ಸೋಮಣ್ಣ, ಯೋಗಿ ಕೈಪಡೆಗೆ, ಪರಮ್ ಇನ್ ಡೆಲ್ಲಿ
ನಾಲ್ವರು ಸಚಿವರು ಹಾಗೂ ಕೆಲ ಶಾಸಕರ ಪಟ್ಟಿಯನ್ನು ತಯಾರಿಸಿಕೊಂಡು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರು ದೆಹಲಿ ತಲುಪಿದ್ದಾರೆ. ಸದ್ಯ ದೆಹಲಿಯಲ್ಲೇ ಇರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆಗೆ ಹೈಕಮಾಂಡ್ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಬಿಜೆಪಿ ಶಾಸಕರ ಜೊತೆಗೆ ನಿರೀಕ್ಷೆಯಂತೆ ಪಕ್ಷೇತರರು ಈ ಬಾರಿ ಕೈ ಪಡೆ ಪಾಲಾಗುವುದು ಖಾತ್ರಿಯಾಗಿದೆ.
ಯಾರಿದ್ದಾರೆ ಪಟ್ಟಿಯಲ್ಲಿ?: ಸಚಿವ ವಿ ಸೋಮಣ್ಣ, ಸಿಪಿ ಯೋಗೇಶ್ವರ್, ರಾಜುಗೌಡ ಹಾಗೂ ಆನಂದ್ ಆಸ್ನೋಟಿಕರ್ ಜೊತೆಗೆ ಪಕ್ಷೇತರ ಶಾಸಕರಾದ ನರೇಂದ್ರಸ್ವಾಮಿ, ಗೂಳಿಹಟ್ಟಿ ಶೇಖರ್, ಡಿ. ಸುಧಾಕರ್, ವೆಂಕಟರಮಣಪ್ಪ ಹಾಗೂ ಶಿವರಾಜ್ ತಂಗಡಗಿ ಅವರು ಕಾಂಗ್ರೆಸ್ ಸೇರ ಬಯಸಿದ್ದಾರೆ. ಯೋಗೇಶ್ವರ್ ಹಾಗೂ ಸೋಮಣ್ಣ ಸೇರ್ಪಡೆ ಕೆಲ ಶಾಸಕರು ವಿರೋಧಿಸಿದ್ದು ಬಿಟ್ಟರೆ ಇವರ ಸೇರ್ಪಡೆಗೆ ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಹೆಚ್ಚಿನ ಪ್ರತಿರೋಧ ಕಂಡು ಬಂದಿರಲಿಲ್ಲ.
ಈಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂದನ್ ಮಿಸ್ತ್ರಿ, ಆಸ್ಕರ್ ಫರ್ನಾಂಡೀಸ್ ಸೇರಿದಂತೆ ಪ್ರಮುಖ ನಾಯಕರನ್ನು ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿರುವುದರಿಂದ ಕಾರ್ಯತಂತ್ರ ರೂಪಿಸಲು ಈ ವಲಸೆ ಹಕ್ಕಿಗಳನ್ನು ಆದಷ್ಟು ಬೇಗ ಕಾಂಗ್ರೆಸ್ ಗೂಡಿನೊಳಗೆ ಬಿಟ್ಟುಕೊಳ್ಳಲು ನಿರ್ಧರಿಸಲಾಗಿದೆ.
ಹೈಕಮಾಂಡ್ ಒಪ್ಪಿಗೆ ಸಿಕ್ಕ ಕೂಡಲೇ ಬಿಜೆಪಿ ಶಾಸಕರು, ಸಚಿವರುಗಳ ಸರಣಿ ರಾಜೀನಾಮೆ ಆರಂಭಗೊಳ್ಳಲಿದೆ. ಕನಿಷ್ಠ ಪಕ್ಷ ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಚನ್ನರಾಯಪಟ್ಟಣದ ಸಿ.ಎಸ್ ಪುಟ್ಟೇಗೌಡ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಸೇರಿದಂತೆ ಇನ್ನಷ್ಟು ಜನ ಹಾಲಿ ಶಾಸಕರು, ಸಚಿವರುಗಳು ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಇದೆ.