ಬೆಳಗಾವಿ : ಗಚ್ಚಿನಮಠದ ಸ್ವಾಮಿ ಅನುಮಾನಾಸ್ಪದ ಸಾವು
ಗುರುವಾರ ಬೆಳಗ್ಗೆ ಸ್ವಾಮೀಜಿಯವರು ಮೃತಪಟ್ಟಿದ್ದಾರೆ ಎಂದು ಮಠದ ಆಡಳಿತ ಮಂಡಳಿ ಹೇಳಿದೆ. ಚನ್ನಬಸವ ಸ್ವಾಮೀಜಿ (67) ಅವರನ್ನು ಕೆಲವು ದಿನಗಳ ಹಿಂದೆ, ಮಠದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಪೀಠಾಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿತ್ತು. ಸದ್ಯ ಸ್ವಾಮೀಜಿ ಸಾವನ್ನಪ್ಪಿರುವುದರಿಂದ ಅನುಮಾನ ಹುಟ್ಟಿಕೊಂಡಿದೆ.
ಮೇ 16ರಂದು ಗಚ್ಚಿನ ಮಠದ ಆವರಣದಲ್ಲಿ ದೊಡ್ಡ ವಿವಾದ ಸೃಷ್ಟಿಯಾಗಿತ್ತು. ಚನ್ನಬಸವ ಸ್ವಾಮೀಜಿ, ಬಿಡದಿಯ ನಿತ್ಯಾನಂದ ಸ್ವಾಮಿಯನ್ನು ಭೇಟಿ ಮಾಡಿ, ಮಠವನ್ನು ಮಾರಾಟ ಮಾಡಲು ಯತ್ನಿಸಿದ್ದಾರೆ. ಮಠಕ್ಕೆ ಬಂದ ಅನುದಾನಗಳನ್ನು ಸರಿಯಾಗಿ ವಿನಿಯೋಗಿಸುತ್ತಿಲ್ಲ ಎಂದು ಭಕ್ತರು ಆರೋಪಿಸಿದ್ದರು.
ಮಠದ ಪಾತ್ರೆ, ಆಹಾರ ಧಾನ್ಯ ಮುಂತಾದವುಗಳನ್ನು ಮಠದ ಆವರಣದಲ್ಲಿ ತಂದು ಸುರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯದ ಹಲವಾರು ಮಠಾಧೀಶರ ಸಂಧಾನದ ನಂತರ ಮಠಕ್ಕೆ ನೂತನ ಉತ್ತರಾಧಿಕಾರಿ ಅವರನ್ನು ನೇಮಿಸಲಾಗಿತ್ತು.
ಸುಮಾರು 40 ವರ್ಷಗಳಿಂದ ಸ್ವಾಮೀಜಿ ಮಠದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮಠದಿಂದ ಹೊರ ಹಾಕಿದ್ದಕ್ಕೆ ಅವರು ಬೇಸರಗೊಂಡಿದ್ದರು. ಚನ್ನಬಸವ ಸ್ವಾಮೀಜಿ ಎದೆನೋವಿನಿಂದ ಬಳುತ್ತಿದ್ದರು. ಆದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಅವರ ಸಾವನ್ನಪ್ಪಿದ್ದಾರೆ ಎಂದು ಮಠದ ಭಕ್ತರಾದ ರಾಜೇಂದ್ರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಸಂಜೆ ಅಂತ್ಯಕ್ರಿಯೆ : ಗಚ್ಚಿನ ಮಠದ ಚನ್ನಬಸಚ ಸ್ವಾಮೀಜಿಗಳ ಅಂತ್ಯಸಂಸ್ಕಾರ ಗುರುವಾರ ಸಂಜೆ ನಡೆಯಲಿದೆ. ಸಂಜೆ 4 ಗಂಟೆಯವರೆಗೂ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. [ಚೌಳಿಮಠದ ಸ್ವಾಮೀಜಿ ಸಾವಿನ ಸುತ್ತ]