ಮುಂಬೈ: ಗುಡಿಸಲುಗಳಿಗೆ ಬೆಂಕಿ, 6 ಜನ ಬಲಿ
ಸುಮಾರು 50 ಕ್ಕೂ ಅಧಿಕ ಗುಡಿಸಲುಗಳಿಗೆ ಬೆಂಕಿ ತಗುಲಿರುವುದರಿಂದ ಸುಮಾರು 3000ಕ್ಕೂ ಅಧಿಕ ಮಂದಿ ನೆಲೆ ಇಲ್ಲದೆ ಗೋಳಾಡುವ ಪರಿಸ್ಥಿತಿ ಎದುರಾಗಿದೆ. ಘಟನಾ ಸ್ಥಳಕ್ಕೆ ಸುಮಾರು 11 ಕ್ಕೂ ಅಧಿಕ ಅಗ್ನಿಶಾಮಕದಳ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿತ್ತು.
BMC ವಿಪತ್ತು ನಿರ್ವಹಣಾ ಕೇಂದ್ರದ ಮಾಹಿತಿ ಪ್ರಕಾರ ಮಾಹಿಂನ ನಯಾ ನಗರ್ ಸ್ಲಮ್ ವೊಂದರಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹತ್ತಿಕೊಂಡಾಗ ಮನೆಯಲ್ಲಿದ್ದವರು ಸುಖ ನಿದ್ರೆಯಲ್ಲಿದ್ದರು. ಬೆಂಕಿ ತಗುಲಿರುವ ಬಗ್ಗೆ ತಿಳಿಯುವ ಮುನ್ನವೇ ಎಲ್ಲರೂ ಸುಟ್ಟು ಕರಕಲಾಗಿಬಿಟ್ಟಿದ್ದಾರೆ.
ಸುಮಾರು ಮುರ್ನಾಲ್ಕು ಗಂಟೆಗಳ ಹರ ಸಾಹಸ ಪ್ರಯತ್ನದ ನಂತರ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಬೆಂಕಿ ಯಾವ ಕಾರಣಕ್ಕೆ ತಗುಲಿದೆ ಎಂಬುದರ ಬಗ್ಗೆ ಇನ್ನೂ ತಿಳಿದು ಬಂದಿಲ್ಲ ಎಂದು ಅಗ್ನಿಶಾಮಕದಳ ಸಿಬ್ಬಂದಿ ಹೇಳಿದ್ದಾರೆ.
ಈ ಕೊಳಚೆ ಪ್ರದೇಶದಗಳಲ್ಲಿ ಅಧಿಕ ಜನ ದಟ್ಟಣೆ ಇರುವ ಕಾರಣ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಕಾಂಗ್ರೆಸ್ ಸಂಸದ ಏಕನಾಥ್ ಗಾಯಕ್ವಾಡ್ ಹೇಳಿದ್ದಾರೆ.