ಕೊಪ್ಪಳದಲ್ಲಿ 25 ಅಕ್ರಮ ರೆಸಾರ್ಟ್ ನೆಲಸಮ
ವಿರೂಪಾಪುರ ಗೆಡ್ಡೆಯಲ್ಲಿ ಜಿಲ್ಲಾಡಳಿತದ ಅನುಮತಿ ಪಡೆಯದೆ ರೆಸಾರ್ಟ್ ನಿರ್ಮಿಸಲಾಗಿದೆ. ಈ ರೆಸಾರ್ಟ್ ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿಗಳು ಉತ್ತರ ನೀಡುವಂತೆ 25 ರೆಸಾರ್ಟ್ ಮಾಲೀಕರಿಗೆ ನೋಟೀಸ್ ಜಾರಿಗೊಳಿಸಿದ್ದರು.
ನೋಟೀಸ್ ನೀಡಿ ಆರು ತಿಂಗಳು ಕಳೆದರೂ ರೆಸಾರ್ಟ್ ಮಾಲೀಕರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರೆಸಾರ್ಟ್ ಗಳನ್ನು ನೆಲಸಮ ಮಾಡುವಂತೆ ಗಂಗಾವತಿ ತಹಶೀಲ್ದಾರ್ ಗೆ ಜಿಲ್ಲಾಧಿಕಾರಿ ಅದೇಶ ನೀಡಿದ್ದರು. ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಆದೇಶ ಮತ್ತು ಜೆಸಿಬಿಯೊಂದಿಗೆ ಬಂದ ತಹಶೀಲ್ದಾರ್ 25 ರೆಸಾರ್ಟ್ ಗಳನ್ನು ನೆಲಸಮ ಗೊಳಿಸಿದರು.
ವಿದೇಶಿಯರಿದ್ದರು : ಬೆಳಗ್ಗೆ ಜೆಸಿಬಿಗಳು ರೆಸಾರ್ಟ್ ಗಳನ್ನು ನೆಲಸಮ ಗೊಳಿಸಲು ಮುಂದಾದಾಗ ಅದರಲ್ಲಿದ್ದವರು ಮತ್ತು ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಬಹುತೇಕ ರೆಸಾರ್ಟ್ ಗಳಲ್ಲಿ ವಿದೇಶೀಯರು ನೆಲೆಸಿದ್ದರು. ಸ್ಥಳೀಯ ಪೊಲೀಸರ ಸಹಕಾರ ಪಡೆದ ತಹಶೀಲ್ದಾರ್ ರೆಸಾರ್ಟ್ ಗಳನ್ನು ತೆರವುಗೊಳಿಸಿದರು.