ಫೆ.6-11 : ಸುತ್ತೂರು ಶ್ರೀಕ್ಷೇತ್ರದಲ್ಲಿ ಜಾತ್ರಾಮಹೋತ್ಸವ
ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ಸಮ್ಮುಖದಲ್ಲಿ ಜರುಗಲಿದ್ದು, ವಿಶೇಷ ಪೂಜೆ, ಕ್ರೀಡಾ ಸ್ಪರ್ಧೆ, ತೆಪ್ಪೋತ್ಸವ, ಕೃಷಿ ಮೇಳ, ಹಸು ಮೇಳ, ರಸಪ್ರಶ್ನೆ ಸ್ಪರ್ಧೆ, ಸಾಂಸ್ಕೃತಿಕ ಕಲಾಪ್ರದರ್ಶನ, ಸಾಮೂಹಿಕ ವಿವಾಹ, ಭಜನಾ ಮೇಳ, ರಥೋತ್ಸವ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಹಾಸ್ವಾಮೀಜಿ ಅವರಿದ ಹತ್ತು ಶತಮಾನಗಳ ಹಿಂದೆ ಸ್ಥಾಪಿತವಾದ ಸುಕ್ಷೇತ್ರದಲ್ಲಿ ನಡೆಯುತ್ತಿರುವ ಈ ಜಾತ್ರಾಮಹೋತ್ಸವ ನಾಡಿನ ಬಹುದೊಡ್ಡ ಸಮಾರಂಭಗಳಲ್ಲಿ ಒಂದು. ಈ ಜಾತ್ರೆಗೆ ಭರ್ಜರಿ ಸಿದ್ಧತೆ ನಡೆದಿದ್ದು, ರಾಜ್ಯದಲ್ಲಿ ಮಹಾಸಂಸ್ಥಾನ ಸ್ಥಾಪಿಸಿರುವ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಆ ಸಂದರ್ಭದಲ್ಲಿ ರಜಾ ನೀಡಲಾಗಿದ್ದು, ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಅನುವುಮಾಡಿಕೊಡಲಾಗಿದೆ. ದೇಶ ವಿದೇಶಗಳಲ್ಲಿ ಸಂಸ್ಥೆ 350ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದೆ.
ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮೀಜಿ ಅವರ ಜನ್ಮದಿನಾಚರಣೆಯ ಅಂಗವಾಗಿ ಪ್ರತಿವರ್ಷ 6 ದಿನಗಳ ಕಾಲ ಈ ಸಮ್ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಶಿವಗಂಗೆಯ ಮಹಾಲಕ್ಷ್ಮಿ ಮಹಾಸಂಸ್ಥಾನ ಪೀಠದ ಜಗದ್ಗುರು ಶ್ರೀ ಜ್ಞಾನಾನಂದ ಪುರಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಕ್ರೀಡಾ ಕಾರ್ಯಕ್ರಮಗಳು ಆರಂಭವಾಗಲಿವೆ.
ಫೆ.6ರಂದು ಬೆಳಗಿನ ಜಾವ 4 ಗಂಟೆಗೆ ನೆರವೇರಿಸಲಾಗುವ ಮಹಾರುದ್ರಾಭಿಷೇಕದೊಂದಿಗೆ ಜಾತ್ರಾಮಹೋತ್ಸವ ಆರಂಭವಾಗುತ್ತದೆ. ಈ ಜಾತ್ರೆಯ ಅಧ್ಯಕ್ಷತೆಯನ್ನು ಬಿಎಸ್ಆರ್ ಕಾಂಗ್ರೆಸ್ನ ಅಧ್ಯಕ್ಷ ಬಿ. ಶ್ರೀರಾಮುಲು ಅವರು ಅಧ್ಯಕ್ಷತೆ ವಹಿಸಿದ್ದರೆ, ಕ್ರೀಡಾಕೂಟವನ್ನು ಅಬಕಾರಿ ಸಚಿವ ರೇಣುಕಾಚಾರ್ಯ ಅವರು ಉದ್ಘಾಟಿಸಲಿದ್ದಾರೆ. ನೀವೂ ಜಾತ್ರೆಗೆ ಹೋಗುವ ಪ್ಲಾನ್ ಹಾಕ್ಕೊಂಡಿದ್ದೀರಾ?
ಹೆಚ್ಚಿನ ವಿವರಗಳಿಗಾಗಿ ನೋಡಿರಿ www.jssonline.org ಅಥವಾ ಈಮೇಲ್ ವಿಳಾಸ : [email protected]