ಉಡುಪಿ ಮಲ್ಪೆ ಬಂದರಿನಲ್ಲಿ ಮಿನಿ ತಮಿಳುನಾಡು
ಒಂದು ಬಗೆಯ ವಿಶಿಷ್ಟ ತಳಿಯ ಮೀನನ್ನು ಹಿಡಿಯುವುದನ್ನು ನಿಷೇಧಿಸಿ ಉಡುಪಿ ಜಿಲ್ಲಾಡಳಿತ ನಿಷೇಧಿಸಿತ್ತು. ಆದರೂ ಕಾನೂನು ಬಾಹಿರವಾಗಿ ತಮಿಳುನಾಡಿನಿಂದ ಬಂದ ಮೀನುಗಾರರು ಆದೇಶ ಉಲ್ಲಂಘಿಸಿ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ.
ರಾಜ್ಯದ ಮತ್ಯ್ಸಸಂಪತ್ತು ತಮಿಳರ ಪಾಲಾಗುತ್ತಿರುವುದನ್ನು ಈ ಹಿಂದೆಯೇ ಸ್ಥಳೀಯ ಮೀನುಗಾರರು ಜಿಲ್ಲಾಡಳಿತಕ್ಕೆ ಮತ್ತು ಪೊಲೀಸರಿಗೆ ದೂರು ನೀಡಿದ್ದರು.
ಗುರುವಾರ (ನ 22) ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಮೀನುಗಾರರು ಮಲ್ಪೆ ಮೀನುಗಾರಿಕಾ ಬಂದರಿನ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದ್ದಾರೆ.
ಮಲ್ಪೆ ಮೀನುಗಾರರ ಅಶೋಷಿಯೇಶನ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅಸಂಪ್ರದಾಯಿಕ ರೀತಿಯಲ್ಲಿ ಮೀನುಗಾರಿಕೆ ನಡೆಸುವುದು ಮತ್ತು ಅನ್ಯ ರಾಜ್ಯದವರು ಬಂದು ಮೀನುಗಾರಿಕೆ ನಡೆಸುವುದನ್ನು ತಡೆಗಟ್ಟ ಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಅನ್ಯ ರಾಜ್ಯದವರು ಬಂದು ಇಲ್ಲಿ ಮೀನುಗಾರಿಕೆ ನಡೆಸಬಾರದು ಎನ್ನುವುದಕ್ಕೆ ಕಾನೂನಿನಲ್ಲಿ ಯಾವುದೇ ನಿಯಮಗಳಿಲ್ಲ. ಆದರೂ ಈ ಸಂಬಂಧ ಸಿಎಂ ಶೆಟ್ಟರ್ ಅವರ ಬಳಿ ಮಾತುಕತೆ ನಡೆಸಿದ್ದೇನೆ.
ಬೆಳಗಾವಿಯಲ್ಲಿ ಡಿಸೆಂಬರ್ 4ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಬೇರೆ ರಾಜ್ಯದವರು ನಮ್ಮ ರಾಜ್ಯದಲ್ಲಿ ಮೀನುಗಾರಿಕೆ ಮಾಡುವುದನ್ನು ನಿಷೇಧಿಸಿ ಮಸೂದೆ ಮಂಡಿಸಿ ಅದಕ್ಕೆ ಅಧಿವೇಶನದಲ್ಲಿ ಅನುಮತಿ ಪಡೆಯುತ್ತೇವೆ ಎನ್ನುವ ಭರವಸೆ ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಪ್ರತಿಭಟನಾಕಾರರಿಗೆ ಹೇಳಿದ್ದಾರೆ.
ಕರಾವಳಿ ತೀರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಕ್ರಮ ಮತ್ತು ಅಸಂಪ್ರದಾಯಿಕ ಮೀನುಗಾರಿಕೆ ನಿಷೇಧ ಆದೇಶ ಜಾರಿಯಲ್ಲಿತ್ತು. ಅಲ್ಲದೆ ಉಡುಪಿ ಕರಾವಳಿ ವ್ಯಾಪ್ತಿಯ 10 ನಾಟಿಕಲ್ ಮೈಲು ದೂರದವರೆಗೆ ಅನ್ಯ ರಾಜ್ಯದವರು ಮೀನುಗಾರಿಕೆ ನಡೆಸುವಂತಿಲ್ಲ ಎಂದು ಉಡುಪಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.