ಎಚ್ ಸಿಎಲ್ ವಿರುದ್ಧ ಫ್ರೆಶ್ ಟೆಕ್ಕಿಗಳ ಪ್ರತಿಭಟನೆ
ದೇಶದ ನಾಲ್ಕನೇ ಅತಿದೊಡ್ಡ ಸಾಫ್ಟ್ ವೇರ್ ಹಾಗೂ ಹೊರಗುತ್ತಿಗೆ ಸಂಸ್ಥೆ ಎಚ್ ಸಿಎಲ್ ಕಳೆದ ಹಲವು ತ್ರೈಮಾಸಿಕ ಗಳಿಸಿದ್ದ ಗೌರವ ಮನ್ನಣೆ ಎಲ್ಲಾ ಮಣ್ಣುಪಾಲಾಗಿದೆ. ಕ್ಯಾಂಪಸ್ ಮೂಲಕ, ನೇರ ಸಂದರ್ಶನ ಮೂಲಕ ನೇಮಕಾತಿಗೊಂಡಿದ್ದ ಪದವೀಧರರು 'Date of Joining' ಪತ್ರ ಸಿಗದೆ ಒದ್ದಾಡುತ್ತಿದ್ದು, ತಮ್ಮ ಸಿಟ್ಟನ್ನು ಪ್ರತಿಭಟನೆ ಮೂಲಕ ತೀರಿಸಿಕೊಂಡಿದ್ದಾರೆ. ಮುಂದಿನ ಆಗಸ್ಟ್ ತನಕ ಏನು ಹೇಳಲು ಸಾಧ್ಯವಿಲ್ಲ ಎಂದು ಎಚ್ ಸಿಎಲ್ ಕಂಪನಿ ಪ್ರತಿಕ್ರಿಯಿಸಿದೆ.
ಪ್ರತಿಭಟನೆ ನಿರತ ಪದವೀಧರರನ್ನು ಸೆಪ್ಟೆಂಬರ್ 2011ರಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಕೆಲವೇ ತಿಂಗಳುಗಳಲ್ಲಿ ನಿಮಗೆ ಕಂಪನಿಯಿಂದ ಸೇರ್ಪಡೆ ಕುರಿತು ಪತ್ರ ಬರಲಿದೆ ಎಂದು ಆಶ್ವಾಸನೆ ನೀಡಲಾಗಿತ್ತು. ಆದರೆ, ಇನ್ನೂ ಸೇರ್ಪಡೆ ದಿನಾಂಕ ಪತ್ರಕ್ಕಾಗಿ ಪರಿತಪಿಸುತ್ತಿದ್ದಾರೆ.
ಎಚ್ ಸಿಎಲ್ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿನೀತ್ ನಾಯರ್, ಸಿಇಒ ಅನಂತ್ ಗುಪ್ತಾ ಅವರ ಕಚೇರಿ ಇರುವ ನೋಯ್ಡಾದ ಸೆಕ್ಟರ್ 3 ಕೇಂದ್ರದ ಮುಂದೆ ಸುಮಾರು 80-100 ಇಂಜಿನಿಯರ್ ಗಳು ಪ್ರತಿಭಟನೆ ನಡೆಸಿದ್ದಾರೆ.
ಆಂಧ್ರಪ್ರದೇಶ ವಿವಿಯ ಹೈದರಾಬಾದಿನ ಗಾಂಧಿ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್, ಪುಣೆಯ ಮಹಾರಾಷ್ಟ್ರ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತಮಿಳುನಾಡಿನ ವೆಲ್ಲೂರು ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಾಸ್ತ್ರ ವಿವಿಯಿಂದ ನೇಮಕಾತಿಯಾದ ಇಂಜಿನಿಯರ್ ಗಳು ಪ್ರತಿಭಟನೆ ನಡೆಸಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ
ಪ್ರತಿಭಟನೆ ನಂತರ ಕಚೇರಿಯೊಳಗೆ ಮಾತುಕತೆ ಸಂಧಾನ ನಡೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಮುಂದಿನ ಆಗಸ್ಟ್ ತಿಂಗಳಿನ ತನಕ ನೇಮಕಾತಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವರಿಗೆ ಎಚ್ ಸಿಎಲ್ ಟೆಕ್ನಾಲಜೀಸ್ ಬದಲಿಗೆ ಎಚ್ ಸಿಎಲ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಸೇರುವಂತೆ ಆಹ್ವಾನ ನೀಡಲಾಗಿದೆ ಇದಕ್ಕಾಗಿ Letter of Indent(LOI) ನೀಡಲಾಗಿದೆ. ಅದರೆ, ಸಂಬಳ ಅತಿ ಕಡಿಮೆ ಸಿಗಲಿದೆ.
ಫ್ರೆಶರ್ಸ್ ಗೆ ವಾರ್ಷಿಕ 2.75 ಲಕ್ಷ ರು ಸಂಬಳದಂತೆ ನೇಮಕಾತಿ ಮಾಡಿಕೊಳ್ಳಲು ಎಚ್ ಸಿಎಲ್ ಮುಂದಾಗಿದ್ದು, ಕ್ಯಾಂಪಸ್ ನೇಮಕಾತಿ ಸಮಯದಲ್ಲಿ 3.25 ಲಕ್ಷ ಪ್ರತಿ ವರ್ಷ ಸಿಗುವಂತೆ ಲೆಟರ್ ನೀಡಲಾಗಿತ್ತು. ಮೊದಲ ಮೂರು ತಿಂಗಳ ಸಂಬಳ ನೀಡಲು ಸಂಸ್ಥೆ ತಯಾರಿದೆ ಆದರೆ, ಎಚ್ ಸಿಎಲ್ ಇನ್ಫ್ರಾ ಸ್ಟಕ್ಚರ್ ಪೇ ರೋಲ್ ಗೆ ಒಳಪಡಬೇಕಾಗುತ್ತದೆ ಎಂದು ಸಂಸ್ಥೆ ಹೇಳಿದೆ.
ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿ ಬಿಪಿಒ ಉದ್ಯೋಗಿಗಳಂತೆ ದುಡಿಯಲು ಆರಂಭಿಸಿದರೆ ನಮ್ಮ ಕೆರಿಯರ್ ನಾಶವಾಗುತ್ತದೆ ಎಂದು ಉದ್ಯೋಗಾರ್ಥಿಗಳು ಗೋಳಾಡಿದ್ದಾರೆ. ಪ್ರತಿಭಟನೆಗಾರರಲ್ಲಿ ಹಲವಾರು ಮಂದಿ ಉಪವಾಸ ಸತ್ಯಾಗ್ರಹ ಕೂರಲು ಮುಂದಾಗಿದ್ದು, ವಿಷಯ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿ ನಂತರ ಆಯಾ ಪ್ರದೇಶದ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದೆ.