ವಸುಂಧರೆಗೊಂದು ದಿನ, ಹಸಿರು ಸಲಹೆ ಪಾಲಿಸೋಣ
'ಜೀವರಾಶಿಯಲ್ಲಿ ಮಾನವನಿಗೆ ಆದ್ಯತೆ. ನಾವೇ ಮೂಢರಾದರೆ ಜ್ಞಾನಗೆಲ್ಲಿ ಪೂಜ್ಯತೆ' ಎಂದು ಹಂಸಲೇಖ ಬರೆದ ಸಾಲುಗಳು ಎಂದಿಗೂ ಪ್ರಸ್ತುತ.ಭಾರತೀಯರ ಪಾಲಿಗೆ ಭೂಮಿ ತಾಯಿಯಾದರೆ, ಜರ್ಮನ್ನರಿಗೆ ತಂದೆಯಾಗುತ್ತದೆ. ಆದರೆ, ನಮ್ಮ 'ಮದರ್ ಅರ್ಥ್' ನೋಡಿಕೊಳ್ಳುವ ಜವಾಬ್ದಾರಿಯನ್ನು ಬಹುತೇಕ ಎಲ್ಲರೂ ಮರೆತಿದ್ದಾರೆ. ಭೂ ರಮೆಯನ್ನು ಕೊಂಡಾಡುವ 'ಅರ್ಥ್ ಡೇ' ಎಂದಿನಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮತ್ತೆ ಚಾಲನೆ ನೀಡಿದೆ.
ಬೆಂಗಳೂರಿಗರು ಬೇಸಿಗೆಯಲ್ಲಿ 36 ಡಿಗ್ರಿ ಸೆಲ್ಸಿಯಸ್ ಬಿಸಿಲು ಕಂಡಿದ್ದೇ ಇಲ್ಲ. ಈ ಬಾರಿ ಮಲೆನಾಡಿನಲ್ಲೂ ಅದೇ ಬಿಸಿಲು ಝಳಪಿಸಿದೆ. ಭೌಗೋಳಿಕವಾಗಿ ವಾತಾವರಣದಲ್ಲಿ ವ್ಯತ್ಯಯ. ಜಾಗತಿಕ ತಾಪಮಾನ ಏರಿಕೆ ಬಗ್ಗೆ ಗಂಟೆಗಟ್ಟಲೆ ಉಪನ್ಯಾಸ ಎಲ್ಲೆಡೆ ಕೊಟ್ಟರೂ ಜನ ಬದಲಾಗುತ್ತಿಲ್ಲ.
ಭೂಮಿಯ ವಿಚಿತ್ರ ವರ್ತನೆಗಳಿಂದ ಎಚ್ಚೆತ್ತ ಅಮೆರಿಕದ ಸೆನೆಟರ್ ಗೆರಾಯ್ಡ್ ನೆಲ್ಸನ್ 1972ರ ಏಪ್ರಿಲ್ 22ರಂದು ಭೂಮಿ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ 'ವಿಶ್ವ ಭೂಮಿ ದಿನ' ಆರಂಭಿಸಿದರು.
ಹಲವು ವರ್ಷಗಳ ಕಾಲ ವಿಶ್ವ ಭೂ ದಿನವನ್ನು ಅಮೆರಿಕದಲ್ಲಿ ಮಾತ್ರ ಆಚರಿಸಲಾಗುತ್ತಿತ್ತು 90 ರ ದಶಕದ ನಂತರ ವಿಶ್ವದ ಉಳಿದ ರಾಷ್ಟ್ರಗಳು ಭೂಮಿಯ ಮಹತ್ವವನ್ನು ಸಾರುತ್ತಾ, ಜನಜಾಗೃತ ಮಾಡಲು ಮುಂದಾಗಿವೆ. ವಿಶ್ವ ಭೂ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಸರಳ ವಿಧಾನಗಳಿದೆ. ಇದು ಈ ದಿನಕ್ಕಷ್ಟೇ ಸೀಮಿತವಾಗಿಲ್ಲ. ಆಚರಣೆ ಮಾಡುವ ಬಗೆ ಮುಂದೆ ಓದಿ....
