ಇದು ಅಧಿಕೃತ: ಕುಮಾರಸ್ವಾಮಿ ಪ್ರತಿಪಕ್ಷ ನಾಯಕ
ಬೆಂಗಳೂರು, ಜೂನ್ 1- ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಅವರು 14ನೆ ವಿಧಾನಸಭೆಯ ಪ್ರತಿಪಕ್ಷ ನಾಯಕರು ಎಂದು ಅಧಿಕೃತ ಘೋಷಣೆ ಹೊರಬಿದ್ದಿದೆ. ಅಲ್ಲದೆ ಶೇಕಡಾವಾರು ಮತ ಗಳಿಕೆಯಲ್ಲಿ ಮುಂದಿರುವ ಕಾರಣ ಜೆಡಿಎಸ್ ಅಧಿಕೃತ ವಿರೋಧ ಪಕ್ಷ ಎಂದೂ ನೂತನ ಸ್ಪೀಕರ್ ಕಾಗೋಡು ತಿಮ್ಮಪ್ಪ ಘೋಷಿಸಿದ್ದಾರೆ. ಶುಕ್ರವಾರ ಸ್ವತಃ ನೂತನ ಸ್ಪೀಕರ್ ಆಗಿಯಾಗುತ್ತಿದ್ದಂತೆ ಸದನದ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರು ಈ ವಿಷಯ ಪ್ರಕಟಿಸಿದರು.
ರಾಜ್ಯಭಾರ ಮಾಡುವುದರಲ್ಲಿ ಆಡಳಿತ ಪಕ್ಷದ್ದಷ್ಟೇ ಹೊಣೆಗಾರಿಕೆ ವಿರೋಧ ಪಕ್ಷದ್ದೂ ಆಗಿರುತ್ತದೆ. ಹಾಗಾಗಿ ಕುಮಾರಸ್ವಾಮಿ ಅವರು ಮುಂದಿನ ದಿನಗಳಲ್ಲಿ ಆ ಹೊಣೆಯನ್ನು ಹೆಚ್ಚಿನ ಜವಾಬ್ದಾರಿಯಿಂದ ನಿಭಾಯಿಸಲಿ ಎಂದು ಆಶಿಸೋಣ.
ಎಚ್ಡಿ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದಿಂದ ವಿಧಾಸನಭೆಗೆ ಆರಿಸಿ ಬಂದಿದ್ದಾರೆ. ಅದಕ್ಕೂ ಮುನ್ನ ಕುಮಾರಸ್ವಾಮಿ ಅವರು ಮೇ 20ರಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೆಂದು ಆ ಪಕ್ಷ ಘೋಷಿಸಿದ್ದು, ಪತ್ರವನ್ನೂ ನೀಡಿದೆ. ಹಾಗಾಗಿ ಅವರೇ ವಿರೋಧ ಪಕ್ಷದ ನಾಯಕರು. ನಾಲ್ಕೇ ಸದಸ್ಯರನ್ನು ಹೊಂದಿರುವ ಬಿ ಎಸ್ಸ್ಆರ್ ಕಾಂಗ್ರೆಸ್ಸಿಗೆ ಮಾನ್ಯತೆ ದೊರೆತಿಲ್ಲ.
ಇನ್ನು, ಜಗದೀಶ್ ಶೆಟ್ಟರ್ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿದ್ದು, ಕೆಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಬಿಎಸ್ ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಯಾ ಪಕ್ಷಗಳು ಪತ್ರ ನೀಡಿವೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.