ಸಿಕ್ಕಿಬಿದ್ದ ಪಾಶಾ ಕಳಿಸಿದ 20 ಸಾವಿರ ಭೀತಿಯ ಸಂದೇಶ
ರಂಜಾನ್ ಒಳಗಡೆ ಬೆಂಗಳೂರು ತೊರೆಯದಿದ್ದರೆ ಹತ್ಯೆ ಮಾಡುವುದಾಗಿ ಎಸ್ಎಮ್ಎಸ್ ಮತ್ತು ಎಮ್ಎಮ್ಎಸ್ಗಳನ್ನು ಕಳಿಸಿದ ಮೂವರನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದು, ಅವರಲ್ಲಿ ಮೊಬೈಲ್ ರಿಪೇರಿ ಮಾಡುವ ಅನೀಸ್ ಪಾಶಾ ಎಂಬಾತ ವಿಭಿನ್ನ ಮೊಬೈಲ್ ಮತ್ತು ಬೇರೆಬೇರೆ ಸಿಮ್ ಬಳಸಿ 20 ಸಾವಿರ ಎಸ್ಎಮ್ಎಸ್ ಕಳಿಸಿದ್ದಾನೆ.
ಅನೀಸ್ ಪಾಶಾ ನಿಖರವಾಗಿ ಎಷ್ಟು ಜನರಿಗೆ ಎಂಥ ಮೆಸೇಜ್ ಕಳಿಸಿದ್ದಾನೆ ಎಂಬ ವಿವರ ಪಡೆಯಲು ಬೆಂಗಳೂರು ಪೊಲೀಸರು ಸೈಬರ್ ಕ್ರೈಮ್ಸ್ ಸೆಲ್ನಲ್ಲಿರುವ ಸೈಬರ್ ಫೋರೆನ್ಸಿಕ್ ಲ್ಯಾಬ್ ಸಹಾಯ ಪಡೆಯಲಿದೆ. ಅನೀಸ್ ವಿರುದ್ಧ ಭೀತಿಯ ಎಸ್ಎಮ್ಎಸ್ ಬಿತ್ತರಿಸಿದ ಮತ್ತು ಎಮ್ಎಮ್ಎಸ್ ವಿಡಿಯೋ ಕ್ಲಿಪ್ಪಿಂಗ್ಗಳನ್ನು ನೆಟ್ ಮೂಲಕ ಹಂಚಿದ ಆರೋಪವನ್ನು ಹೊರಿಸಲಾಗಿದೆ.
ಅನೀಸ್ ಪಾಶಾ ಅತ್ಯಂತ ನಿಪುಣ ಮೊಬೈಲ್ ರಿಪೇರಿ ಮಾಡುವವನಾಗಿದ್ದು, ಹಿಂದೆ ಸೈಬರ್ ಅಪರಾಧಗಳ ತನಿಖೆ ನಡೆಸುವಾಗ ಮೊಬೈಲ್ನಲ್ಲಿ ಸಂಗ್ರಹಿತವಾದ ದತ್ತಾಂಶವನ್ನು ಪಡೆಯಲು ಪೊಲೀಸರೇ ಅನೀಸನ ಸಹಾಯವನ್ನು ಪಡೆಯುತ್ತಿದ್ದರು. ಹೀಗಿರುವ ಅನೀಸ್ ತನ್ನ ನೈಪುಣ್ಯವನ್ನು ದುರುಪಯೋಗಪಡಿಸಿಕೊಂಡು ಪೊಲೀಸರ ಅತಿಥಿಯಾಗಿದ್ದಾನೆ.
ಅನೀಸ್ ಪಾಶಾನ ಜೊತೆಗೆ ಬೆಂಗಳೂರಿನ ನಿವಾಸಿಗಳಾದ ಮತ್ತು ಆತನ ಸಹಾಯಕರಾದ ತಹಸೀನ್ ನವಾಜ್ (32) ಮತ್ತು ಶಾಹೀದ್ ಸಲ್ಮಾನ್ ಖಾನ್ (22) ಅವರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮೂವರು ಅಸ್ಸಾಂ ಯುವಕರಿಗೆ ಮಾತ್ರವಲ್ಲ ಮುಸ್ಲಿಂ ಜನಾಂಗಕ್ಕೂ ಅಸ್ಸಾಂ ಯುವಕರ ವಿರುದ್ಧ ರೊಚ್ಚಿಗೇಳುವಂತೆ ಸಂದೇಶ ಕಳಿಸಿರುವ ಆರೋಪ ಹೊತ್ತಿದ್ದಾರೆ.
ಅನೀಸ್ ಪಾಶಾನಿಂದ ಎಲ್ಲ ಹಾರ್ಡ್ ಡಿಸ್ಕ್, ಮೊಬೈಲು, ಸಿಮ್ ಮತ್ತಿತರ ಗ್ಯಾಡ್ಜೆಟ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅವನ್ನು ಸೈಬರ್ ಫೋರೆನ್ಸಿಕ್ ಲ್ಯಾಬೊರೇಟರಿಗೆ ಕಳುಹಿಸಲಾಗಿದೆ. ಆದರೆ, ಅನೀಸನಿಗೂ ಈ ಸಂದೇಶಗಳನ್ನು ಕಳುಹಿಸಿದ್ದ ಮತ್ತೊರ್ವನನ್ನು ಪೊಲೀಸರು ಹುಡುಕಾಡುತ್ತಿದ್ದಾರೆ. ಆತನೂ ಸಿಕ್ಕರೆ, ಇವರ ಸಂಪೂರ್ಣ ಸಂಚು ಬಯಲಿಗೆ ಬರಲಿದೆ ಎಂದು ಪೊಲೀಸರ ಅಭಿಪ್ರಾಯ.
ಲೇಖನಕ್ಕೆ ಓದುಗರ ಪ್ರತಿಕ್ರಿಯೆ : ಕಾಂಗ್ರೆಸ್ ನಾಯಕರಾದ ಬಿ. ಕೆ. ಹರಿಪ್ರಸಾದ್ ಮತ್ತು ಪರಮೇಶ್ವರ ಅವರು RSS ನವರೆ ಇದಕೆಲ್ಲ ಕಾರಣ ಅಂತ ಹೇಳುತ್ತಿದ್ದಾರೆ. ಇಂಥ ಶತ ಮೂರ್ಖರಿಂದಲೇ ನಮ್ಮ ದೇಶ ಹಾಳಗಿರೋದು. (ವಿಜಯೇಂದ್ರ)