ಬಿಜೆಪಿ ಬಿಟ್ಟು ಕೆಜೆಪಿ ಸೇರಿದ್ರು, ಸೋತ್ರು
ಬೆಂಗಳೂರು, ಮೇ 9 : ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ ಮತದಾರ ಪ್ರಭು ಈ ಬಾರಿ ರಾಷ್ಟ್ರೀಯ ಪಕ್ಷದ ಕೈ ಹಿಡಿದಿದ್ದು ಪ್ರಾದೇಶಿಕ ಪಕ್ಷಗಳು ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಏರುವುದು ಬೇಡ ಎಂದು ಸ್ಪಷ್ಟವಾದ ಜನಾದೇಶ ನೀಡಿದ್ದಾನೆ. ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದಲ್ಲಿದ್ದು ನಂತರ ಕೆಜೆಪಿ ಸೇರಿರುವ ಪ್ರಮುಖ ನಾಯಕರು ಚುನಾವಣೆಯಲ್ಲಿ ಸೋತಿದ್ದಾರೆ.
ಹಿಂದಿನ ಚುನಾವಣೆಯಲ್ಲಿ ಕೆಜೆಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರಭಾವದಿಂದ ಗೆದ್ದು ಬಂದ ಸಚಿವರರಾಗಿ ಕಾರ್ಯನಿರ್ವಹಿಸಿದ ಕೆಲವು ಪ್ರಮುಖರು ಈ ಬಾರಿ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಆ ಮೂಲಕ ವಿಧಾನಸಭೆ ಪ್ರವೇಶಿಸದೆ ಹೊರಗೆ ಉಳಿದಿದ್ದಾರೆ.
ಶಿಕಾರಿಪುರ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರು ಗೆಲುವು ಸಾಧಿಸಿದ್ದರೂ ಕೆಜೆಪಿಗೆ ರಾಜ್ಯದಲ್ಲಿ ದೊರಕಿರುವುದು ಕೇವಲ ಆರು ಸ್ಥಾನ. ಬಿಜೆಪಿಗೆ ಸರಿಯಾಗಿ ಹೊಡೆತ ಕೊಟ್ಟಿರುವ ಈಶ್ವರಪ್ಪ ಅವರಿಗೂ ಮಣ್ಣು ಮುಕ್ಕಿಸುವಲ್ಲಿ ಸಫಲರಾಗಿದ್ದಾರೆ. ಆದರೆ, ವಿಧಾನಸಭೆ ಪ್ರವೇಶಿಸಿಲು ಯಡಿಯೂರಪ್ಪ ಅವರಿಗೆ ಸಂಗಾತಿಗಳಿಲ್ಲ.
ತಾವು ಅಪಾರ ವಿಶ್ವಾಸವಿಟ್ಟು ಗೆಲ್ಲುತ್ತಾರೆ ಎಂದು ನಂಬಿದ್ದ ಮಾಜಿ ಸಚಿವರಾದ ಸಿ.ಎಂ.ಉದಾಸಿ, ಶೋಭಾ ಕರಂದ್ಲಾಜೆ, ಹರತಾಳು ಹಾಲಪ್ಪ, ಎಂ.ಪಿ.ರೇಣುಕಾಚಾರ್ಯ ಸೋಲು ಅನುಭವಿಸಿ ಯಡಿಯೂರಪ್ಪ ಅವರನ್ನು ಏಕಾಂಗಿ ಮಾಡಿದ್ದಾರೆ. ಪ್ರಮುಖ ಶಾಸಕರು ಚುನಾವಣೆ ಸೋಲುವ ಮೂಲಕ ಕೆಜೆಪಿಗೆ ನಿರೀಕ್ಷಿತ ಸ್ಥಾನ ತಂದು ಕೊಡುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿಯಿಂದ ಕೆಜೆಪಿಗೆ ಹೋಗಿ ಸೋತವರು ಯಾರು ಎಂದು ತಿಳಿಯೋಣ.
ಸಿ.ಎಂ.ಉದಾಸಿ
ಹಾನಗಲ್ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಚಿಎ ಸಿ.ಎಂ.ಉದಾಸಿ ಕಾಂಗ್ರೆಸ್ ಪಕ್ಷದ ಮನೋಹರ್ ತಹಸೀಲ್ದಾರ್ ಅವರ ಎದುರು ಪರಾಭವಗೊಂಡು ಯಡಿಯೂರಪ್ಪ ಅವರಿಗೆ ತೀವ್ರ ನಿರಾಸೆ ಉಂಟು ಮಾಡಿದ್ದಾರೆ. ಉದಾಸಿ 60638 ಮತಗಳನ್ನು ಪಡೆದು ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.
