ಗೆಸ್ಟ್ ಹೌಸ್ ಬಂದ್ ಮಾಡಲು ಅರಣ್ಯ ಸಚಿವ ಆದೇಶ
ರಾಜ್ಯದ ಅಭಯಾರಣ್ಯಗಳಲ್ಲಿರುವ ಸರ್ಕಾರಿ ಅತಿಥಿಗೃಹಗಳನ್ನು ಮುಚ್ಚಲು ಅರಣ್ಯ ಸಚಿವ ಆದೇಶಿಸಿದ್ದಾರೆ. ಅತಿಥಿಗೃಹಗಳಿದ್ದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ವನ್ಯಜೀವಿಗಳ ಓಡಾಟಕ್ಕೆ ತೊಂದರೆಯಾಗುತ್ತದೆ ಎಂದು ಯೋಗೇಶ್ವರ್ ಹೇಳಿದ್ದಾರೆ.
ಅರಣ್ಯ ಇಲಾಖೆ ನಿರ್ಮಿಸಿರುವ ಎಲ್ಲಾ ಅತಿಥಿಗೃಹಗಳನ್ನು ಮುಚ್ಚಲಾಗುವುದು. ಸಿಬ್ಬಂದಿ ಮತ್ತು ಅಧಿಕಾರಿಗಳ ಅನುಕೂಲಕ್ಕಾಗಿ ಅರಣ್ಯದ ಹೊರಗಡೆ ಕಟ್ಟಡಗಳನ್ನು ನಿರ್ಮಿಸಿ ತಂಗಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಅನಧಿಕೃತ ರೆಸಾರ್ಟ್ ಎತ್ತಂಗಡಿ: ಸುಪ್ರೀಂಕೋರ್ಟ್ ಆದೇಶದಂತೆ ರಕ್ಷಿತಾರಣ್ಯಗಳಲ್ಲಿ ಯಾವುದೇ ಖಾಸಗಿ ರೆಸಾರ್ಟ್ ನಿರ್ಮಾಣಕ್ಕೆ ಅವಕಾಶವಿಲ್ಲ. ಅರಣ್ಯ ಪ್ರದೇಶದ ಸುತ್ತಮುತ್ತ ಕೂಡಾ ಅನಧಿಕೃತ ರೆಸಾರ್ಟ್ ಗಳು ತಲೆ ಎತ್ತಿದೆ. ಇದರಿಂದ ವನ್ಯಜೀವಿಗಳ ಸ್ವತಂತ್ರ ಬದುಕಿಗೆ ಅಡ್ಡಿಯಾಗುತ್ತಿದೆ. ಎಲ್ಲಾ ರೆಸಾರ್ಟ್ ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಯೋಗೇಶ್ವರ್ ಹೇಳಿದರು.
ಜಂಗಲ್ ಲಾಡ್ಜಸ್ ಮತ್ತಿತರ ಖಾಸಗಿ ಸಂಸ್ಥೆಗಳು ಅರಣ್ಯ ಪ್ರದೇಶದಲ್ಲಿ ಕೈಗೆತ್ತಿಕೊಂಡಿರುವ ಪ್ರವಾಸೋದ್ಯಮ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿ ಆದಾಯಗಳಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವಂತೆ ಸೂಚಿಸಲಾಗುವುದು ಎಂದಿದ್ದಾರೆ.
ವಿದೇಶಿ ಪ್ರವಾಸಿಗರನ್ನೇ ಮೂಲ ಬಂಡವಾಳವನ್ನಾಗಿಸಿಕೊಂಡಿದ್ದ ಅರಣ್ಯ ಪ್ರದೇಶ ಬಳಿಯ ರೆಸಾರ್ಟ್ ಗಳು ಸಚಿವರ ಆದೇಶದಿಂದ ಚಿಂತೆಗೀಡಾಗಿದೆ. ಥಾಮಸ್ ಕುಕ್ ಸಂಸ್ಥೆ ಈಗಾಗಲೇ ಟೈಗರ್ ಸಫಾರಿ ತಡವಾಗಿರುವುದರಿಂದ ಶೇ 10 ರಷ್ಟು ಆದಾಯ ಖೋತಾ ಆಗಿದೆ ಎಂದಿದೆ.
ಭಾರತದಲ್ಲಿ ಹುಲಿ ಯೋಜನೆ ಕಠಿಣ ಕ್ರಮದ ಪರಿಣಾಮ ಶ್ರೀಲಂಕಾದ ಯಾಲಾ ನ್ಯಾಷನಲ್ ಪಾರ್ಕ್ ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.
ರಾಜ್ಯದಲ್ಲಿ ಬಂಡೀಪುರ, ನಾಗರಹೊಳೆ, ಭದ್ರಾ ಅಭಯಾರಣ್ಯ, ದಾಂಡೇಲಿ, ಬಿಳಿಗಿರಿ ರಂಗನಾಥ ಬೆಟ್ಟ, ಕೊಳ್ಳೇಗಾಲ ಅರಣ್ಯ ಪ್ರದೇಶದಲ್ಲಿ ಹುಲಿ ಸಂರಕ್ಷಣೆ ಮಾಡಲಾಗುತ್ತಿದೆ. ಸುಮಾರು 200 ಕ್ಕೂ ಅಧಿಕ ಹುಲಿಗಳನ್ನು ಅದೃಷ್ಟವಿದ್ದವರು ಕಾಣಬಹುದಾಗಿದೆ.
ರಾಜ್ಯದ ಬೊಕ್ಕಸಕ್ಕೆ ವಾರ್ಷಿಕವಾಗಿ ಕೋಟಿಗಟ್ಟಲೆ ಹಣ ತಂದು ಕೊಡುವ ಅರಣ್ಯ ಪ್ರವಾಸೋದ್ಯಮಕ್ಕೆ ಬ್ರೇಕ್ ಹಾಕಿದರೆ ಪ್ರಾಣಿಗಳಿಗೆ ಒಳಿತಾದರೂ ಪ್ರವಾಸೋದ್ಯಮಕ್ಕೆ ನಷ್ಟ ಎನ್ನಲಾಗಿದೆ.