ಶಿವಕಾಶಿ ಪಟಾಕಿ ಕಾರ್ಖಾನೆ ದುರಂತ: 45 ಸಾವು
ಪಟಾಕಿಗೆ ಹೆಸರುವಾಸಿಯಾಗಿರುವ ಶಿವಕಾಶಿಯ ಮುಡಲಿಪಟ್ಟಿ ಬಳಿ ಈ ದುರ್ಘಟನೆ ಸಂಭವಿಸಿದೆ. ಇಲ್ಲಿನ ಕಾರ್ಖಾನೆ ಪ್ರದೇಶದಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಇದ್ದಾರೆ ಎಂದು ತಿಳಿದುಬಂದಿದೆ. ಮೊದಲಿಗೆ ಓಂ ಶಕ್ತಿ ಕ್ರಾಕರ್ಸ್ ಎನ್ನುವ ಕಾರ್ಖಾನೆಗೆ ಬೆಂಕಿ ಬಿದ್ದಿದ್ದು ನಂತರ ಹತ್ತಿರ ಗೋಡೌನ್ ಗಳಿಗೆ ಬೆಂಕಿ ಹತ್ತಿಕೊಂಡಿದೆ.
ಬಾಲ ಕಾರ್ಮಿಕರೇ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಮಂದಿ ಬಾಲ ಕಾರ್ಮಿಕರು ಕಾರ್ಖಾನೆಯೊಳಗೆ ಸಿಲುಕಿರುವ ಸಾಧ್ಯತೆಗಳಿವೆ. ದೀಪಾವಳಿ ಹತ್ತಿರ ಬರುತ್ತಿರುವ ಕಾರಣ ಪಟಾಕಿ ಕಾರ್ಖಾನೆಯಲ್ಲಿ ತ್ವರಿತವಾಗಿ ಕೆಲಸ ಸಾಗುತ್ತಿತ್ತು. ಇದಕ್ಕಾಗಿ ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ.
ಆದರೆ ಇದುವರೆಗೆ ಬೆಂಕಿ ಬಿದ್ದ ಕಾರಣ ತಿಳಿದುಬಂದಿಲ್ಲ. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಶೇ. 75ರಷ್ಟು ಬೆಂಕಿ ಹತೋಟಿಗೆ ಬಂದಿದೆ ಎಂದು ಶಿವಕಾಶಿಯ ಎಸ್ ಪಿ ನಜ್ಮುಲ್ ಹುಡಾ ತಿಳಿಸಿದ್ದಾರೆ.
ಘಟನಾ ಸ್ಥಳದಿಂದ ಇದುವರೆವಿಗೂ ಸುಮಾರು 30 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪಟಾಕಿ ಕಾರ್ಖಾನೆಯೊಳಗೆ ಅಪಾರ ಪ್ರಮಾಣದ ಪಟಾಕಿ, ಸ್ಫೋಟಕಗಳು ಇರುವ ಪರಿಣಾಮ ಬೆಂಕಿ ನಂದಿಸಲು ತುಂಬಾ ಕಷ್ಟವಾಗುತ್ತಿದೆ. ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಬೆಂಕಿ ಅನಾಹುತದ ಚಿತ್ರೀಕರಣ ನಡೆಸಲು ಮುನ್ನುಗ್ಗುತ್ತಿದ್ದ ಜೀ ಟಿವಿ ವರದಿಗಾರ ವೈದಿ ಅವರಿಗೂ ತೀವ್ರ ಗಾಯಗಳಾಗಿದೆ. ಗಾಯಗೊಂಡವರನ್ನು ವಿರುಧುನಗರ್, ಶಿವಕಾಶಿ ಮತ್ತು ಮದುರೈ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸುಮಾರು 10 ಅಗ್ನಿಶಾಮಕದಳ ಹಾಗೂ 50ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಘಟನಾ ಸ್ಥಳದಿಂದ ಸಾರ್ವಜನಿಕರು ಹಾಗೂ ಇತರೆ ಕಾರ್ಖಾನೆ ಸಿಬ್ಬಂದಿಗಳನ್ನು ದೂರ ಕಳುಹಿಸಲಾಗಿದೆ.
ಸುಮಾರು 60ಕ್ಕೂ ಅಧಿಕ ರಾಸಾಯನಿಕ ಶೇಖರಣಾ ಕೋಣೆಗಳು ಹಾಗೂ ಎರಡು ಗೋಡೌನ್ ಗಳಲ್ಲಿ ಪಟಾಕಿ ತಯಾರಿಸಲು ಬೇಕಾದ ಕಚ್ಚಾವಸ್ತುಗಳನ್ನು ಇರಿಸಿದ್ದ ಘಟಕಕ್ಕೆ ಬೆಂಕಿ ಬಿದ್ದಿದೆ.
ಘಟನೆ ಬಗ್ಗೆ ಮುಖ್ಯಮಂತ್ರಿ ಜಯಲಲಿತಾ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ದುರಂತದ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಗುವುದು ಎಂದು ಜಯಲಲಿತಾ ಹೇಳಿದ್ದಾರೆ.
ಬೆಂಕಿ ಅನಾಹುತದಲ್ಲಿ ಮೃತಪಟ್ಟವರ ಸಂಬಂಧಿಕರಿಗೆ 2 ಲಕ್ಷ ರು ಹಾಗೂ ಗಾಯಗೊಂಡವರಿಗೆ 25 ಸಾವಿರ ರು ಪರಿಹಾರವನ್ನು ತಮಿಳುನಾಡು ಸರ್ಕಾರ ಘೋಷಿಸಿದೆ.