ಭದ್ರಾ ಮೇಲ್ದಂಡೆಯಲ್ಲಿ ಬಿಎಸ್ವೈ ಅಕ್ರಮವೆಸಗಿಲ್ಲ: ಲೋಕಾ
ಇದರಿಂದ ಅತ್ತ ಹೈಕೋರ್ಟಿನಲ್ಲೊಂದು ತೀರ್ಪನ್ನು ತಮ್ಮ ಪರವಾಗಿಸಿಕೊಂಡು ಬೆಂಗಳೂರು ಬಿಟ್ಟು ಹೊರಟ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಬರ ಪ್ರವಾಸದ ಮೊದಲ ದಿನವೇ ಲೋಕಾಯುಕ್ತ ಕೋರ್ಟ್ ಅಂಗಳದಲ್ಲಿ ಮತ್ತೊಂದು ಜಯ ಸಿಕ್ಕಿದಂತಾಗಿದೆ.
ಭದ್ರಾ ಮೇಲ್ದಂಡೆ ಯೋಜನೆ ಅಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಪಾತ್ರವೇನೂ ಇಲ್ಲ ಎಂದು ಸಾಬೀತುಪಡಿಸುವ ಹೆಚ್ಚುವರಿ ಬಿ ರಿಪೋರ್ಟ್ ಅನ್ನು ಸಲ್ಲಿಸಲಾಗಿದೆ. ಕೋರ್ಟ್ ಈ ಬಗ್ಗೆ ಗುರುವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಜೆಡಿಎಸ್ ವಕ್ತಾರ ವೈಎಸ್ ವಿ ದತ್ತಾ ಅವರು ಸಲ್ಲಿಸಿದ್ದ ದೂರಿನಂತೆ ಯಡಿಯೂರಪ್ಪ ಅವರ ವಿರುದ್ಧದ ಆರೋಪ ನಿರೂಪಿಸಲು ಯಾವುದೇ ಸಾಕ್ಷ್ಯವಿಲ್ಲವೆಂದು ಲೋಕಾಯುಕ್ತ ಪೊಲೀಸರು ಕಳೆದ ಡಿಸೆಂಬರಿನಲ್ಲಿಯೇ ಹೇಳಿದ್ದರು.
ತನಿಖಾ ಪ್ರಗತಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾ ಸುಧೀಂದ್ರರಾವ್ ಅವರು, 'ಲೋಕಾಯುಕ್ತ ಎಸ್ ಪಿ ಅವರು ಪೂರ್ವಾಗ್ರಹ ಪೀಡಿತರಾಗಿ ವರದಿ ನೀಡಿದ್ದಾರೆ. ಹಾಗಾಗಿ ಈ ವರದಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಈ ವರದಿ ಆಧಾರಿಸಿ ಯಡಿಯೂರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಲು ಕಷ್ಟ. ಪ್ರಕರಣದ ಬಗ್ಗೆ ಮರು ತನಿಖೆ ನಡೆಸಿ ಹೊಸದಾಗಿ ಬಿ ರಿಪೋರ್ಟ್ ಸಲ್ಲಿಸುವಂತೆ ಆದೇಶಿಸಿದ್ದರು.
ಲೋಕಾಯುಕ್ತದ ಡೆಪ್ಯುಟಿ ಪೊಲೀಸ್ ಸೂಪರಿಂಟೆಂಡೆಂಟ್ ಗಿರೀಶ್ ಅವರು ಜನವರಿಯಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟನ್ನು ಸಮರ್ಥಿಸಿಕೊಂಡು 250 ಪುಟಗಳ ಮತ್ತೊಂದು ವರದಿಯನ್ನು ನಿನ್ನೆ ಸಲ್ಲಿಸಿದ್ದಾರೆ. ಈ ಮಧ್ಯೆ, ಡೆಪ್ಯುಟಿ ಪೊಲೀಸ್ ಸೂಪರಿಂಟೆಂಡೆಂಟ್ ಗಿರೀಶ್ ಅವರು ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ಬಡ್ತಿ ಪಡೆದಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಧಿಕ ಮೊತ್ತದ ಬಿಡ್ ಸಲ್ಲಿಸಿದ್ದ ಕಂಪನಿಗೆ (RNS Infrastructure) ಟೆಂಡರ್ ಅನುಮೋದಿಸುವ ಮುನ್ನ ಆ ಕಂಪನಿಯಿಂದ ಯಡಿಯೂರಪ್ಪ ಕುಟುಂಬದವರ ಕಂಪನಿಗೆ (Dhavalgiri Properties and Sahyadri Healthcare) ಲಂಚ ಸಮದಾಯವಾಗಿದೆ ಎಂಬುದು ಪ್ರಕರಣದ ಪ್ರಮುಖ ದೂರಾಗಿದೆ.
ಆದರೆ ತಜ್ಞತರ ಸಮಿತಿ ನೀಡಿದ ಸಲಹೆಯಂತೆ ಯಡಿಯೂರಪ್ಪ ಟೆಂಡರ್ ಗೆ ಅಂಕಿತ ಹಾಕಿದ್ದಾರೆ ಎಂಬುದು ತನಿಖೆಯಿಂದ ರುಜುವಾತಾಗಿದೆ. ಇಡೀ ಟೆಂಡರ್ ಪ್ರಕ್ರಿಯೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಲಾಗಿದೆ ಎಂದು ಲೋಕಾಯುಕ್ತ ಮೂಲಗಳು ದೃಢಪಡಿಸಿವೆ.