ಸಿದ್ದು ಸಿಎಂ ಆಗ್ತಾರಾ? ನೋ ಕಾಮೆಂಟ್ ಎಂದ ಗೌಡ್ರು
ಬುಧವಾರ ಚುನಾವಣಾ ಫಲಿತಾಂಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡ ಅವರು, ರಾಜ್ಯದ ಜನತೆ ಕಾಂಗ್ರೆಸಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದಾರೆ. ನಮಗೆ ಜನತೆ ನೀಡಿ ರುವ ವಿಪಕ್ಷ ಸ್ಥಾನದಲ್ಲಿ ಕೂತು ಸಮರ್ಥವಾಗಿ ಕೆಲಸ ಮಾಡುತ್ತೇವೆ ಎಂದರು.
ಈ ಚುನಾವಣೆಯಲ್ಲಿ ಜೆಡಿಎಸ್ ನಿರೀಕ್ಷಿತ ಸ್ಥಾನಗಳನ್ನು ಗಳಿಸದಿರಲು ನಾನಾ ಕಾರಣಗಳಿವೆ. ಈ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯವಿಲ್ಲ ಎಂದ ದೇವೇಗೌಡರು, ರಾಜ್ಯದಲ್ಲಿ ಸಿಎಂ ಯಾರಾಗಲಿದ್ದಾರೆಂಬುದಕ್ಕೂ ತನಗೂ ಸಂಬಂಧವಿಲ್ಲ. ಅದು ಕೆಪಿಸಿಸಿ ಆಂತರಿಕ ವಿಚಾರ ಅದನ್ನು ಅವರು ಬಗೆ ಹರಿಸಿಕೊಳ್ಳಲಿದ್ದಾರೆ ನನ್ನ ಅಭಿಪ್ರಾಯದಿಂದ ಏನು ಬದಲಾಗುವುದಿಲ್ಲ ಎಂದು ದೇವೇಗೌಡರು ಹೇಳಿದರು.
ಜೆಡಿಎಸ್ ಎಂಪಿಗಳ ಕಥೆ: ಚುನಾವಣೆಗೆ ಸ್ಪರ್ಧೆ ಮಾಡಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದಿಂದ ಹಾಗೂ ಮಂಡ್ಯ ಸಂಸದ ಅವರು ಚೆಲುವರಾಯಸ್ವಾಮಿ ಅವರು ನಾಗಮಂಗಲ ಕ್ಷೇತ್ರದಿಂದ ಅಸೆಂಬ್ಲಿಗೆ ಆಯ್ಕೆಯಾಗಿದ್ದಾರೆ.
ದೇವೇಗೌಡರನ್ನು ಸೇರಿಸಿ ಜೆಡಿಎಸ್ ಮೂವರು ಸಂಸದರನ್ನು ಹೊಂದಿತ್ತು. ಈಗ ಕುಮಾರಸ್ವಾಮಿ ಹಾಗೂ ಚೆಲುವರಾಯಸ್ವಾಮಿ ಅವರು ಸಂಸತ್ತಿಗೆ ಹೋಗುವ ಬದಲು ಅಸೆಂಬ್ಲಿಯಲ್ಲಿ ಇನ್ನೂ 5 ವರ್ಷ ಕಾಲ ಕಳೆಯಲು ಇಚ್ಛಿಸಿದ್ದಾರೆ. ಅದರಲ್ಲೂ ಸಿದ್ದರಾಮಯ್ಯ ಅವರು ಸಿಎಂ ಆಗುವ ಸಾಧ್ಯತೆ ಇರುವುದರಿಂದ ಅಸೆಂಬ್ಲಿಗೆ ಕುಮಾರಸ್ವಾಮಿ ಎಂಟ್ರಿ ಗ್ಯಾರಂಟಿ. [2013 ಚುನಾವಣೆ: ಗೆದ್ದವರು ಸೋತವರ ಪಟ್ಟಿ]
ನಿಯಮದ ಪ್ರಕಾರ 6 ತಿಂಗಳೊಳಗೆ ಸಂಸದ ಅಥವಾ ಶಾಸಕ ಸ್ಥಾನ ಎರಡರಲ್ಲಿ ಒಂದನ್ನು ಉಳಿಸಿಕೊಂಡು ಇನ್ನೊಂದಕ್ಕೆ ರಾಜೀನಾಮೆ ನೀಡಬೇಕು. ಆ ಸ್ಥಾನಕ್ಕೆ ಮರು ಚುನಾವಣೆ ನಡೆಯಲಿದೆ. ಜೆಡಿಎಸ್ ಬಿಟ್ಟರೆ ಕಾಂಗ್ರೆಸ್, ಬಿಜೆಪಿ ಹಾಗೂ ಕೆಜೆಪಿಯಲ್ಲಿದ್ದ ಸಂಸದರು ವಿಧಾನಸಭೆಗೆ ಪ್ರವೇಶಿಸಿದ ಕಾರಣ ಯಾರೂ ಸ್ಪರ್ಧೆಗೆ ಇಳಿದಿರಲಿಲ್ಲ. ಸಂಸದ ಸ್ಥಾನ ಉಳಿಸಿಕೊಳ್ಳುವ ಬಗ್ಗೆ ಪಕ್ಷದಲ್ಲಿ ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ದೇವೇಗೌಡ ಹೇಳಿದ್ದಾರೆ.