ಭ್ರಷ್ಟಾಚಾರ ವಿರೋಧಿಸಿದ್ದಕ್ಕೆ ಕಾರ್ಟೂನಿಸ್ಟ್ ಬಂಧನ
25 ವರ್ಷದ ಫ್ರೀ ಲ್ಯಾನ್ಸ್ ವ್ಯಂಗ್ಯ ಚಿತ್ರಕಾರ ಆಸೀಮ್ ತ್ರಿವೇದಿ ಅವರು ಸಂಸತ್ತು ರಾಷ್ಟ್ರೀಯ ಮೂತ್ರಾಲಯವಾಗಿದೆ ಎಂದು ಶೀರ್ಷಿಕೆಯೊಂದಿಗೆ ಕಾರ್ಟೂನ್ ರಚಿಸಿದ್ದರು. ಕಾರ್ಟೂನ್ ಬರೆದ ತಪ್ಪಿಗೆ ತ್ರಿವೇದಿ ಮೇಲೆ ರಾಜ್ಯದ್ರೋಹ ಪ್ರಕರಣ(IPC 124-A) ದಾಖಲಾಗಿತ್ತು. ಶನಿವಾರ ಸಂಜೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸ್ ಠಾಣೆಗೆ ಖುದ್ದು ಹಾಜರಾಗಿ ಶರಣಾಗಿದ್ದರು.
ಐಟಿ ಕಾಯ್ದೆ ಹಅಗೂ 1971ರ ರಾಷ್ಟ್ರೀಯ ಲಾಂಛನ ಕಾಯ್ದೆ ಅನ್ವಯ ಕೂಡಾ ಪ್ರಕರಣಗಳನ್ನು ದಾಖಲಿಸಲಾಗಿದೆ. ಡಿಸೆಂಬರ್ 2011ರಲ್ಲಿ ಇಲ್ಲಿನ ಎಂಎಂಆರ್ ಡಿಎ ಮೈದಾನದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಆಸೀಮ್ ತ್ರಿವೇದಿ ತಮ್ಮ ಈ ವಿವಾದಿತ ಕಾರ್ಟೂನ್ ಗಳನ್ನು ಪ್ರದರ್ಶಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಭ್ರಷ್ಟಾಚಾರ ವಿರೋಧಿ ಅಣ್ಣಾ ಹಜಾರೆ ಪ್ರತಿಭಟನೆಗಳಲ್ಲೂ ತ್ರಿವೇದಿ ಕಾರ್ಟೂನ್ ಗಳನ್ನು ಯಥೇಚ್ಛವಾಗಿ ಬಳಸಿಕೊಳ್ಳಲಾಗಿತ್ತು. ತ್ರಿವರ್ಣ ಧ್ವಜಧಾರಿ ಭಾರತ ಮಾತೆಯನ್ನು ರಾಜಕಾರಣಿಗಳು ಅಧಿಕಾರಿಗಳು ಸಾಮೂಹಿಕವಾಗಿ ಹಿಂಸಿಸುವ ಚಿತ್ರ, ಅಶೋಕ ಚಕ್ರದಲ್ಲಿ ಸಿಂಹಗಳ ಬದಲಿಗೆ ನರಿಗಳ ಚಿತ್ರ ಹಾಕಿ ಸತ್ಯಮೇವ ಜಯತೆ ವಾಕ್ಯದ ಬದಲು ಭ್ರಷ್ಚಮೇವ ಜಯತೆ ಎಂದು ಇನ್ನೊಂದು ಕಾರ್ಟೂನ್ ರಚಿಸಿದ್ದರು ಇವು ವಿವಾದಕ್ಕೆ ಕಾರಣವಾಗಿತ್ತು.
ಯುಎಸ್ ಮೂಲದ ಕಾರ್ಟೂನಿಸ್ಟ್ ಜಾಲದಿಂದ ಪ್ರಸಕ್ತ ವರ್ಷದ ಕಾರ್ಟೂನಿಸ್ಟ್ ಪ್ರಶಸ್ತಿ ಪಡೆದಿರುವ ತ್ರಿವೇದಿ ಸದಾ ಕಾಲ ಭ್ರಷ್ಟ ಸಚಿವರು, ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಚಿತ್ರಗಳನ್ನು ರಚಿಸಿದ್ದಾರೆ. ಆದರೆ, ಅವರು ರಾಷ್ಟ್ರೀಯ ಲಾಂಛನ, ಚಿನ್ಹೆ ಹಾಗೂ ಸಂಪತ್ತುಗಳನ್ನು ಬಳಸಿ ಅಣಕವಾಡಿರುವುದು ರಾಜ್ಯದ್ರೋಹಕ್ಕೆ ಸಮಾನವಾಗಿದೆ ಎಂದು ದೂರು ನೀಡಲಾಗಿದೆ.
ಸದ್ಯಕ್ಕೆ ತ್ರಿವೇದಿ ಅವರ ವೆಬ್ ಸೈಟ್ ಸ್ಥಗಿತಗೊಂಡಿದೆ. ಸಾಮಾಜಿಕ ಜಾಲ ತಾಣವಾದ ಫೇಸ್ ಬುಕ್ ಹಾಗೂ ಟ್ವಿಟರ್ ನಲ್ಲಿ ಅವರ ಕಾರ್ಟೂನ್ ಗಳು ಲಭ್ಯವಿದ್ದು, ಸಾರ್ವಜನಿಕರ ಬೆಂಬಲ ವ್ಯಂಗ್ಯಚಿತ್ರಕಾರನ ಪರವಾಗೇ ಇದೆ.