ಕಾವೇರಿಗಾಗಿ ಮತ್ತೆ ಸೆಲ್ವಿ ಜಯಲಲಿತಾ ಕ್ಯಾತೆ
ನದಿ ನೀರಿಗಾಗಿ ಕರ್ನಾಟಕದೊಡನೆ ಮತ್ತೊಮ್ಮೆ ಕದನಕ್ಕಿಳಿದಿರುವ ತಮಿಳುನಾಡು ನೀಡಿದ ಅರ್ಜಿ ಸ್ವೀಕರಿಸಲಾಗಿದೆ. ಆದರೆ, ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆಯೇ ಎಂಬುದರ ಬಗ್ಗೆ ಇನ್ನೂ ಒಂದು ವಾರ ಕಾದು ನೋಡಬೇಕಿದೆ.
ಈಗಾಗಲೇ ಕೆಆರ್ ಎಸ್, ಕಬಿನಿ, ಹೇಮಾವತಿಯಲ್ಲಿ ನೀರಿನ ಮಟ್ಟ ಕುಸಿದಿದೆ. ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಏಳು ಸಾಧ್ಯತೆ ನಿಚ್ಚಳವಾಗಿದೆ. ಪರಿಸ್ಥಿತಿ ಹೀಗಿರುವಾಗ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿರುವುದು ಕರ್ನಾಟಕ ಜನತೆಯನ್ನು ಕೆರಳಿಸಿದೆ.
ತಮಿಳುನಾಡಿನಲ್ಲಿ ನೀರಿನ ಕೊರತೆ ಆಗಿರುವುದರಿಂದ ಬೆಳೆಗಳು ಒಣಗುತ್ತಿದೆ. 14 ಲಕ್ಷ ಎಕರೆ ಭೂಮಿಗೆ ನೀರು ಒದಗಿಸಬೇಕಿದೆ. ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಎಂದು ತಮಿಳುನಾಡು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಪೂರಕ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ನದಿ ನೀರು ಹಂಚಿಕೆ ವಿಷಯದಲ್ಲಿ ಮೊಟ್ಟಮೊದಲ ಬಾರಿಗೆ ಕಾವೇರಿ ಮೇಲುಸ್ತುವಾರಿ ಸಮಿತಿಯ ನಿರ್ಣಯ ಕರ್ನಾಟಕ ಪರವಾಗಿ ಬಂದಿತ್ತು. ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಅಗತ್ಯವಿಲ್ಲ ಎಂದ ಸಮಿತಿ. ಗುರುವಾರ (ಜ.10) ತೀರ್ಪು ನೀಡಿತ್ತು.
ಜನವರಿ ತಿಂಗಳಿನಲ್ಲಿ 1 ರಿಂದ 9 ರ ತನಕ ಮೆಟ್ಟೂರು ಡ್ಯಾಂನಲ್ಲಿ 1.6 ಟಿಎಂಸಿ ನೀರು ಸಂಗ್ರಹವಾಗಿತ್ತು. ಜನವರಿ ತಿಂಗಳಿನ ಪಾಲು ಸೇರಿದಂತೆ ಕರ್ನಾಟಕದಿಂದ 52 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಆಗ್ರಹಿಸಿತ್ತು.
ರಾಜ್ಯ ಮುಖ್ಯಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರು, ಕಾವೇರಿ ನದಿ ಪಾತ್ರದ ನಾಲ್ಕು ಜಲಾಶಯಗಳಲ್ಲಿ ಈಗಿರುವ ನೀರಿನ ಪ್ರಮಾಣ ಕೇವಲ 17 ಟಿಎಂಸಿ. ಮಳೆ ಬಂದಾಕ್ಷಣಕ್ಕೆ ಈ ಜಲಾಶಯಗಳು ತುಂಬುವುದಿಲ್ಲ.
ಕರ್ನಾಟಕಕ್ಕೆ 30 ಟಿಎಂಸಿಗೂ ಅಧಿಕ ನೀರು ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇರುವಾಗ ತಮಿಳುನಾಡಿಗೆ ನೀರು ಬಿಡುಗಡೆ ಸಾಧ್ಯವೇ ಇಲ್ಲ ಎಂದು ಸಮರ್ಥ ವಾದ ಮಂಡಿಸಿದ್ದರು.
ಇದಕ್ಕೂ ಮುನ್ನ ರೈತರ ಹಿತದೃಷ್ಟಿಯಿಂದ ಜನವರಿಯಲ್ಲಿ 18 ಟಿಎಂಸಿ ನೀರು ಬಿಡುಗಡೆಗೆ ಆದೇಶಿಸಬೇಕೆಂದು ಪ್ರಮಾಣ ಪತ್ರದಲ್ಲಿ ಮನವಿ ಮಾಡಿತ್ತು