ಕೈ ಕೆಸರಾದರೆ ಬಾಯಿ ಮೊಸರು
ಮಕ್ಕಳಿಗೆ ಮಣ್ಣಲ್ಲಿ ಆಡುವುದು ಇಷ್ಟ.ಚಿಕ್ಕಂದಿನಲ್ಲೇ ಸಸಿ ನೆಡುವುದು, ಪಾತಿ ಮಾಡುವುದು, ನೀರು ಹಾಕುವುದು ಆರೈಕೆ ಮಾಡುವುದನ್ನು ಕಲಿಸಿ ಕೊಡಿ. ವಿಶೇಷಸಸ್ಯಗಳು, ಔಷಧೀಯ, ಸುಗಂಧ ಸಸ್ಯಗಳೊಡನೆ ಹಸಿರು ಕ್ರಾಂತಿ ಆಟ ಆರಂಭಿಸಬಹುದು. ಹಸಿರಿನ ಬಗ್ಗೆ ಒಲವು ಮೂಡಿಸುವುದು ಅವಶ್ಯ.
ಮುಂದೆ ಮನೆಗಳಲ್ಲಿ ಪಾಟ್ ಗಳಲ್ಲಾದರೂ ಗಿಡಗಳು ನಳನಳಿಸಬಹುದು. ಹಣ್ಣು ಹಂಪಲು, ಹೂಗಳನ್ನು ಬೆಳೆಯುವುದು ಮಕ್ಕಳಿಗೆ ಶೈಕ್ಷಣಿಕ ಪಾಠದ ಭಾಗವಾದರೆ ವಿಶ್ವಕ್ಕೆ ಅನುಕೂಲ
ತ್ಯಾಜ್ಯ ನಿರ್ವಹಣೆ
ಬೆಂಗಳೂರಿಗರಿಗೆ ತ್ಯಾಜ್ಯ ನಿರ್ವಹಣೆಯ ಕಷ್ಟ ಸಾಮಾನ್ಯವಾಗಿ ಗೊತ್ತಿರುತ್ತೆ.ಘನ ತ್ಯಾಜ್ಯ, ಜಲ ತ್ಯಾಜ್ಯ, ಇ ಕಸ ಸೇರಿದಂತೆ ಹಲವು ರೀತಿ ಕಸ ಇರುತ್ತದೆ. ಮಕ್ಕಳಿಗೆ ಈ ಕಸ ಬೇರ್ಪಡಿಸುವ ಅವಶ್ಯಕತೆ, ಬೇರ್ಪಡಿಸುವ ರೀತಿ ಹೇಳಿಕೊಟ್ಟರೆ ಮನೆಯಲ್ಲಿ ಆಚರಿಸಬಹುದು.
ಕೈಗ್ಲೌಸ್ ಹಾಕಿಕೊಂಡು ಸುರಕ್ಷಿತವಾಗಿ ಕಸವನ್ನು ಆಟದ ಮೈದಾನದಿಂದ ಹೊರ ಹಾಕುವುದನ್ನು ಕಲಿತರೆ ಮುಂದೆ ತ್ಯಾಜ್ಯ ನಿರ್ವಹಣೆ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟುವ ನಿರೀಕ್ಷೆ ಇಟ್ಟುಕೊಳ್ಳಬಹುದು.ವೃತ್ತಿಪರರಿಗೆ ಸಲಹೆ
ಬೆಂಗಳೂರು ಸೇರಿದಂತೆ ಅನೇಕ ಮಹಾನಗರಗಳಲ್ಲಿ ಕಾರ್ ಪೂಲಿಂಗ್, ಬೈಕ್ ಪೂಲಿಂಗ್ ವ್ಯವಸ್ಥೆ ತಕ್ಕಮಟ್ಟಿಗೆ ಜಾರಿಯಲ್ಲಿದೆ. ಇದರಿಂದ ಟ್ರಾಫಿಕ್ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಇಂಧನ, ಸಮಯ ಉಳಿತಾಯವಾಗುತ್ತದೆ. ಬೈಸಿಕಲ್ ಬಳಕೆ ಕೂಡಾ ಹೆಚ್ಚಾಗುತ್ತಿರುವುದು ಆಶಾದಾಯಕವಾಗಿದೆ. ಬೈಕ್ ಹಾಗೂ ಕಾರು ಅಗತ್ಯವಿದಾಗ ಮಾತ್ರ ಬಳಸುವುದು ಪರಿಸರಕ್ಕೆ ಒಳ್ಳೆಯದು.
