಕಿದ್ದರೆ ನೀವೇ ನೋಡಿ" ಎಂದು ನಾಚಿಕೆ, ಮಾನ, ಮರ್ಯಾದೆ ಬಿಟ್ಟವನಂತೆ ಕಣ್ಣೀರುಗರೆಯುತ್ತ ಪಂಚೆಯನ್ನು ಕಳಚಿ ನಗ್ನನಾಗಿದ್ದಾನೆ.
ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಿಳಿಸದೆ ಮಕ್ಕಳನ್ನು ದತ್ತು ತೆಗೆದುಕೊಳ್ಳಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮಕ್ಕಳನ್ನು ಮಕ್ಕಳಿಗಾಗಲಿ ಮತ್ತು ದತ್ತು ನೀಡಿದ ಪಾಲಕರಿಗಾಗಲಿ ಮಕ್ಕಳನ್ನು ನೀಡುವುದಿಲ್ಲ ಎಂದು ಇಲಾಖೆಯ ನಿರ್ದೇಶಕ ಓಬಳಪ್ಪ ಅವರು ಖಡಾಖಂಡಿತವಾಗಿ ಹೇಳಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಮುಂದಿನ ವಾರಕ್ಕೆ ನಿಗದಿಪಡಿಸಲಾಗಿದೆ.
ಒಬ್ಬ ಲೈಂಗಿಕ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಕಾವಿಧಾರಿ ಸ್ವಾಮೀಜಿ, ಮತ್ತೊಬ್ಬ 10 ಕೋಟಿ ರು. ದುಡ್ಡು ಕೇಳಿ ಸಿಕ್ಕಿಬಿದ್ದ ಸ್ವಯಂಘೋಷಿತ ಸ್ವಾಮೀಜಿ, ಮಗದೊಬ್ಬ ಬಾಯಿಗೆ ಬಂದ ಪದಗಳನ್ನು ಉದುರಿಸುತ್ತ ರಿಯಾಲಿಟಿ ಶೋದಲ್ಲಿ ತನ್ನ ಮಾನ ಮರ್ಯಾದೆ ಕಳೆದುಕೊಂಡ ಕಾವಿಧಾರಿ ಗುರೂಜಿ, ಮಗದಿನ್ನೊಬ್ಬ ಲೈಂಗಿಕ ಸ್ವಾಮೀಜಿ ಜೊತೆ ಡೀಲ್ ಮಾಡಿಕೊಳ್ಳಲು ಹೋಗಿ ಸಿಕ್ಕುಬಿದ್ದವ, ಇನ್ನೊಬ್ಬ ಮಠದಲ್ಲಿನ ಮಹಿಳೆಯನ್ನೇ ಮುಕ್ಕಿದವ...
ಅತ್ಯುತ್ತಮವಾಗಿ ಕೆಲಸ ಮಾಡುತ್ತಿರುವ ಕೆಲವಾರು ಮಠಮಾನ್ಯಗಳ ನಡುವೆ ಇಂಥ ಹಲವಾರು ಕಾವಿಧಾರಿ ಸ್ವಾಮೀಜಿಗಳು ತುಂಬಿದ್ದು, ಸ್ವಾಮೀಜಿಗಳ ಬಗ್ಗೆಯೇ ಅಸಹ್ಯ ಹುಟ್ಟಿಸುವಂತೆ ವರ್ತಿಸುತ್ತಿದ್ದಾರೆ. ಈಗ ಬೆಳಗಾವಿಯ ಈ ಅಪ್ಪಯ್ಯ ಎಂಬ ನಾಚಿಕೆಗೇಡಿ ಮನುಷ್ಯ ಕಾವಿಗೇ ಅವಮಾನ ಮಾಡಿದ್ದಾನೆ. ಇಂಥವರನ್ನು ಜನರು ಅದ್ಹೇಗೆ ಸ್ವಾಮೀಜಿ ಎಂದು ಪೂಜಿಸುತ್ತಾರೋ?