ಕರ್ನಾಟಕವನ್ನು ಐವರಿಗೆ ಹಂಚಿದರು : ಜೋಶಿ
ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಸಿಎಂ ಶೆಟ್ಟರ್ ಸೇರಿದಂತೆ ಹಲವು ಪಕ್ಷದ ಮುಖಂಡರ ಜೊತೆ ಬುಧವಾರ ಸಭೆ ನಡೆಸಿದ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಪ್ರಚಾರ ತಂತ್ರ, ಕಾರ್ಯತಂತ್ರ, ಟಿಕೆಟ್ ಹಂಚಿಕೆ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.
ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜೋಶಿ, ಪಕ್ಷದಲ್ಲಿನ ಅಸಮಾಧಾನ ಶಮನಗೊಳಿಸುವುದು, ಪಕ್ಷ ಸಂಘಟನೆ, ಪ್ರಚಾರ ಕಾರ್ಯಗಳ ಬಗ್ಗೆ ಯೋಜನೆ ತಯಾರಿಸಿ, ಸಿಎಂ ಜಗದೀಶ್ ಶೆಟ್ಟರ್, ಡಿಸಿಎಂ ಈಶ್ವರಪ್ಪ, ಮಾಜಿ ಸಿಎಂ ಸದಾನಂದಗೌಡ, ಉನ್ನತ ಶಿಕ್ಷಣ ಸಚಿವ ಸಿ.ಟಿರವಿ ಅವರಿಗೆ ಪಕ್ಷದ ಪ್ರಚಾರದ ಹೊಣೆಯನ್ನು ವಹಿಸಲಾಗಿದೆ ಎಂದರು.
ಸಿಎಂಗೆ ಮುಂಬೈ ಕರ್ನಾಟಕ : ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಮುಂಬೈ ಕರ್ನಟಕ ಭಾಗದ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಶೆಟ್ಟರ್ ಮತ್ತು ಜೋಶಿ ಅವರಿಗೆ ಹೆಚ್ಚಿನ ಹೊಣೆಗಾರಿಕೆಯು ಇದ್ದು, ರಾಜ್ಯದ ಉಳಿದ ಭಾಗದ ಪ್ರಚಾರ ಕಾರ್ಯದಲ್ಲೂ ತೊಡಗಿಕೊಳ್ಳಲಿದ್ದಾರೆ.
ಗೌಡರಿಗೆ ಮೈಸೂರು : ಒಕ್ಕಲಿಗ ಮತಗಳು ಹೆಚ್ಚಾಗಿರುವ ಮೈಸೂರು ಜಿಲ್ಲೆ ಮತ್ತು ತಮ್ಮ ತವರು ಕ್ಷೇತ್ರದ ಪ್ರಚಾರ ಕಾರ್ಯದ ಜವಾಬ್ದಾರಿ ಮಾಜಿ ಸಿಎಂ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ.ಸದಾನಂದಗೌಡರಿಗೆ ವಹಿಸಲಾಗಿದೆ. ಇಲ್ಲಿನ ಕಾರ್ಯಕರ್ತರ ಮತ್ತು ಅಭ್ಯರ್ಥಿಗಳ ಜೊತೆ ಗೌಡರು ಸಭೆಯ ನಡೆಸಿ ಪ್ರಚಾರದ ರೂಪುರೇಷೆ ತಯಾರಿಸಲಿದ್ದಾರೆ.
ಶಿವಮೊಗ್ಗಕ್ಕೆ ಈಶ್ವರಪ್ಪ : ಬಿ.ಎಸ್.ಯಡಿಯೂರಪ್ಪ ಸೋಲಿಸಲು ರಣತಂತ್ರ ರೂಪಿಸಿರುವ ಬಿಜೆಪಿ ಶಿವಮೊಗ್ಗ ಮತ್ತು ಬಳ್ಳಾರಿ, ದಾವಣಗೆರೆ ಜಿಲ್ಲೆಗಳ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ನೀಡಿದೆ. ಯಡಿಯೂರಪ್ಪ ಪ್ರಾಬಲ್ಯ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಹೆಚ್ಚಿನ ಒತ್ತು ನೀಡಿ ಪ್ರಚಾರ ಮಾಡಲು ಪಕ್ಷ ನಿರ್ಧರಿಸಿದೆ.
ಉತ್ತರ ಕರ್ನಾಟಕ ರವಿ ಹೆಗಲಿಗೆ : ಚಿಕ್ಕಮಗಳೂರು ಶಾಸಕ, ವೈದ್ಯಕೀಯ ಶಿಕ್ಷಣ ಸಚಿವ ಸಿ.ಟಿ.ರವಿ ಅವರಿಗೆ ಉತ್ತರ ಕರ್ನಾಟಕದ ಜವಾಬ್ದಾರಿ ನೀಡಲಾಗಿದೆ. ಯಾದಗಿರಿ, ಕಲಬುರ್ಗಿ, ಬೀದರ್, ರಾಯಚೂರು ಜಿಲ್ಲೆಗಳ ಪ್ರಚಾರದ ಕಾರ್ಯ ಸಿ.ಟಿ.ರವಿ ಅವರ ಹೆಗಲೇರಿದೆ.
ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರು ಪ್ರಚಾರ ಕಾರ್ಯಕೈಗೊಳ್ಳಲಿದ್ದಾರೆ. ಏ.8ರಿಂದ ಬಹಿರಂಗ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಲಿರುವ ಬಿಜೆಪಿ, ರಾಷ್ಟ್ರೀಯ ನಾಯಕರ ಪ್ರಚಾರ ಕಾರ್ಯಗಳ ಯೋಜನೆಯನ್ನು ಬುಧವಾರದ ಸಭೆಯಲ್ಲಿ ಸಿದ್ಧಪಡಿಸಿದೆ.
ಶುಕ್ರವಾರ ಮೊದಲ ಪಟ್ಟಿ : 170 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಪಕ್ಷ ನಿಷ್ಠರಿಗೆ ಮತ್ತು ಗೆಲ್ಲುವ ಅಭ್ಯರ್ಥಿಗಳಿಗೆ ಮೊದಲ ಪಟ್ಟಿಯಲ್ಲಿ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