ಚಾರಣ, ಅರಣ್ಯ ದರ್ಶನ
ನಗರ ಪ್ರದೇಶಗಳಿಂದ ಮಕ್ಕಳನ್ನು ನೈಸರ್ಗಿಕ ಪರಿಸರದತ್ತ ಕೊಂಡೊಯ್ಯಬೇಕು. ಅರಣ್ಯದಲ್ಲಿನ ವೈವಿಧ್ಯಮಯ ಜೀವ ಪರಿಸರ ಜೀವಿಸುತ್ತಿರುವ ಬಗೆ, ಉಳಿವಿಗಾಗಿ ಪಡುತ್ತಿರುವ ಸಂಕಷ್ಟಗಳು ಅರ್ಥವಾಗುತ್ತದೆ. ಗುಬ್ಬಿ ಕಾಣೆಯಾಗಿದೆ ಎಂಬ ಕೂಗು ಎದ್ದಿರುವಂತೆ ಇತರೆ ಜೀವಿಗಳ ಬಗ್ಗೆ ಮಾಹಿತಿ, ಜೀವನ ದರ್ಶನ ಮಕ್ಕಳಿಗೆ ಸಿಗುವುದು ಅವಶ್ಯ. ಜೊತೆಗೆ ಮಕ್ಕಳ ಪೋಷಕರಿಗೂ ಕೂಡಾ.
ಪುನರ್ ಬಳಕೆ ಕಲಿಸಿರಿ
ವಸ್ತುಗಳ ಪುನರ್ ಬಳಕೆ ಮಾಡುವ ವಿಧಾನವನ್ನು ಬೇಸಿಗೆ ಶಿಬಿರಗಳನ್ನು ಬಹಳಷ್ಟು ಕಡೆ ಹೇಳಿಕೊಡಲಾಗುತ್ತದೆ. ಪತ್ರಿಕೆಗಳು, ಮ್ಯಾಗಜೀನ್ , ಪುನರ್ ಬಳಕೆ, ಯಾವ ವಸ್ತು ಪುನರ್ ಬಳಕೆ ಮಾಡಬಹುದು ಅದರ ಅಗತ್ಯ ಏನಿದೆ? ಪುನರ್ ಬಳಕೆ ಉಪಯೋಗಗಳೇನು ಎಂಬುದು ಪಾಠದ ಜೊತೆಗೆ ಆಟವಾಗಿ ಮಕ್ಕಳಿಗೆ ತಲುಪಬೇಕಿದೆ
ನೀರು ಉಳಿಸಿ ಭೂಮಿ ಉಳಿಸಿ
ದಿನ ಬೆಳಗ್ಗೆ ಹಲ್ಲುಜ್ಜುವಾಗ ನಲ್ಲಿ ನೀರು ಪೋಲಾಗದಂತೆ ಎಚ್ಚರವಹಿಸಿ, ಅನಗತ್ಯವಾಗಿ ಹರಿಯುವ ನೀರಿನ ಬಗ್ಗೆ ಜಾಗೃತಿ ಮೂಡಬೇಕಿದೆ. ಜಗತ್ತಿನಲ್ಲೇ ಭೂಮಿಗಿಂತ ನೀರು ಅಧಿಕ ಪ್ರಮಾಣದಲ್ಲಿದ್ದರೂ ದುರ್ಬಳಕೆ ಹೆಚ್ಚಾಗುತ್ತಿರುವುದರಿಂದ ನೀರಿನ ಉಳಿತಾಯ ಬಹುಮುಖ್ಯವಾಗಿದೆ. ನಗರ ಪ್ರದೇಶದಲ್ಲಿ ನೀರಿನ ಬವಣೆ ತಪ್ಪಿಸಲು ನೀರು ಪುನರ್ ಬಳಕೆ, ಇಂಗು ಗುಂಡಿ ಸ್ಥಾಪನೆ ಕಾರ್ಯ ಕಡ್ಡಾಯಗೊಳಿಸಬೇಕು
ಪವರ್ ಕಟ್ ಸಮಸ್ಯೆ