ಶೋಭಾ ಕರಂದ್ಲಾಜೆ
ತೀವ್ರ ಕುತೂಹಲ ಹುಟ್ಟಿಸಿದ್ದ ರಾಜಾಜಿನಗರ ಕ್ಷೇತ್ರದಲ್ಲಿ ಸಚಿವ ಸುರೇಶ್ ಕುಮಾರ್ ಅವರಿಗೆ ಬಿಗ್ ಫೈಟ್ ನೀಡುವಲ್ಲಿ ಶೋಭಾ ಕರಂದ್ಲಾಜೆ ವಿಫಲರಾಗಿದ್ದಾರೆ. 20909 ಮತಗಳನ್ನು ಪಡೆದ ಶೋಭಾ ಮೂರನೇ ಸ್ಥಾನವನ್ನು ಪಡೆದು, ಎರಡನೇ ಸ್ಥಾನವನ್ನು ಕಾಂಗ್ರೆಸ್ ಅಭ್ಯರ್ಥಿ ಮಂಜುಳಾ ನಾಯ್ಡು ಅವರಿಗೆ ಬಿಟ್ಟುಕೊಟ್ಟಿದ್ದಾರೆ.
ಎಂ.ಪಿ.ರೇಣುಕಾಚಾರ್ಯ
ಮಾಜಿ ಸಚಿವ ಮತ್ತು ಯಡಿಯೂರಪ್ಪ ಅವರ ಪರಮಾಪ್ತ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಂತಗೌಡ ವಿರುದ್ಧ ಪರಭಾವಗೊಂಡರು. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕೆಜೆಪಿ ಸೇರಿದ್ದ ರೇಣುಕಾಚಾರ್ಯ ಅವರಿಗೆ ಜನರು ಸರಿಯಾದ ಪಾಠ ಕಲಿಸಿದ್ದಾರೆ.
ಹರತಾಳು ಹಾಲಪ್ಪ
ಮೊದಲಿನಿಂದಲೂ ಯಡಿಯೂರಪ್ಪ ಜೊತೆಗೆ ಗುರಿತಿಸಿಕೊಂಡು ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದ ಹರತಾಳು ಹಾಲಪ್ಪ ಅವರರಿಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಪುತ್ರ, ಮಧು ಬಂಗಾರಪ್ಪ ಸೋಲುಣಿಸಿದ್ದಾರೆ. ಸೊರಬ ಕ್ಷೇತ್ರದಲ್ಲಿ ಅಣ್ಣ ಮತ್ತು ಹಾಲಪ್ಪ ಅವರಿಗೆ ಸೋಲುಣಿಸಿ ಮಧು ವಿಧಾನಸೌಧಕ್ಕೆ ಬರಲು ಸಜ್ಜಾಗಿದ್ದಾರೆ.
ಮೋಹನ್ ಲಿಂಬಿಕಾಯಿ
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಕಾಲದಿಂದಲೂ ಅವರ ಅಕ್ಕಪಕ್ಕ ತಿರುಗಾಡುತ್ತಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್ ಅವರ ಪುತ್ರ ಅರವಿಂದ್ ಚಂದ್ರಕಾಂತ್ ಬೆಲ್ಲದ್ ವಿರುದ್ದ ಸೋತಿದ್ದಾರೆ.
ಬಿ.ಪಿ.ಹರೀಶ್
ಯಡಿಯೂರಪ್ಪ ಮಾಧ್ಯಮ ವಕ್ತಾರರಂತೆ ಹೇಳಿಕೆ ನೀಡುತ್ತಿದ್ದ ಹರಿಹರ ಮಾಜಿ ಶಾಸಕ ಬಿ.ಪಿ.ಹರೀಶ್ ಸ್ವ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಶಿವಶಂಕರ್ ಅವರ ವಿರುದ್ಧ ಸೋಲು ಅನುಭವಿಸಿ ಇವರು, ಮೂರನೇ ಸ್ಥಾನ ಪಡೆದಿದ್ದಾರೆ.
ಇವರುಗಳು ಸೋತರು
ಜಗಳೂರು ಕ್ಷೇತ್ರದ ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಚನ್ನಗಿರಿಯ ಮಾಡಾಳು ವಿರೂಪಾಕ್ಷಪ್ಪ, ನಾಗಠಾಣಾದಲ್ಲಿ ವಿಠಲ ಕಟಕದೊಂಡ, ಹಾವೇರಿಯಲ್ಲಿ ನೆಹರು ಓಲೇಕಾರ್, ಚಾಮರಾಜ ನಗರದಲ್ಲಿ ಪ್ರೊ.ಆರ್.ಮಲ್ಲಿಕಾರ್ಜುನಪ್ಪ ಸೋಲು ಅನುಭವಿಸಿದ್ದಾರೆ.