ಮಂಗಳೂರು ದಾಳಿ ಬಾಧಿತರ ಪೂರ್ವಾಪರ ಸಂಶಯ
ದಾಳಿಗೊಳಗಾದ ವಿವಾದಿತ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ''ಅನಧಿಕೃತ''ವಾಗಿರುವ ಹಿನ್ನೆಲೆಯಲ್ಲಿ ಈ ನೋಟಿಸ್ ಜಾರಿ ಮಾಡಲಾಗಿದೆ. ಹೋಂ ಸ್ಟೇ ಬಾಗಿಲ ಮೇಲೆ ಈ ಎರಡೂ ಇಲಾಖೆಗಳ ಪರವಾಗಿ ಗುರುವಾರ ಬೆಳಗ್ಗೆ ಪ್ರತ್ಯೇಕವಾಗಿ ನೋಟಿಸ್ ಅಂಟಿಸಲಾಗಿದೆ.
ಮಂಗಳೂರು ನಗರ ಪಾಲಿಕೆ ಅಂಟಿಸಿರುವ ನೋಟಿಸಿನಲ್ಲಿ '24 ಗಂಟೆಗಳಲ್ಲಿ ಉತ್ತರ ನೀಡುವಂತೆ' ಮಾಲೀಕರಿಗೆ ತಾಕೀತು ಮಾಡಲಾಗಿದೆ. ಆದರೆ ಪ್ರವಾಸೋದ್ಯಮ ಇಲಾಖೆಯ ಶೋ ಕಾಸ್ ನೋಟಿಸಿನಲ್ಲಿ '7 ದಿನಗಳಲ್ಲಿ ವಿವರಣೆ ನೀಡುವಂತೆ' ಮಾಲೀಕರಿಗೆ ಸೂಚಿಸಲಾಗಿದೆ.
ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಏಕೆ ಮುಚ್ಚಬಾರದು? : ಅಧಿಕೃತ ಪರವಾನಿಗಿ ಇಲ್ಲದೆ ವಾಣಿಜ್ಯ ಉದ್ದೇಶಕ್ಕಾಗಿ ವಸತಿ ಜಾಗವನ್ನು ಬಳಸಿಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಂಗಳೂರು ನಗರ ಪಾಲಿಕೆಯ (MCC) ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಲಾಗಿದ್ದು, ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಅನ್ನು ಏಕೆ ಮುಚ್ಚಬಾರದು ಎಂದೂ ಕೇಳಲಾಗಿದೆ.
ಮಂಗಳೂರು ದಾಳಿ ಬಾಧಿತರ ಪೂರ್ವಾಪರ ಸಂಶಯಾತ್ಮಕವಾಗಿದೆ: ಮತ್ತೊಂದು ಮಹತ್ವದ ವಿದ್ಯಮಾನದಲ್ಲಿ ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥೆ ಸಿ ಮಂಜುಳಾ ಅವರು ಕಳೆದ ಶನಿವಾರ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇನಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಇಬ್ಬರು ಬಾಧಿತ ಯುವಕರ ಪೂರ್ವಾಪರದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಅಲ್ಲಿ ಯುವತಿಯರ ಅಕ್ರಮ ಸಾಗಣೆ ಜಾಲವೂ ನಡೆದಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಘಟನೆಯಲ್ಲಿ ಬಾಧಿತ ಇಬ್ಬರು ಯುವತಿಯರು ಮತ್ತು ಅವರ ಪೋಷಕರೊಂದಿಗೆ ಮಾತನಾಡಿದ್ದೇನೆ. ಅವರು ಹೇಳುವ ಪ್ರಕಾರ ಆ ಯುವತಿಯರಿಗೆ ಅಲ್ಲಿದ್ದ ಇಬ್ಬರು ಯುವತಿಯರು ಯಾರು ಎಂಬುದೇ ಗೊತ್ತಿರಲಿಲ್ಲ. ಸ್ನೇಹಿತೆಯೊಬ್ಬಳ ಆಹ್ವಾನದ ಮೇಲೆ ಅಲ್ಲಿಗೆ ತೆರಳಿದ್ದಾಗಿ ಆ ಯುವತಿಯರು ಹೇಳಿದರು.
ಆ ಇಬ್ಬರೂ ಯುವತಿಯರು ಕಾಲೇಜು ಸಮವಸ್ತ್ರದಲ್ಲಿ ವಿವಾದಿತ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ರೆಸಾರ್ಟಿಗೆ ತೆರಳಿದ್ದಾರೆ. ಅಲ್ಲಿ ಸಮವಸ್ತ್ರ ತೆಗೆದು ರೆಸಾರ್ಟಿನಲ್ಲಿದ್ದ ಪಾರ್ಟಿ ಬಟ್ಟೆ ಹಾಕಿಕೊಂಡಿದ್ದಾರೆ. ಆದ್ದರಿಂದ ಗುರುದತ್ ಮತ್ತು ವಿಜಯ್ ಕುಮಾರ್ ಎಂಬ ಯುವಕರ ಹಿನ್ನೆಲೆ ಬಗ್ಗೆ ತನಿಖೆ ನಡೆಯಬೇಕಿದೆ. ಗುರುದತ್ ತಾಯಿ 2009ರಲ್ಲಿ ಯುವತಿಯರ ಅಕ್ರಮ ಮಾರಾಟ ಮತ್ತು ಸಾಗಣೆ ಜಾಲದಲ್ಲಿ ಭಾಗಿಯಾಗಿದ್ದರು ಎಂದೂ ಆಯೋಗದ ಮುಖ್ಯಸ್ಥೆ ಮಂಜುಳಾ ತಿಳಿಸಿದ್ದಾರೆ.
'ಇನ್ನು ಸ್ಥಳೀಯ ಪೊಲೀಸರ ಬಗ್ಗೆ ಹೇಳಬೇಕೆಂದರೆ 8 ತಿಂಗಳ ಹಿಂದೆಯೇ ಈ ರೆಸಾರ್ಟಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯ ನಾಗರಿಕರು ದೂರಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಆಗ ಕ್ರಮ ಕೈಗೊಂಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ' ಎಂದೂ ಮಂಜುಳಾ ಹೇಳಿದರು.
ಹಾಗೆಯೇ, ಹಲ್ಲೆ ನಡೆಸಿದ ಯುವಕರ ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ಅವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದೂ ಅವರು ಆಗ್ರಹಿಸಿದರು.