ಟಿಕೆಟ್ ಆಕಾಂಕ್ಷಿ ವಲಸಿಗರಿಗೆ ನಿರಾಸೆ ಗ್ಯಾರಂಟಿ!
ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ಸ್ವತಃ ಈ ಬಗ್ಗೆ ಸುಳಿವು ನೀಡಿದ್ದಾರೆ. ಪಕ್ಷ ಸಂಘಟನೆಗಾಗಿ ಪಕ್ಷಕ್ಕೆ ಬನ್ನಿ, ಚುನಾವಣೆಯಲ್ಲಿ ಟಿಕೆಟ್ ನೀಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ವಲಸಿಗರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಕಾಂಗ್ರೆಸ್ ಗೆ ಹೆಚ್ಚಿನ ವಲಸಿಗರು ಸೇರುತ್ತಿರುವುದರಿಂದ ಮೂಲ ಕಾಂಗ್ರೆಸ್ಸಿಗರು ಕೋಪಗೊಂಡಿದ್ದರು. ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದರು. ಪಕ್ಷದ ಅಧ್ಯಕ್ಷ ಪರಮೇಶ್ವರ್ ಅವರನ್ನು ಭೇಟಿಯಾಗಿ ವಲಸಿಗರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂದು ಮನವಿ ಮಾಡಿದ್ದಾರೆ ಎನ್ನುತ್ತಿವೆ ಕಾಂಗ್ರೆಸ್ ಉನ್ನತ ಮೂಲಗಳು.
ಹೈಕಮಾಂಡ್ ಜೊತೆಯೂ ಈ ಬಗ್ಗೆ ಮಾತುಕತೆ ನಡೆಸಿದ ಪರಮೇಶ್ವರ್ ವಲಸಿಗರು ಪಕ್ಷ ಸಂಘಟನೆಗಾಗಿ ಸೇರಿಕೊಂಡರೆ ಸ್ವಾಗತ. ಟಿಕೆಟ್ ಆಕಾಂಕ್ಷಿಗಳಾಗಿ ಬರಬೇಡಿ ಎಂದು ಸಂದೇಶ ರವಾನಿಸಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಿ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಅಗತ್ಯ ತಯಾರಿ ಮಾಡಿಕೊಳ್ಳುತ್ತಿರುವುದಂತು ಸತ್ಯ.
ಇಂತಹ ಸಮಯದಲ್ಲಿ ಮೂಲ ಕಾಂಗ್ರೆಸಿಗರು ಮತ್ತು ವಲಸಿಗರ ನಡುವೆ ಪೈಪೋಟಿ ಪ್ರಾರಂಭವಾದರೆ, ಪಕ್ಷದ ಒಗ್ಗಟ್ಟಿಗೆ ಧಕ್ಕೆ ಉಂಟಾಗುತ್ತದೆ ಎಂದು ಪಕ್ಷದ ಪ್ರಮಖರು ಆಲೋಚನೆ ನಡೆಸಿದ್ದಾರೆ. ಆದ್ದರಿಂದ ಆದಷ್ಟು ಮೂಲ ಕಾಂಗ್ರೆಸಿಗರಿಗೆ ಒತ್ತು ನೀಡುವ ಮೂಲಕ ಅಸಮಧಾನದ ಉಂಟಾಗದಂತೆ ತಡೆಯುವ ತಂತ್ರ ರೂಪಿಸಿದ್ದಾರೆ.
ಈ ಬಗ್ಗೆ ರಾಜ್ಯ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿರುವ ವರಿಷ್ಠರು, ಪಕ್ಷ ಸೇರುವ ಯಾವುದೇ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ ಎಂದು ಭರವಸೆ ನೀಡಬೇಡಿ. ಚುನಾವಣಾ ಸಮಯದ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳೋಣ ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.