ಪರಿಷತ್ ಸ್ಥಾನಕ್ಕೆ ಮೋಹನ್ ಲಿಂಬಿಕಾಯಿ ರಾಜೀನಾಮೆ
ಸೋಮವಾರ ಮಧ್ಯಾಹ್ನ 12 ಗಂಟೆಗೆ ವಿಧಾನಸೌಧಕ್ಕೆ ಆಗಮಿಸಿದ ಮೋಹನ್ ಲಿಂಬಿಕಾಯಿ, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು. ಮೋಹನ್ ಅವರ ಪರಿಷತ್ ಸದಸ್ಯತ್ವದ 15 ತಿಂಗಳ ಅವಧಿ ಬಾಕಿ ಇರುವಾಗಲೇ ರಾಜೀನಾಮೆ ನೀಡಿದ್ದಾರೆ. ಮೋಹನ್ ಲಿಂಬಿಕಾಯಿ ಅವರ ರಾಜೀನಾಮೆಯನ್ನು ಸಭಾಪತಿಗಳು ಅಂಗೀಕರಿಸಿದ್ದಾರೆ.
2008ರಲ್ಲಿ ವಾಯುವ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು, ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಅವರನ್ನು ಸೋಲಿಸಿ ಪರಿಷತ್ ಗೆ ಆಯ್ಕೆಯಾಗಿದ್ದರು. ಮೊದಲಿನಿಂದಲೂ ಯಡಿಯೂರಪ್ಪ ಅವರ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ಇವರು, ಇತ್ತೀಚೆಗೆ ಅವರು ಕೆಜೆಪಿ ಸೇರುವುದಾಗಿ ಹೇಳಿಕೆ ನೀಡಿದ್ದರು.
ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದರು. ಈ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರಕಾಂತ ಬೆಲ್ಲದ್ ಈಗಾಗಲೇ ರಾಜಕೀಯ ನಿವೃತ್ತಿ ಘೋಸಿಸಿದ್ದಾರೆ.
ಮತ್ತಷ್ಟು ರಾಜೀನಾಮೆ : ಬಿಜೆಪಿಗೆ ವಲಸಿಗ ಶಾಸಕರು ಗುಡ್ ಬೈ ಹೇಳಲು ತುದಿಗಾಲಲ್ಲಿ ನಿಂತಿದ್ದಾರೆ. ಏ.10ರಂದು ಚುನಾವಣೆ ಅಧಿಸೂಚನೆ ಪ್ರಕಗೊಳ್ಳುವುದರಿಂದ ಅಷ್ಟರೊಳಗೆ ಪಕ್ಷ ತೊರೆಯಲು ಅನೇಕರು ನಿರ್ಧರಿಸಿದ್ದಾರೆ.
ಏ.4ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಶಿವರಾಜ್ ಸಜ್ಜನ್ ಹೇಳಿದ್ದಾರೆ. ಈಗಾಗಲೇ ಇವರು ಬಹಿರಂಗವಾಗಿ ಯಡಿಯೂರಪ್ಪ ಜೊತೆ ಗುರುತಿಸಿಕೊಂಡಿದ್ದು ಕೆಜೆಪಿ ಸೇರಲಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರಿನ ಹಾಲಿ ಬಿಜೆಪಿ ಶಾಸಕ ಎಸ್.ವಿ.ರಾಮಚಂದ್ರ ಬಿಜೆಪಿ ತೊರೆದು ಏ.3ರಂದು ಕೆಜೆಪಿ ಸೇರುವುದಾಗಿ ಘೋಷಿಸಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಸಿದ್ಧವಾಗುತ್ತಿದ್ದರೆ ಅತ್ತ ಶಾಸಕರು ಪಕ್ಷ ತೊರೆಯುತ್ತಿದ್ದಾರೆ.
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಮುಂತಾದವರು ಬಿಜೆಪಿ ತೊರೆಯುವ ಪಟ್ಟಿಯಲ್ಲಿದ್ದಾರೆ. ಇವರು ಎಂದು ಪಕ್ಷ ತೊರೆಯುತ್ತಾರೆ ಎಂಬುದು ನಿಗೂಢವಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