ಅನಗತ್ಯವಾಗಿ ವಿದ್ಯುತ್ ಪೋಲಾಗುವುದನ್ನು ತಪ್ಪಿಸುವುದು ಹೇಗೆ? ಇಂಧನ ಉಳಿತಾಯ ಹೇಗೆ ಮಾಡಬೇಕು? ನೈಸರ್ಗಿಕ ಬೆಳಕನ್ನು ಬಳಸುವುದು ಹೇಗೆ? ಸೌರಶಕ್ತಿ ಉಪಯೋಗಗಳು, ಟಿವಿ, ಫ್ರಿಜ್, ಕೂಲರ್, ಹೀಟರ್ ಹಾಗೂ ಕಂಪ್ಯೂಟರ್ ಮುಂತಾದ ಗೃಹೋಪಯೋಗಿ ವಸ್ತುಗಳಿಂದ ಪರಿಸರಕ್ಕೆ ಎಷ್ಟು ಹಾನಿ. ವಿದ್ಯುತ್ ಉಳಿತಾಯದ ಸರಳ ವಿಧಾನಗಳನ್ನು ಹೇಳಿಕೊಡುವುದು ಪೋಷಕರ ಕರ್ತವ್ಯ
ಸಾವಯವ ಕೃಷಿ
ಅರಣ್ಯಕ್ಕೆ ಕಾಲಿಟ್ಟಂತೆ ಮಕ್ಕಳನ್ನು ಹತ್ತಿರದ ಕೃಷಿಕರ ಹತ್ತಿರ ಕರೆದೊಯ್ಯಬೇಕು. ದೇಶದ ಬೆನ್ನಲುಬು ಎನಿಸಿರುವ ರೈತರ ಜೀವನ, ಆಹಾರ ಪದಾರ್ಥಗಳ ಬೆಳೆಯುವ ಬಗೆ ಹೇಗೆ ಎಂಬುದರ ನೇರ ಪ್ರಾತ್ಯಾಕ್ಷಿಕೆ ಸಿಕ್ಕಂತಾಗುತ್ತದೆ. ನಂತರ ಆಹಾರ ಸಂರಕ್ಷಣೆ, ಸಾವಯವ ಕೃಷಿ ಮಹತ್ವ, ಬೆಳೆಗಾರರು, ಮಾರುಕಟ್ಟೆ ಶುಚಿತ್ವ ಪರಿಸರ ಸಂರಕ್ಷಣೆ ವಿಧಾನಗಳನ್ನು ಅರಿಯಬಹುದು
ಪ್ಲಾಸಿಕ್ಟ್ ಮುಕ್ತ ವಿಶ್ವ
ಹಲವು ಕಡೆ ಪ್ಲಾಸ್ಟಿಕ್ ಬಳಕೆ ನಿಷೇಧ ಹೇರಲಾಗಿದೆ. ಮಕ್ಕಳಿಗೆ ಪ್ಲಾಸ್ಟಿಕ್ ದುರ್ಬಳಕೆ ಬಗ್ಗೆ ವಿವರಿಸಿ ಬಟ್ಟೆ ಬ್ಯಾಗ್ ಅಥವಾ ಪುನರ್ ಬಳಕೆ ಪ್ಲಾಸ್ಟಿಕ್ ಬಳಸುವಂತೆ ಸೂಚಿಸಬೇಕು. ಪ್ಲಾಸ್ಟಿಕ್ ಮುಕ್ತ ಪ್ರದೇಶಗಳನ್ನು ಹೆಚ್ಚೆಚ್ಚು ಸೃಷ್ಟಿಸುತ್ತಾ ಹೋಗಬೇಕು
ಕಸದಿಂದ ರಸ ತಯಾರಿ
ದೈನಂದಿನ ವಸ್ತುಗಳನ್ನು ತಯಾರಿ ಹೇಗೆ ನಡೆಯುತ್ತದೆ. ಕಸವನ್ನು ರಸವನ್ನಾಗಿಸುವುದು ಹೇಗೆ? ಅಮೆರಿಕದಲ್ಲಿ ಕಾರುಗಳನ್ನು ರಾಶಿಗಟ್ಟಲೆ ಕಸದಂತೆ ಎಸೆದಿರುತ್ತಾರೆ ಏಕೆ? ಉತ್ಪಾದನೆ ಸದ್ಬಳಕೆ ಹೇಗೆ? ಪರಿಸರಕ್ಕೆ ಹಾನಿಯಾಗದಂತೆ ವಸ್ತುಗಳ ಪುನರ್ ಬಳಕೆ ಮಾಡುವುದು ಹೇಗೆ ಮುಂತಾದ ಕುತೂಹಲ ವಿಷಯಗಳನ್ನು ಮಕ್ಕಳಷ್ಟೇ ಅಲ್ಲದೆ ದೊಡ್ಡವರು ಅಳವಡಿಸಿಕೊಂಡರೆ ವಸುಂಧರೆ ಮೊಗದಲ್ಲಿ ನಗು ತರಿಸಬಹುದು.