ಇತಿಹಾಸ ಸೇರಲಿದೆ ಟೆಲಿಗ್ರಾಂ ವ್ಯವಸ್ಥೆ
ಹಳ್ಳಿಗಳಲ್ಲಿ ಟೆಲಿಗ್ರಾಂ 'ಸಾವಿನ ದೂತ' ಎಂಬ ಹೆಸರು ಪಡೆದುಕೊಂಡಿತ್ತು. ಟೆಲಿಗ್ರಾಂ ಬಂತೆದರೆ ಯಾರಿಗೆ ಏನೋ ಆಗಿದೆ ಎಂದು ಜನರು ಅರ್ಥಮಾಡಿಕೊಳ್ಳುವ ಮಟ್ಟಿಗೆ ಅದು ಪ್ರಸಿದ್ಧಿ ಪಡೆದಿತ್ತು. ಸುಮಾರು 160 ವರ್ಷಗಳ ಭವ್ಯ ಇತಿಹಾಸ ಹೊಂದಿದ್ದ ಈ ವ್ಯವಸ್ಥೆ ಸದ್ಯದಲ್ಲೇ ಸ್ಥಗಿತಗೊಳ್ಳಿದೆ.
ಇಂದಿನ ಸ್ಮಾರ್ಟ್ ಫೋನ್, ಇ-ಮೇಲ್, ಎಸ್ಎಂಎಸ್ ಜಗತ್ತಿನಲ್ಲಿ ಟೆಲಿಗ್ರಾಂ ಬೇಡಿಕೆ ಕಳೆದುಕೊಂಡಿದ್ದರಿಂದ ಈ ಸೇವೆಯನ್ನು ಜುಲೈ 15ರಿಂದ ಸ್ಥಗಿತಗೊಳಿಸುತ್ತೇವೆ ಎಂದು, ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್ಎನ್ಎಲ್) ತಿಳಿಸಿದೆ.
ತ್ವರಿತ ಸಂದೇಶ : ಉದ್ಯೋಗದ ನೇಮಕ, ಸಂದರ್ಶನ, ಮದುವೆ ಆಮಂತ್ರಣ ಮೊದಲಾದ ಸುದ್ದಿಗಳನ್ನು ತ್ವರಿತವಾಗಿ ಕಳುಹಿಸಲು ಟೆಲಿಗ್ರಾಂನ್ನು ಬಳಸಲಾಗುತ್ತಿತ್ತು. ಆದರೆ, ಟೆಲಿಗ್ರಾಂ ಮೂಲಕ ಸಾವಿನ ಸುದ್ದಿ ಹೆಚ್ಚು ಬರುತ್ತಿತ್ತು. ಆದ್ದರಿಂದ ಅದನ್ನು ಸಾವಿನ ದೂತ ಎಂದೇ ಜನರು ಕರೆಯುತ್ತಿದ್ದರು.
ಸಂಪರ್ಕ ಮಾಧ್ಯಮ ಕ್ಷೇತ್ರದಲ್ಲಿ ಕ್ರಾಂತಿಯಾಗುವ ಮೊದಲು, ತ್ವರಿತ ಗತಿಯಲ್ಲಿ ಸಂದೇಶ ಕಳಿಸಲು ಟೆಲಿಗ್ರಾಂ ಆಧಾರವಾಗಿತ್ತು. ಸ್ಥಿರ ದೂರವಾಣಿ ವ್ಯವಸ್ಥೆ ಜಾರಿಯಲ್ಲಿದ್ದರೂ, ದುಬಾರಿ ಕರೆ ದರಗಳಿಂದಾಗಿ ಮಧ್ಯಮ ವರ್ಗದ ಜನರು ಟೆಲಿಗ್ರಾಂ ಮೊರೆ ಹೋಗಿದ್ದರು.
