ಯೋಗೇಶ್ವರ, ರಾಜೂಗೌಡ ರಾಜೀನಾಮೆ ಸಲ್ಲಿಕೆ
ಗುರುವಾರ ಬೆಳಗ್ಗೆ ರಾಜಭವನಕ್ಕೆ ತೆರಳಿದ್ದ ಅರಣ್ಯ ಸಚಿವ ಸಿ.ಪಿ ಯೋಗೇಶ್ವರ್ ಹಾಗೂ ಸಣ್ಣ ಕೈಗಾರಿಕಾ ಸಚಿವ ರಾಜೂ ಗೌಡ ಅವರು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿ ಮಾಡಿ ಕೆಲ ಹೊತ್ತು ಚರ್ಚೆ ನಡೆಸಿ ನಂತರ ರಾಜೀನಾಮೆ ಪತ್ರ ಸಲ್ಲಿಸಿ ಹೊರಬಂದರು. ಹೊರಗಡೆ ಇವರಿಬ್ಬರನ್ನು ಸ್ವಾಗತಿಸಲು ಹೊನ್ನಾಳಿ ಶಾಸಕ, ಅಬಕಾರಿ ಸಚಿವ ರೇಣುಕಾಚಾರ್ಯ ಅವರು ಇದ್ದದ್ದು ಕುತೂಹಲ ಕೆರಳಿಸಿತು.
ಅಲ್ಲಿಂದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಸಲ್ಲಿಸಿ ಹೊರ ಬಂದಿದ್ದಾರೆ.ಈಗ ಯೋಗೇಶ್ವರ್ ಹಾಗೂ ರಾಜೂ ಗೌಡ ಅವರ ವಾಹನಗಳು ಮಡಿಕೇರಿಯತ್ತ ಪ್ರಯಾಣ ಬೆಳೆಸಿದೆ. ಸ್ಪೀಕರ್ ಬೋಪಯ್ಯ ಅವರನ್ನು ಮಡಿಕೇರಿಯಲ್ಲಿ ಸಂಧಿಸಿ ರಾಜೀನಾಮೆ ಪತ್ರ ನೀಡಿ ಅಧಿಕೃತವಾಗಿ ಬಿಜೆಪಿ ಸರ್ಕಾರಕ್ಕೆ ಗುಡ್ ಬೈ ಹೇಳಲು ಇಬ್ಬರು ಸಜ್ಜಾಗಿದ್ದಾರೆ.
ಇದು ನಮ್ಮ ಆತುರದ ನಿರ್ಧಾರವಲ್ಲ. ಬಜೆಟ್ ಮಂಡನೆಗಾಗಿ ಕಾದಿದ್ದೆವು. ರಾಜೀನಾಮೆ ನಿರ್ಧಾರ ತುಂಬಾ ಮುಂಚಿತವಾಗಿ ಕೈಗೊಂಡಿದ್ದೆವು ಎಂದು ರಾಜೂ ಗೌಡ ಹೇಳಿದ್ದಾರೆ.
ಇನ್ನೆರಡು ದಿನದಲ್ಲಿ ಕಾಂಗ್ರೆಸ್ ಸೇರುತ್ತೇನೆ ಎಂದು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದು ನಿಜವಾಗುವ ಕಾಲ ಬಂದಿದೆ. ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿರುವ ಬಿಜೆಪಿಯ ಇನ್ನೂ ಮೂವರು ಸಚಿವರು ಕೆಲವೆ ದಿನಗಳಲ್ಲಿ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭೆ ಚುನಾವಣೆಯ ತಯಾರಿಯಲ್ಲಿ ತೊಡಗಿರುವ ಬಿಜೆಪಿಗೆ ಈ ರಾಜೀನಾಮೆಗಳು ಮತ್ತಷ್ಟು ತಲೆನೋವು ತಂದೊಡ್ಡಿದೆ. ಆನಂದ್ ಆಸ್ನೋಟಿಕರ್, ವಿ.ಸೋಮಣ್ಣ, ಶಾಸಕರಾದ ಪ್ರತಾಪಗೌಡ ಪಾಟೀಲ್ ಮತ್ತು ಸುರೇಶ್ ಗೌಡ. ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದಾರೆ.
224 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿಯ ಬಲ 108. ನಾಗಠಾಣ ಕ್ಷೇತ್ರದ ವಿಠಲ ಕಟಕದೋಂಡ ಮತ್ತು ತರೀಕೆರೆಯ ಡಿ.ಎಸ್.ಸುರೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಅದು ಇನ್ನೂ ಅಂಗೀಕಾರ ಆಗಿಲ್ಲ. ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಪಕ್ಷದಿಂದ ಪಕ್ಷಕ್ಕೆ ಹಾರುವವರ ಸಂಖ್ಯೆ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ. ಸದ್ಯಕ್ಕೆ ನಮ್ಮ ಸರ್ಕಾರ ಬಹುಮತದಲ್ಲೇ ಇದೆ. ಅಗತ್ಯ ಸಂಖ್ಯೆ, ಶಾಸಕರ ಬಲ ನಮಗಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ವಿಶ್ವಾಸದ ಹೇಳಿಕೆ ಬೆಲೆ ಕಳೆದು ಕೊಳ್ಳುತ್ತಿದೆ.