ಶೋಭಾಗೆ ಸರಿಯಾದ ಪೆಟ್ಟು ಕೊಟ್ಟ ಶೆಟ್ಟರ್
ಆ ಸಂದರ್ಭದಲ್ಲಿ ನಡೆದ ವಿದ್ಯಮಾನಗಳಿಂದ ಅನಿವಾರ್ಯವಾಗಿ ನಾನು ಸಿಎಂ ಆದೆ. ಮುಂದೆ ಮತ್ತೆ ಮುಖ್ಯಮಂತ್ರಿಯಾಗಿ ಇಲ್ಲಿಗೆ ಬಂದೇ ಬರುತ್ತೇನೆ. ಯಾರದ್ದೋ ಕೃಪಾಕಟಾಕ್ಷದಿಂದ ಸಿಎಂ ಆದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನನ್ನ ವರ್ಚಸ್ಸು, ಶಕ್ತಿಯಿಂದಲೇ ಮುಖ್ಯಮಂತ್ರಿಯಾದೆ ಹೊರತು ಯಾರ ಕೃಪಾಕಟಾಕ್ಷವೂ ಇಲ್ಲ ಎಂದು ಜಗದೀಶ್ ಶೆಟ್ಟರ್ ಗುಡುಗಿದ್ದಾರೆ.
ಯಡಿಯೂರಪ್ಪ ಅವರು ಭ್ರಷ್ಟಾಚಾರದ ಹಾದಿ ಹಿಡಿದು ತಮ್ಮ ಅವನತಿಯ ಗುಂಡಿಯನ್ನು ತಾವೇ ತೋಡಿಕೊಂಡರು. ಅವರು ಜೈಲು ಪಾಲಾಗಲು ಅವರೇ ಕಾರಣ. ಪಕ್ಷದಿಂದ ಹೊರಬಿದ್ದಿದ್ದು ಕೂಡಾ ಅವರ ಇಚ್ಛೆಯಂತೆ ಆಗಿದೆ. ಬಿಜೆಪಿಯಲ್ಲಿ ಅವರಿಗೆ ಯಾವುದೇ ಒತ್ತಡವಿರಲಿಲ್ಲ. ನಾನು ಎಂದಿಗೂ ಅವರ ಕೈಗೊಂಬೆಯಾಗಿರಲಿಲ್ಲ ಎಂದು ಶೆಟ್ಟರ್ ಹೇಳಿದ್ದರು.
ಇದಕ್ಕೆ ಕೆರಳಿದ ಶೋಭಾ ಮೇಡಂ, ಶೆಟ್ಟರ್, ಸದಾನಂದ ಗೌಡ ಹಾಗೂ ಜನಾರ್ದನ ರೆಡ್ಡಿ ಸೋದರರು ಬಿಎಸ್ ಯಡಿಯೂರಪ್ಪ ಅವರಿಗೆ ಮೋಸ ಮಾಡಿದರು. ಬಿಎಸ್ ವೈ ಗೆ ಮೋಸ ಮಾಡಿದರೆ ನಾಶವಾಗುತ್ತೀರಾ ಎಂದು ಶಪಿಸಿದ್ದರು.
ಯಾರೊಬ್ಬರ ಆಶೀರ್ವಾದದಿಂದ ಸಿಎಂ ಕುರ್ಚಿ ಏರಿಲ್ಲ. ಪಕ್ಷ ಹಾಗು ಜನರ ವಿಶ್ವಾಸದಿಂದ ಈ ಪದವಿ ಸಿಕ್ಕಿದೆ. ನನಗೆ ಆಶೀರ್ವಾದ ಮಾಡಿದವರು ಈಗ ಎಲ್ಲಿದ್ದಾರೆ ಅವರ ಸ್ಥಿತಿ ಏನಾಗಲಿದೆ ಎಂಬುದನ್ನು ಜನತೆ ನಿರ್ಧರಿಸಲಿದೆ. ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಚಾಮರಾಜನಗರದಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ ಎಂಬ ಪೂರ್ಣ ವಿಶ್ವಾಸ ನನಗಿದೆ ಎಂದು ಶೆಟ್ಟರ್ ಹೇಳಿದರು.
ಜನತೆ ನಮ್ಮ ಕೆಲಸಕಾರ್ಯಗಳ ಬಗ್ಗೆ ಅರಿವು ಹೊಂದಿದ್ದು, ಜಾಗೃತರಾಗಿದ್ದಾರೆ. ವಿಪಕ್ಷಗಳು ಏನೆಲ್ಲಾ ಟೀಕೆಗಳನ್ನು ಮಾಡಿದರೂ ಅವರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಟೀಕಿಸಿದರು. ನಾನು ಮುಖ್ಯಮಂತ್ರಿಯಾದ ಬಳಿಕ ಎರಡು ಬಾರಿ ಚಾಮರಾಜನಗರಕ್ಕೆ ಬಂದು ಈ ಪ್ರದೇಶಕ್ಕಿದ್ದ ಮೂಢನಂಬಿಕೆಯನ್ನು ಹೋಗಲಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.
3ನೇ ಬಾರಿ ಮತ್ತಷ್ಟು ಉತ್ಸಾಹದಿಂದಲೇ ನಿಮ್ಮೆಲ್ಲರನ್ನು ಭೇಟಿ ಮಾಡಲು ಬಂದೇ ಬರುತ್ತೇನೆ ಎಂದು ಹೇಳಿದರು. 60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ಸಿಗರು ಏನೆಲ್ಲ ಮಾಡಿದ್ದಾರೆ. ರಾಜ್ಯವನ್ನು ಯಾವ ರೀತಿ ನಿರ್ಲಕ್ಷಿಸಿದ್ದಾರೆ ಎಂಬುದು ತಿಳಿದಿದೆ. ಕಳೆದೈದು ವರ್ಷದಲ್ಲಿ ರಾಜ್ಯ ಕಂಡಿರುವ ಪ್ರಗತಿಯನ್ನು ನೋಡಿ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