ನವದೆಹಲಿಯ ಬಿಎಸ್ಎನ್ಎಲ್ ಕಾರ್ಪೊರೇಟ್ ಕಚೇರಿಯ ಟೆಲಿಗ್ರಾಫ್ ವಿಭಾಗದ ಹಿರಿಯ ವ್ಯವಸ್ಥಾಪಕ ಶಮೀಮ್ ಅಕ್ತರ್ ಟೆಲಿಗ್ರಾಂ ಸೇವೆ ಸ್ಥಗಿತಗೊಳಿಸುವ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ. ಜುಲೈ 15ರಿಂದ ಟೆಲಿಗ್ರಾಂ ವ್ಯವಸ್ಥೆ ರದ್ದುಪಡಿಸಲಾಗುವುದು ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿ ರಾಜ್ಯದ ಬಿಎಸ್ಎನ್ಎಲ್ ಕಚೇರಿಗಳಿಗೆ ಈಗಾಗಲೇ ಸುತ್ತೋಲೆ ಕಳುಹಿಸಲಾಗಿದೆ. ಟೆಲಿಗ್ರಾಂ ಮೂಲಕ ಕಳುಹಿಸಲಾಗಿರುವ ಸಂದೇಶಗಳು, ಅದರ ರಸೀತಿಗಳು ಸೇರಿದಂತೆ ಇನ್ನಿತರ ಅಂಶಗಳನ್ನೊಳಗೊಂಡ ಲಾಗ್ ಪುಸ್ತಕವನ್ನು ಆರು ತಿಂಗಳ ಕಾಲ ರಕ್ಷಿಸಿಡುವಂತೆ ಸುತ್ತೋಲೆ ಆದೇಶ ನೀಡಿದೆ.
ಉಳಿಸುವಂತೆ ಕೋರಿತ್ತು : ಟೆಲಿಗ್ರಾಂ ವ್ಯವಸ್ಥೆ ಇಂದಿನ ದಿನಗಳಲ್ಲಿ ಲಾಭದಾಯಕವಾಗಿರಲಿಲ್ಲ. ಆದರೆ, ಜನಸ್ನೇಹಿ ವ್ಯವಸ್ಥೆಯಾಗಿ ಭವ್ಯ ಇತಿಹಾಸ ಹೊಂದಿದ್ದ ಇದನ್ನು ಉಳಿಸುವಂತೆ ಬಿಎಸ್ಎನ್ಎಲ್ ಕೇಂದ್ರ ಸರ್ಕಾರವನ್ನು ಕೋರಿತ್ತು. ಆದರೆ, ಇದು ಸಂಸ್ಥೆಗೆ ಸಂಬಂಧಿಸಿದ ವಿಷಯ ಎಂದು ಕೇಂದ್ರ ಹೇಳಿತ್ತು.
ಟೆಲಿಗ್ರಾಂ ಮತ್ತು ಟೆಲಿಗ್ರಾಫ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಮೂರು ತಿಂಗಳಿನಲ್ಲಿ ಬಿಎಸ್ಎನ್ಎಲ್ ಕಚೇರಿಯ ವಿವಿಧ ವಿಭಾಗಗಳಿಗೆ ನಿಯೋಜಿಸಲು ಸಂಸ್ಥೆ ತೀರ್ಮಾನಿಸಿದೆ. ಎರಡು ತಿಂಗಳ ಹಿಂದೆ ಸಾಗರೋತ್ತರ ಟೆಲಿಗ್ರಾಂ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಮೊದಲ ಟೆಲಿಗ್ರಾಂ : ಮೇ 24, 1844 ಟೆಲಿಗ್ರಾಂ ಇತಿಹಾಸದಲ್ಲೇ ಮಹತ್ವದ ದಿನ. ಸ್ಯಾಮುಯಲ್ ಮೋರ್ಸ್ ಟೆಲಿಗ್ರಾಂ ವ್ಯವಸ್ಥೆಯನ್ನು ಜಗತ್ತಿಗೆ ಪರಿಚಯಿಸಿದರು. ವಾಷಿಂಗ್ಟನ್ನ ಸುಪ್ರೀಂಕೋರ್ಟ್ ಕೊಠಡಿಯಿಂದ ಬಲ್ಟಿಮೋರ್ ಮೇರಿ ಲ್ಯಾಂಡ್ಗೆ "ದೇವರು ಏನು ಮಾಡಿದ" ಎಂಬ ಪ್ರಥಮ ಸಂದೇಶ ರವಾನಿಸಿದ್ದರು.