ಶ್ರೀಕ್ಷೇತ್ರ ಧರ್ಮಸ್ಥಳ ಹೆಗ್ಗಡೆಗೆ ಲಂಡನ್ ಚಿನ್ನದ ಪದಕ
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಚಿನ್ನದಂತಹ ಸೇವೆಸಲ್ಲಿತ್ತಿರುವ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಚಿನ್ನದ ಪ್ರಶಸ್ತಿಗೆ (Ashden 2012 Gold Award) ಭಾಜನರಾಗಿದ್ದಾರೆ. ತನ್ನಿಮಿತ್ತ, ಲಂಡನ್ ಗೆ ತೆರಳಿ, ಪ್ರಶಸ್ತಿ ಸ್ವೀಕರಿಸಿ, ಸ್ವಕ್ಷೇತ್ರಕ್ಕೆ ವಾಪಸಾದ ಅವರನ್ನು ಭಕ್ತಾದಿಗಳು ಶ್ರೀ ಕ್ಷೇತ್ರದಲ್ಲಿ ಮೊನ್ನೆ ಆತ್ಮೀಯವಾಗಿ ಬರಮಾಡಿಕೊಂಡರು.
ತತ್ಸಂಬಂದ ಜೂನ್ 7ರಂದು ಅಮೃತವರ್ಷಿಣಿ ಕಲಾಭವನದಲ್ಲಿ ಅದ್ದೂರಿ ಸಮಾರಂಭ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು 'ಸಧ್ಯೋಭವಿಷ್ಯತ್ತಿನಲ್ಲಿ ಪರ್ಯಾಯ ಇಂಧನ ಮೂಲಗಳತ್ತ ಗಮನಹರಿಸುವುದು ಅತ್ಯವಶ್ಯವಾಗುತ್ತದೆ. Ashden 2012 Gold Award ಪ್ರಶಸ್ತಿ ಈ ನಿಟ್ಟಿನಲ್ಲಿ ಯೋಚಿಸುವಂತೆ ಮಾಡಿದೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ' ಎಂದರು.
ಸಭೆ ಆರಂಭವಾಗುವುದಕ್ಕೂ ಮುನ್ನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಅಲಂಕೃತ ಆನೆಗಳು, ಕುದುರೆಗಳು, ಬುಲೆಟ್ ಕಾರುಗಳು, ಸ್ಕೌಟ್ಸ್, ಸ್ಕೂಲ್ ಬ್ಯಾಂಡ್, ಮೈಸೂರು ಬ್ಯಾಂಡ್ ಸೆಟ್ ಮತ್ತು ಪಾಶ್ವಿಮಾತ್ಯ ಶೈಲಿಯಲ್ಲಿ ಕಂಗೊಳಿಸುತ್ತಿದ್ದ ಪದಾತಿದಳದ ಸಿಬ್ಬಂದಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮುಖ್ಯದ್ವಾರದಿಂದ ಅದ್ದೂರಿ ಮೆರವಣಿಗೆಯಲ್ಲಿ ಸ್ವಾಗತಿಸಿದರು. ಸೌರದೀಪಗಳು ಮತ್ತು LED ದೀಪಗಳು ಮೆರವಣಿಗೆಯನ್ನು ಮತ್ತಷ್ಟು ಪ್ರಕಾಶಮಾನವಾಗಿದ್ದು ವಿಶೇಷವಾಗಿತ್ತು.
'ಸೌರದೀಪ ಮತ್ತು ಗೋಬರ್ ಗ್ಯಾಸ್ ಘಟಕಗಳು ನಿರ್ಣಾಯಕ ಪಾತ್ರವಹಿಸಲಿವೆ. ಮುಂದಿನ ಮೂರು ವರ್ಷಗಳಲ್ಲಿ ಇನ್ನೂ 15,000 ಗೋಬರ್ ಗ್ಯಾಸ್ ಘಟಕಗಳನ್ನು ನಾನಾ ಮನೆಗಳಲ್ಲಿ ಸ್ಥಾಪಿಸಲಾಗುವುದು. ಹಾಗೆಯೇ, 15,000 ಸೌರದೀಪಗಳನ್ನೂ ವಿತರಿಸಲಾಗುವುದು' ಎಂದೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಿಳಿಸಿದರು.
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಧರ್ಮಪತ್ನಿ ಹೇಮಾವತಿ ಹೆಗ್ಗಡೆ ಮತ್ತು SDM ಶೈಕ್ಷಣಿಕ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.