
ಮಂಗಳೂರು, ಮಾ.5: ವಿಧಾನಸಭೆ ಚುನಾವಣೆಗಾಗಿ ಅಪರಾಧ ಹಿನ್ನೆಲೆಯುಳ್ಳವರಿಗೆ, ಚಾರಿತ್ರ್ಯಹೀನರಿಗೆ ಟಿಕೆಟ್ ನೀಡುವುದಿಲ್ಲ. ಸಚ್ಚಾರಿತ್ರ್ಯದವರಿಗೆ ಮಾತ್ರ ಬಿಜೆಪಿ ಪಕ್ಷದ ಟಿಕೆಟ್ ನೀಡಲಿದೆ. ಅಂದಹಾಗೆ ಮಾ 25ರಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ.
ಗುರುವಾರ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರಾರ್ಥ ಮಾತನಾಡಿದ ಸದಾನಂದರು ತಾವು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮಾರ್ಚ್ 11ರಂದು ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶವನ್ನು ನೋಡಿಕೊಂಡು ಮಾಜಿ ಸಿಎಂ ಸದಾನಂದರಿಗೆ ಸೂಕ್ತ ಸ್ಥಾನ ನೀಡುವ ಬಗ್ಗೆ ಪಕ್ಷ ಅಂತಿಮ ನಿರ್ಧಾರ ಕೈಗೊಳ್ಳುವ ಅಂದಾಜಿದೆ.
ರಾಜ್ಯ ಮಟ್ಟದ ಪಾಲಿಟಿಕ್ಸ್ ನಲ್ಲಿ ತಮಗೆ ಇಷ್ಟವಿಲ್ಲ ಎಂದಿರುವ ಸದಾನಂದರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಯಲ್ಲಿ ತಮಗೆ ಸೂಕ್ತ ಸ್ಥಾನ ದೊರಕುವ ಸುಳಿವನ್ನು ನೀಡಿದರು.
ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪಿಸುವಾಗ ಸದಾನಂದರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನ ದೊರಕಿಸಿಕೊಡುವ ಭರವಸೆ ನೀಡಲಾಗಿತ್ತು.
ಆದರೆ ಇದುವರೆಗೂ ಅವರಿಗೆ ಯಾವುದೇ ಸೂಕ್ತ ಸ್ಥಾನಮಾನ ಲಭ್ಯವಾಗಿಲ್ಲ. ಆದರೆ ಚುನಾವಣೆ ಹೊಸ್ತಿಲಲ್ಲಿರುವಾಗ ಅವರಿಗೆ ಸೂಕ್ತ ಸ್ಥಾನ ಲಭಿಸಲಿದೆ. ಇತ್ತೀಚೆಗೆ ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದಾಗ, ಸದಾನಂದರಿಗೆ ಈ ಭರವಸೆ ದೊರೆತಿದೆ ಎಂದು ಪಕ್ಷದ ಮೂಲಗಳು ಹೇಳಿವೆ.




















