ರಾಜೀನಾಮೆ ಅಂಗೀಕಾರ ಇಲ್ಲ : ಸ್ಪೀಕರ್ ಬೋಪಯ್ಯ
ಇದಕ್ಕೂ ಮುನ್ನ 13 ಜನ ಶಾಸಕರು ಅಧಿಕೃತವಾಗಿ ರಾಜೀನಾಮೆ ಪತ್ರವನ್ನು ವಿಧಾನಸಭಾಧ್ಯಕ್ಷ ಕೆಜೆ ಬೋಪಯ್ಯ ಅವರಿಗೆ ನೀಡಿದರು. ಪ್ರತಿಯೊಬ್ಬ ಶಾಸಕರೊಡನೆ ಪ್ರತ್ಯೇಕವಾಗಿ ಸ್ಪೀಕರ್ ಅವರು ಮಾತುಕತೆ ನಡೆಸಿದರು. [ರಾಜೀನಾಮೆ ಸಲ್ಲಿಸಿದ ಶಾಸಕರ ವಿವರ]
13 ಶಾಸಕರ ಅನಹರ್ತೆ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಲೋಕಸಭಾ ಸ್ಪೀಕರ್ ಮೀರಾಕುಮಾರ್ ಅವರ ಗಮನಕ್ಕೆ ತರಲಾಗುತ್ತಿದೆ. ಸ್ಪೀಕರ್ ಮೀರಾಕುಮಾರ್ ಅವರ ಅಭಿಪ್ರಾಯ ಕೇಳಲಾಗುತ್ತಿದೆ. ನಂತರ ರಾಜೀನಾಮೆ ಅಂಗೀಕಾರದ ಬಗ್ಗೆ ನಿರ್ಧರಿಸಲಾಗುವುದು ಎಂದು ಬೋಪಯ್ಯ ಸ್ಪಷ್ಟಪಡಿಸಿದರು.
ರಾಜೀನಾಮೆ ಪ್ರಹಸನ ತಾರಕ್ಕೇರಿದ ಪರಿಣಾಮ ಸ್ಪೀಕರ್ ಕೆಜೆ ಬೋಪಯ್ಯ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ರದ್ದುಗೊಳಿಸಿ ಚುಟುಕಾಗಿ ಸುದ್ದಿಗಾರರಿಗೆ ನಡೆದ ವಿಷಯವನ್ನು ವಿಷದಪಡಿಸಿದ್ದಾರೆ.
'ರಾಜೀನಾಮೆ ನೀಡಿರುವ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ದೂರು ಬಂದಿದೆ. ಈ ಹಿನ್ನೆಲೆಯಲ್ಲಿ, ತಕ್ಷಣಕ್ಕೆ ರಾಜಿನಾಮೆಯನ್ನು ಅಂಗೀಕರಿಸುವುದಿಲ್ಲ. ಪ್ರತಿಯೊಬ್ಬ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸದ್ಯಕ್ಕೆ ಇಬ್ಬರು ಶಾಸಕರ ರಾಜೀನಾಮೆ ಮಾತ್ರ ಸ್ವೀಕರಿಸಲಾಗಿದೆ.
ಕೆಲ ಶಾಸಕರ ರಾಜೀನಾಮೆ ಪತ್ರದಲ್ಲಿ ಕೆಲವು ದೋಷಗಳು ಕಂಡು ಬಂದಿದ್ದರಿಂದ ಮತ್ತೊಮ್ಮೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಲಾಗಿದೆ. ಇಂಧನ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ 5 ಜನ ಶಾಸಕರು ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಅಂಗೀಕರಿಸಬೇಕೆ? ಬೇಡವೇ? ಎಂಬುದರ ಬಗ್ಗೆ ಹಾಗೂ ಶಾಸಕರ ಅನರ್ಹತೆ ವಿಷಯದ ಬಗ್ಗೆ ಸ್ಥೂಲವಾಗಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರಿಗೆ ಫ್ಯಾಕ್ಸ್ ಮೂಲಕ ಪತ್ರ ಕಳಿಸಲಾಗಿದೆ. ಅವರ ಉತ್ತರ ಬರುವ ತನಕ ಯಾವುದೇ ನಿರ್ಧಾರ ಸಾಧ್ಯವಿಲ್ಲ ಎಂದು ಸ್ಪೀಕರ್ ಕೆಜೆ ಬೋಪಯ್ಯ ಹೇಳಿದ್ದಾರೆ. ಈ ನಡುವೆ ತಕ್ಷಣವೇ ರಾಜೀನಾಮೆ ಅಂಗೀಕರಿಸಬೇಕು ಎಂದು ಆಗ್ರಹಿಸಿ ವಿಧಾನಸಭಾಧ್ಯಕ್ಷರ ಕಚೇರಿಯಲ್ಲೇ ಶಾಸಕರು ಬೀಡುಬಿಟ್ಟಿದ್ದಾರೆ.
ಇದೇ ಸಮಯದಲ್ಲಿ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಟೀಮ್ ಈಗ ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರ ಮೇಲೆ ತಿರುಗಿ ಬಿದ್ದಿದೆ. ಕೆಜೆಪಿ ಬೆಂಬಲಿತ 13 ಶಾಸಕರ ಅನರ್ಹತೆಗೆ ಆಗ್ರಹಿಸಿದ ಬೇಳೂರು ಟೀಂ ಈಗ ಎಂಎಲ್ ಸಿ ಹಾಗೂ ಎಂಪಿಗಳ ಅನರ್ಹತೆಗೆ ಮನವಿ ಸಲ್ಲಿಸಿದ ಘಟನೆ ನಡೆದಿದೆ.